
ಸಾವು
(ಪ್ರಾತಿನಿಧಿಕ ಚಿತ್ರ)
ಹುಬ್ಬಳ್ಳಿ: ಗಿರವಿಯಿಟ್ಟ ಚಿನ್ನದ ಸರದ ಸಾಲಕ್ಕೆ ಸಂಬಂಧಿಸಿ ಪತಿ–ಪತ್ನಿಯರ ನಡುವೆ ಜಗಳ ನಡೆದಿದ್ದು, ಕೋಪದಿಂದ ಪತಿ, ಪತ್ನಿಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ಸೋಮವಾರ ರಾಮಲಿಂಗೇಶ್ವರ ನಗರದಲ್ಲಿ ನಡೆದಿದೆ.
ಮಾಸಬ್ಬಿ ಶಿಗ್ಗಾವಿ(27) ಮೃತಪಟ್ಟ ಮಹಿಳೆ. ಎದೆ, ಕುತ್ತಿಗೆ, ಹೊಟ್ಟೆ ಭಾಗಕ್ಕೆ ಚಾಕು ಇರಿತವಾಗಿದ್ದು, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕೆಎಂಸಿ–ಆರ್ಐ ಆಸ್ಪತ್ರೆಯ ಶವಾಗಾರಕ್ಕೆ ಮೃತದೇಹ ರವಾನಿಸಲಾಗಿದೆ. ಆರೋಪಿ ಇರ್ಫಾನ್ ಕೃತ್ಯ ಎಸಗಿ ಕೇಶ್ವಾಪುರ ಠಾಣೆಗೆ ತೆರಳಿ ಶರಣಾಗಿದ್ದಾನೆ. ಗೋಕುಲರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಸಬ್ಬಿ ಮತ್ತು ಇರ್ಫಾನ್ ಮೂಲತಃ ಕೇಶ್ವಾಪುರದ ಗಾಂಧಿವಾಡದ ನಿವಾಸಿಗಳು. ಐದು ವರ್ಷದ ಹಿಂದೆ ಅವರ ವಿವಾಹವಾಗಿದ್ದು, ನಾಲ್ಕು ವರ್ಷದ ಮಗ, ಎರಡು ವರ್ಷದ ಮಗಳು ಇದ್ದಾಳೆ. ಒಂದು ತಿಂಗಳಿನಿಂದ ಅವರು ರಾಮಲಿಂಗೇಶ್ವರ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದರು. ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಡಿಸಿಪಿ ಮಹಾನಿಂಗ ನಂದಗಾವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
‘ಬೆಳಿಗ್ಗೆ 11.30ರ ವೇಳೆ ಮಾಸಬ್ಬಿ ಮತ್ತು ಇರ್ಫಾನ್ ಮಧ್ಯೆ ಜಗಳವಾಗಿದ್ದು, ಕೋಪಗೊಂಡ ಇರ್ಫಾನ್ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ತಪ್ಪಿಸಿಕೊಂಡು ಹೊರಬರುವಾಗ ಬಾಗಿಲ ಬಳಿ ಬಿದ್ದು ಮಾಸಬ್ಬಿ ಮೃತಪಟ್ಟಿದ್ದಾರೆ. ಆರೋಪಿಯನ್ನು ಪತ್ತೆ ಹಚ್ಚುವ ವೇಳೆ, ಅವನೇ ಪೊಲೀಸರಿಗೆ ಶರಣಾಗಿದ್ದಾನೆ’ ಎಂದು ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.
‘ಫೈನಾನ್ಸ್ನಲ್ಲಿ ಬಂಗಾರದ ಸರ ಗಿರವಿ ಇಟ್ಟಿದ್ದು, ಅದನ್ನು ಬಿಡಿಸಿಕೊಳ್ಳುವ ವಿಷಯಕ್ಕೆ ಪತಿ–ಪತ್ನಿಯರ ನಡುವೆ ಜಗಳ ನಡೆದಿದೆ ಎನ್ನಲಾಗಿದೆ. ಸರ ಬಿಡಿಸಕೊಂಡು ಬರಲು, ಮಾಸಬ್ಬಿ ಅವರ ಸಹೋದರ ಬೆಳಿಗ್ಗೆ ಬಂದು ₹20 ಸಾವಿರ ಕೊಟ್ಟು ಹೋಗಿದ್ದ. ಇನ್ನಷ್ಟು ಹಣ ಬೇಕು ಎಂದಾಗ ತಂದು ಕೊಡುವುದಾಗಿ ಹೇಳಿದ್ದ. ಅಷ್ಟರ ಒಳಗೆ ಈ ಕೃತ್ಯ ನಡೆದಿದೆ. ಆರೋಪಿ ವಶದಲ್ಲಿದ್ದು, ತನಿಖೆ ನಡೆಯುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.