ಹುಬ್ಬಳ್ಳಿ: ‘ನಗರದ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಡಿ. 23 ಹಾಗೂ 24ರಂದು ಮೂರನೇ ಕರ್ನಾಟಕ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಹಮ್ಮಿಕೊಳ್ಳಲಾಗಿದೆ’ ಎಂದು ನವ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಂ.ಎ. ಮುಮ್ಮಿಗಟ್ಟಿ ತಿಳಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಕಾಡೆಮಿ, ಯೂನಿವರ್ಸಲ್ ಫಿಲ್ಮ್ ಮೇಕರ್ಸ್ ಕೌನ್ಸಿಲ್, ರೋಟರಿ ಇಂಟರ್ನ್ಯಾಷನಲ್ ಜಿಲ್ಲೆ 3170, ರೌಂಡ್ ಟೇಬಲ್ ಇಂಡಿಯಾ ಮತ್ತಿತರ ಸಂಘ–ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ’ ಎಂದರು.
‘23ರಂದು ಬೆಳಿಗ್ಗೆ 10.30ಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟನೆ ನೆರವೇರಿಸುವರು. ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ಮಾಲ್ಡೀವ್ಸ್ ದೇಶದ ನಟ ಮಹಮ್ಮದ್ ರಶೀದ್ ಪಾಲ್ಗೊಳ್ಳುವರು. ಮಧ್ಯಾಹ್ನ 1ರಿಂದ ರಾತ್ರಿ 9 ಗಂಟೆವರೆಗೆ ಹಾಗೂ 24ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಆಯ್ದ 10 ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ’ ಎಂದು ಹೇಳಿದರು.
‘ಸಂಜೆ 5.30ಕ್ಕೆ ಸಮಾರೋಪ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಮಹಮ್ಮದ್ ರಶೀದ್, ರೋಟರಿ ಇಂಟರ್ನ್ಯಾಷನಲ್ ಜಿಲ್ಲಾ ಗವರ್ನರ್ ನಾಸೀರ್ ಬಸೋಡವಾಲಾ, ನಟಿ ಮಮತಾ ರಾವುತ್, ಲೀಲಾ ಮೋಹನ್, ಪೂಜಾ ರಾಮಚಂದ್ರ, ಜೈಪ್ರಭು, ಬೀರೇನ್ ಡಾವೆ, ಕಲೀಂ ಪಾಷಾ, ಪತ್ರಕರ್ತ ರಾಜಕುಮಾರ್ ತಿವಾರಿ, ನಿರ್ದೇಶಕ ರಾಮಪ್ರಸಾದ, ಇಂಡಿಯನ್ ಫಿಲ್ಮ್ ಮೇಕರ್ಸ್ ಅಸೋಸಿಯೇಷನ್ ಅಧ್ಯಕ್ಷ ದಿಲೀಪ ಕುಮಾರ್ ಪಾಲ್ಗೊಳ್ಳುವರು’ ಎಂದು ವಿವರಿಸಿದರು.
‘ಅಂತರರಾಷ್ಟ್ರೀಯ ಮಟ್ಟದ 145 ಚಲನಚಿತ್ರಗಳು ಈಗಾಗಲೇ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಆಯ್ದ ಚಿತ್ರಗಳಿಗೆ 45 ವಿಭಾಗಗಳಲ್ಲಿ ವಿವಿಧ ಪ್ರಶಸ್ತಿಗಳನ್ನು ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.
ರೋಟರಿ ಕ್ಲಬ್ ಹುಬ್ಬಳ್ಳಿ ಎಲೈಟ್ ಅಧ್ಯಕ್ಷ ಅನೀಸ ಖೋಜೆ, ಹೇಮಂತ್, ರವೀಂದ್ರ ಪೌವುಸ್ಕರ, ಪ್ರಮೋದ ಹಿರೇಮಠ, ಅರುಣಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.