
ಹುಬ್ಬಳ್ಳಿ: ಮೇಲ್ಸೇತುವೆ ಕಾಮಗಾರಿ ತ್ವರಿತಗೊಳಿಸಲು ಹಾಗೂ ಮುಂಜಾಗ್ರತಾ ಕ್ರಮವಾಗಿ ಹೊಸೂರು ವೃತ್ತವನ್ನು ಎರಡು ತಿಂಗಳು ಭಾಗಶಃ ಬಂದ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದ್ದು, ವಾಹನ ಸಂಚಾರಕ್ಕೆ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಮಾಡಲು ಮುಂದಾಗಿದೆ.
ಶಾಸಕ ಮಹೇಶ ಟೆಂಗಿನಕಾಯಿ, ಜಿಲ್ಲಾಧಿಕಾರಿ ದಿವ್ಯಪ್ರಭು, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಹಾಗೂ ವಿವಿಧ ಇಲಾಖೆಗಳ ನೇತೃತ್ವದಲ್ಲಿ ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಯಿತು.
‘ವಿದ್ಯಾನಗರದ ಹೊಸೂರು ಬಳಿಯಿರುವ ಬಿಆರ್ಟಿಎಸ್ ಬಸ್ ನಿಲ್ದಾಣವನ್ನು ಶೀಘ್ರ ತೆರವುಗೊಳಿಸಿ, ಮೇಲ್ಸೇತುವೆ ಕಾಮಗಾರಿ ವೇಗ ಹೆಚ್ಚಿಸಬೇಕು. ಬಸ್ ನಿಲ್ದಾಣ ತೆರವು ಮಾಡಿದ ನಂತರ ಪ್ರಯಾಣಿಕರಿಗೆ ಬಸ್ ಹತ್ತಲು ಸಮಸ್ಯೆಯಾಗದಂತೆ, ಪರ್ಯಾಯ ವ್ಯವಸ್ಥೆ ಮಾಡಬೇಕು. ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.
‘ಮೇಲ್ಸೇತುವೆ ಕಾಮಗಾರಿ ಶೇ 70ರಷ್ಟು ಮುಗಿದಿದ್ದು, ಗದಗ ರಸ್ತೆಯಲ್ಲಿ ಕಾಮಗಾರಿ ಆರಂಭಿಸಬೇಕಿದೆ. ಕಾಮತ್ ಹೋಟೆಲ್ ಎದುರಿಗೆ ವಿದ್ಯುತ್ ಪರಿವರ್ತಕ ಹಾಗೂ ಪೊಲೀಸ್ ಠಾಣೆ ಕಟ್ಟಡ ಸ್ಥಳಾಂತರವಾದರೆ ಕಾಮಗಾರಿ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ. 2026ರ ಏಪ್ರಿಲ್ ಮೊದಲ ವಾರದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ’ ಎಂದು ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ನಿರ್ವಾಹಕ ಎಂಜಿನಿಯರ್ ಪ್ರದೀಪ ತಿಳಿಸಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ,. ‘ಕಾಮಗಾರಿ ಮುಗಿಯಲು ಇನ್ನೂ ಐದಾರು ತಿಂಗಳು ಬೇಕಿದ್ದು, ದೂಳು ಏಳದಂತೆ ನಿರಂತರವಾಗಿ ನೀರು ಸಿಂಪಡಣೆ ಮಾಡಬೇಕು. ಈಗಾಗಲೇ ₹7 ಕೋಟಿ ವೆಚ್ಚದಲ್ಲಿ ತಾತ್ಕಾಲಿಕವಾಗಿ ಡಾಂಬರ್ ರಸ್ತೆ ನಿರ್ಮಿಸಲು ಪ್ರಸ್ತಾವ ಸಲ್ಲಿಸಲಾಗಿದ್ದು, ಅಗತ್ಯವಿದ್ದರೆ ಅನುಷ್ಠಾನಕ್ಕೆ ತರಲು ಚಿಂತನೆ ನಡೆಸಲಾಗುವುದು’ ಎಂದರು.
ಪೊಲೀಸರ ನೆರವು ಪಡೆಯಿರಿ: ವಿದ್ಯಾನಗರದ ಜೈ ಹನುಮಾನ್ ನಗರದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 128 ಮನೆಗಳ ನಿರ್ಮಾಣಕ್ಕೆ ಕಾರ್ಯಾದೇಶವಾಗಿದ್ದು, ಕೆಲವರು ಮನೆಗಳನ್ನು ಖಾಲಿ ಮಾಡದಿರುವುದು ಸಮಸ್ಯೆಯಾಗಿದೆ ಎಂದು ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಸಭೆಗೆ ತಿಳಿಸಿದರು. ಅಲ್ಲಿದ್ದ 102 ಮನೆಗಳಲ್ಲಿ 80 ಮನೆಗಳು ಮಾತ್ರ ತೆರವು ಆಗಿದೆ ಎಂದರು.
‘ಪೊಲೀಸ್ ಇಲಾಖೆಯ ನೆರವಿನೊಂದಿಗೆ ತಕ್ಷಣ ಅವರನ್ನು ತೆರವುಗೊಳಿಸಿ, ಇನ್ನೆರಡು ದಿನದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಬೇಕು’ ಎಂದು ಮಹೇಶ ಟೆಂಗಿನಕಾಯಿ ತಿಳಿಸಿದರು.
ಮಹಾನಗರ ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ಉಪನಗರ ಪೊಲೀಸ್ ಠಾಣೆ ತೆರವುಗೊಳಿಸುವ ಕುರಿತು ನಾಲ್ಕು ತಿಂಗಳಿನಿಂದ ಪತ್ರ ವ್ಯವಹಾರವೇ ನಡೆಯುತ್ತಿದೆ. ಆ ಕಾರಣಕ್ಕೆ ಕಾಮಗಾರಿ ವಿಳಂಬವಾಗುತ್ತಿರುವುದು ಸರಿಯಲ್ಲ
-ದಿವ್ಯಪ್ರಭು ಜಿಲ್ಲಾಧಿಕಾರಿ
ವಿಜಯಪುರ ರಸ್ತೆಯ ದೇಸಾಯಿ ವೃತ್ತದ ಅಕ್ಕಪಕ್ಕ ಭೂಸ್ವಾಧೀನ ಪ್ರಕ್ರಿಯೆ ನಡೆಯಬೇಕಿದೆ. ಶೀಘ್ರ ಪೂರ್ಣಗೊಳಿಸಿ ಆ ಭಾಗದಲ್ಲಿ ಕಾಮಗಾರಿ ಮುಗಿಸಲಾಗುವುದು
-ಪ್ರದೀಪ ಕಾರ್ನಿರ್ವಾಹಕ ಎಂಜಿನಿಯರ್ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗ
ಪೊಲೀಸ್ ಠಾಣೆ ತೆರವು ಮುಗಿಯದ ಗೊಂದಲ
ಜೂನ್ 30ರ ಒಳಗೆ ಉಪನಗರ ಪೊಲೀಸ್ ಠಾಣೆ ಕಟ್ಟಡದಲ್ಲಿರುವ ಕಚೇರಿಗಳನ್ನು ಸ್ಥಳಾಂತರ ಮಾಡಬೇಕೆಂದು ಸೂಚನೆ ನೀಡಿದ್ದರೂ ಇನ್ನೂ ತೆರವಾಗದಿರುವ ಕುರಿತು ಶಾಸಕ ಮಹೇಶ ಟೆಂಗಿನಕಾಯಿ ಹಾಗೂ ಜಿಲ್ಲಾಧಿಕಾರಿ ದಿವ್ಯಪ್ರಭು ಅಸಮಾಧಾನ ವ್ಯಕ್ತಪಡಿಸಿದರು. ಪೊಲೀಸ್ ಅಧಿಕಾರಿಯನ್ನು ತರಾಟೆ ತೆಗೆದುಕೊಂಡು ಒಂದು ವಾರದಲ್ಲಿ ಎಲ್ಲ ಕಚೇರಿಗಳನ್ನು ಸ್ಥಳಾಂತರಿಸಬೇಕು ಎಂದು ಸೂಚನೆ ನೀಡಿದರು. ‘ಈಗಾಗಲೇ ಉಪನಗರ ಠಾಣೆ ಹಾಗೂ ಕೆಲವು ಕಚೇರಿಗಳು ಸ್ಥಳಾಂತರವಾಗಿದ್ದು ವಾಕಿಟಾಕಿಯ ಟವರ್ ಸ್ಥಳಾಂತರ ನಡೆಯಬೇಕಿದೆ. ಇದಕ್ಕೆ ಟೆಂಡರ್ ಕರೆದಿದ್ದು ಕಮಿಷನರ್ ಜತೆ ಮಾತನಾಡಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಎಸಿಪಿ ವಿರೇಶ ತಿಳಿಸಿದರು.
ಮಾರ್ಗ ಬದಲಾವಣೆ
ನಗರ ಮತ್ತು ಉಪನಗರ ಸಾರಿಗೆ ಬಸ್ ನಿಲ್ದಾಣದಿಂದ (ಹಳೇ ಬಸ್ ನಿಲ್ದಾಣ) ವಾಹನಗಳು ಇಂದಿರಾ ಗಾಜಿನ ಮನೆ ಎದುರಿನ ರಸ್ತೆ ಮೂಲಕ ಕಾರವಾರ ರಸ್ತೆಗೆ ತೆರಳಿ ಗಿರಣಿಚಾಳ ವೃತ್ತದ ಮೂಲಕ ವಾಣಿವಿಲಾಸ ವೃತ್ತಕ್ಕೆ ಬಂದು ಅಲ್ಲಿಂದ ಗೋಕುಲ ರಸ್ತೆ ಮತ್ತು ಹೊಸೂರು ವೃತ್ತದಿಂದ ಧಾರವಾಡಕ್ಕೆ ಸಾಗಲಿವೆ. ಧಾರವಾಡದಿಂದ ಬರುವ ವಾಹನಗಳು ಮೊದಲಿನಂತೆಯೇ ವಿದ್ಯಾನಗರದಿಂದ ಗಾಳಿ ದುರ್ಗಮ್ಮ ದೇವಸ್ಥಾನದ ಎದುರು ಬಂದು ನಗರ ಪ್ರವೇಶಿಸಲಿವೆ. ವಾಣಿ ವಿಲಾಸ ವೃತ್ತದಿಂದ ಹೊಸೂರು ವೃತ್ತದವರೆಗಿನ ಎಂ.ಎಂ. ಜೋಶಿ ಆಸ್ಪತ್ರೆ ಎದುರಿನ ರಸ್ತೆ ಸಂಪೂರ್ಣ ಬಂದ್ ಆಗಲಿದೆ. ಈ ರಸ್ತೆಯ ಎದುರು ತಾತ್ಕಾಲಿಕವಾಗಿ ಬಸ್ ನಿಲುಗಡೆಗೆ ಅವಕಾಶ ಕಲ್ಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.