
ಕಲಘಟಗಿ: ತಾಲ್ಲೂಕಿನ ಹುಲ್ಲಂಬಿ ಹಾಗೂ ಸುಳಿಕಟ್ಟಿ ಗ್ರಾಮದ ರೈತರ ಜಮೀನುಗಳ ವಿಸ್ತೀರ್ಣ ನಿಗದಿಪಡಿಸಿ ಪೋಡಿ ಮಾಡಿಕೊಡುವುದು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ಡಿ.6ರಿಂದ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡ ಪರಶುರಾಮ ಎತ್ತಿನಗುಡ್ಡ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಎದುರಿಗೆ ಅಳವಡಿಸಿರುವ ಧರಣಿ ಸತ್ಯಾಗ್ರಹ ವೇದಿಕೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ರೈತ ಮುಖಂಡರಾದ ಸುಭಾಸ ಸುಣಗಾರ ಮಾತನಾಡಿ, ಹುಲ್ಲಂಬಿ ಗ್ರಾಮದ ಸರ್ವೇ ನಂ: 123ರ 59 ಎಕ್ಕರೆ 27 ಗುಂಟೆ ಹಾಗೂ 145ರ ಕ್ಷೇತ್ರ 121 ಎಕ್ಕರೆ 32 ಗುಂಟೆ ಜಮೀನಿನ ಆಕಾರ ನಿಗದಿ ಪಡಿಸಿ ಪೋಡಿ ಮಾಡಿಕೊಡಲು ಅರ್ಜಿ ಸಲ್ಲಿಸಿ 3 ವರ್ಷ ಕಳೆದರೂ ಕೆಲಸ ಮಾಡುತ್ತಿಲ್ಲ ಎಂದರು.
ರೈತ ಮುಖಂಡರಾದ ಉಳವಪ್ಪ ಬಳಿಗೇರ ಮಾತನಾಡಿ, ತಾಲ್ಲೂಕಿನ ಜಮೀನಿನ ಉತ್ತಾರ ಸರಿಯಾಗಿರದ ಕಾರಣ ರೈತರಿಗೆ ಸಾಲ ಸೌಲಭ್ಯ ಸಿಗುತ್ತಿಲ್ಲ. ಹಲವು ಬಾರಿ ಅರ್ಜಿ ಸಲ್ಲಿಸಿ ಕಚೇರಿಗೆ ಅಲೆದಾಡಿದರೂ ಅಧಿಕಾರಿಗಳು ಸರಿಪಡಿಸುತ್ತಿಲ್ಲ ಎಂದು ಹೇಳಿದರು.
ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಅಧ್ಯಕ್ಷ ಮಹೇಶ ಬೆಳಗಾಂವಕರ ಮಾತನಾಡಿ, ರೈತರ ಹಲವು ಸಮಸ್ಯೆಗಳ ಕುರಿತು ಮುಷ್ಕರ ನಡೆಸುತ್ತಿದ್ದೇವೆ. ನಮ್ಮ ಹೋರಾಟಕ್ಕೆ ಕನ್ನಡಪರ ಸಂಘಟನೆ, ವಕೀಲರ ಹಾಗೂ ಹಲವು ಸಂಘಟನೆಯವರು ಕೈಜೋಡಿಸಿವೆ ಎಂದರು.
ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಗುರುನಾಥಗೌಡ್ರ, ತಾಲ್ಲೂಕ ಸಂಗ್ರಾಮ ಸೇನೆ ಅಧ್ಯಕ್ಷ ಸಾತಪ್ಪ ಕುಂಕೂರ, ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರಗೌಡ ಭಾವಿಕಟ್ಟಿ, ಸಿದ್ದಪ್ಪ ಬೆಟಗೇರಿ, ಬಸನಗೌಡ ಸಿದ್ದನಗೌಡ್ರ, ಮಾಳಪ್ಪ ಹೊನ್ನಳ್ಳಿ,ಪಕ್ಕೀರೇಶ ನೇಸ್ರೆಕರ, ಶಂಕರಗೌಡ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.