ADVERTISEMENT

ಗಾಯಗೊಂಡ ಶೃಂಗಚುಂಚು ಹಾರ್ನ್‌ಬಿಲ್‌ಗೆ ಕೃಷಿ ವಿ.ವಿ ಆಸ್ಪತ್ರೆಯಲ್ಲಿ ಶುಶ್ರೂಷೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2018, 12:32 IST
Last Updated 20 ಸೆಪ್ಟೆಂಬರ್ 2018, 12:32 IST
   

ಧಾರವಾಡ: ಶೃಂಗಚುಂಚು ಹಾರ್ನ್‌ಬಿಲ್‌ಗಳ ನಡುವೆ ನಡೆದ ಕಾದಾಟದಲ್ಲಿ ಗಾಯಗೊಂಡ ಒಂದು ಹಕ್ಕಿಗೆ ಶುಶ್ರೂಷೆ ನೀಡಿ ಆರೈಕೆ ಮಾಡಿದ ಮಾಡಿದ ಸಂಗತಿಯೊಂದು ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಪಶು ಆಸ್ಪತ್ರೆಯಲ್ಲಿ ಗುರುವಾರ ನಡೆದಿದೆ.

ದಾಂಡೇಲಿಯ ಹಾರ್ನ್‌ಬಿಲ್ ರೆಸಾರ್ಟ್‌ನಲ್ಲಿ ಎರಡು ಗಂಡು ಡಕ್‌ಬಿಲ್ಡ್‌ ಹಾರ್ನ್‌ಬಿಲ್‌ಗಳ ನಡುವಿನ ಕಾದಾಟದಲ್ಲಿ 6 ಕೆ.ಜಿ. ತೂಗುವ ಹಕ್ಕಿಯೊಂದು ತೀವ್ರವಾಗಿ ಗಾಯಗೊಂಡಿತು. ನಿತ್ರಾಣ ಸ್ಥಿತಿಯಲ್ಲಿದ್ದ ಹಕ್ಕಿಯನ್ನು ರೆಸಾರ್ಟ್‌ನ ಉಮೇಶ್ ಎಂಬುವವರು ತಕ್ಷಣವೇ ಕೃಷಿ ವಿಶ್ವವಿದ್ಯಾಲಯದ ಪಶುವೈದ್ಯ ಡಾ. ಅನಿಲ್ ಪಾಟೀಲ ಅವರ ಬಳಿ ಕರೆತಂದರು.

‘ಹಾರ್ನ್‌ಬಿಲ್‌ ದೇಹಕ್ಕೆ 6ರಿಂದ 7 ಇಂಚುಗಳಷ್ಟು ಇರಿದ ಗಾಯವಾಗಿತ್ತು. ಕಾದಾಟದಲ್ಲಿ ತೀವ್ರವಾಗಿ ಬಳಲಿತ್ತು. ಹೀಗಾಗಿ ಹೊಲಿಗೆ ಹಾಕಲಾಗಿದೆ. ಒಂದಷ್ಟು ಔಷದೋಪಚಾರ ಮಾಡಲಾಗಿದೆ. ಒಂದಷ್ಟು ದಿನ ವಿಶ್ರಾಂತಿ ನಂತರ ಚೇತರಿಸಿಕೊಳ್ಳುವ ವಿಶ್ವಾಸವಿದೆ’ ಎಂದರು ಡಾ. ಪಾಟೀಲ.

ADVERTISEMENT

ಆರು ಕೆ.ಜಿ. ತೂಕದ ಶೃಂಗಚುಂಚ ಹಾರ್ನ್‌ಬಿಲ್‌ ಕೊಕ್ಕು ಸಾಕಷ್ಟು ದೊಡ್ಡದು. ಹೀಗಾಗಿ ಚಿಕಿತ್ಸೆ ನೀಡುವ ಮೊದಲು ಕೊಕ್ಕನ್ನು ಟೇಪ್‌ನಿಂದ ಕಟ್ಟಲಾಗಿತ್ತು. ಬಳಲಿದ್ದ ಹಕ್ಕಿಯೂ ಹೆಚ್ಚು ಪ್ರತಿರೋಧ ವ್ಯಕ್ತಪಡಿಸದೆ, ಚಿಕಿತ್ಸೆಗೆ ಸ್ಪಂದಿಸಿತು. ಉಮೇಶ್ ಅವರೊಂದಿಗೆ ಬಂದಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಹಕ್ಕಿಯನ್ನು ಜೋಪಾನವಾಗಿ ಮರಳಿ ದಾಂಡೇಲಿಗೆ ಕರೆದುಕೊಂಡುಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.