ADVERTISEMENT

ಹುಬ್ಬಳ್ಳಿ | ಮೀಸಲಾತಿಗೆ ಆಗ್ರಹಿಸಿ ಸವಿತಾ ಸಮಾಜದವರ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2023, 6:17 IST
Last Updated 11 ಡಿಸೆಂಬರ್ 2023, 6:17 IST
   

ಹುಬ್ಬಳ್ಳಿ: ‘ಸವಿತಾ ಸಮಾಜವನ್ನು ಹಿಂದುಳಿದ ವರ್ಗಗಳ ಪ್ರವರ್ಗ 1 ಅಥವಾ 1 ‘ಎ’ಗೆ ಸೇರ್ಪಡೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸವಿತಾ ಸಮಾಜದವರು ಸೋಮವಾರ ಹುಬ್ಬಳ್ಳಿಯಿಂದ ಬೆಳಗಾವಿಯ ಸುವರ್ಣವಿಧಾನಸೌಧಕ್ಕೆ ಪಾದಯಾತ್ರೆ ಮೂಲಕ ತೆರಳಿದರು.

ಹುಬ್ಬಳ್ಳಿಯ ಅರವಿಂದ ನಗರದಲ್ಲಿನ ವೆಂಕಟೇಶ್ವರ ದೇವಸ್ಥಾನದಲ್ಲಿ ಕೊಂಚೂರು ಸವಿತಾಪೀಠದ ಸವಿತಾನಂದನಾಥ ಸ್ವಾಮೀಜಿ ಪಾದಯಾತ್ರೆಗೆ ಚಾಲನೆ ನೀಡಿದರು. 

ಸವಿತಾನಂದನಾಥ ಸ್ವಾಮೀಜಿ‌ ಮಾತನಾಡಿ, ಡಿ. 13ರಂದು ಸುವರ್ಣ ವಿಧಾನಸೌಧ ತಲುಪಿ, 14ರಿಂದ ಅಧಿವೇಶನ ಮುಗಿಯುವವರೆಗೆ ಧರಣಿ ನಡೆಸಲಾಗುವುದು. ನಮ್ಮ ಬೇಡಿಕೆ ಈಡೇರುವವರೆಗೆ ಹಿಂದೆ ಸರಿಯುವುದಿಲ್ಲ ಎಂದರು.

ADVERTISEMENT

‘ಸವಿತಾ ಸಮಾಜಕ್ಕೆ ತಮಿಳುನಾಡು ಹಾಗೂ ತೆಲಂಗಾಣದಲ್ಲಿ ಪ್ರವರ್ಗ 1ರ ಮೀಸಲಾತಿ ಕಲ್ಪಿಸಲಾಗಿದೆ. ಒಟ್ಟು 27 ಉಪಪಂಗಡಗಳ ಪೈಕಿ ಹಡಪದ ಪಂಗಡದವರು ನಮ್ಮೊಂದಿಗಿದ್ದು, ಲಿಂಗಾಯತ ಹಡಪದ ಪಂಗಡದವರೂ ಒಗ್ಗೂಡಬೇಕಿದೆ’ ಎಂದು ಹೇಳಿದರು. 

‘ಕ್ಷೌರಿಕ ವೃತ್ತಿ ನಿಂದನೆ ಹಾಗೂ ದೌರ್ಜನ್ಯ ತಡೆ ಕಾಯ್ದೆ ಜಾರಿಗೊಳಿಸಬೇಕು. ಜಾತಿಗಣತಿ ವರದಿ ಆಧರಿಸಿ ಮೀಸಲಾತಿ ನಿಗದಿಗೊಳಿಸಬೇಕು. ಕ್ಷೌರಿಕ ತರಬೇತಿ ಹಾಗೂ ಡೋಲು ನುಡಿಸುವ ತರಬೇತಿ ಶಾಲೆ ತೆರೆಯಬೇಕು. ಸವಿತಾ ರತ್ನ ಪ್ರಶಸ್ತಿ ನೀಡಬೇಕು’ ಎಂದು ಒತ್ತಾಯಿಸಿದರು. 

ಪಾದಯಾತ್ರೆ ಪ್ರಯುಕ್ತ ಡಿ.11 ಮತ್ತು 12ರಂದು ಹುಬ್ಬಳ್ಳಿಯಲ್ಲಿ ಕ್ಷೌರದಂಗಡಿಗಳು ಬಂದ್‌ ಆಗಲಿವೆ ಎಂದರು.

ಅರವಿಂದನಗರದಿಂದ ಹುಬ್ಬಳ್ಳಿಯ ಚನ್ನಮ್ಮ ವೃತ್ತದವರೆಗೆ ಪಾದಯಾತ್ರೆ ಮೂಲಕ ಬಂದ ಸವಿತಾ ಸಮಾಜದವರು ಚನ್ನಮ್ಮ ವೃತ್ತದಲ್ಲಿ ಸೇರಿ ಘೋಷಣೆ ಕೂಗಿದರು.

ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಾ ಎಂ. ಉಪ್ಪೇರ, ರಾಜ್ಯ ಘಟಕದ ಉಪಾಧ್ಯಕ್ಷ ರಮೇಶ ಶಾಬಾದ್‌, ತಾಲ್ಲೂಕು ಘಟಕದ ಅಧ್ಯಕ್ಷ ರಘುನಾಥ ಎಸ್‌. ನಾರಾಯಣದಾಸ, ಯು.ಕೃಷ್ಣಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.