ಹುಬ್ಬಳ್ಳಿ: ‘ಹೃದಯಗಳ ಬೆಸುಗೆಗೆ ಹೆಮ್ಮೆಯ ಸವಾರಿ’ ಎನ್ನುವ ಘೋಷವಾಕ್ಯದಡಿ ಹುಬ್ಬಳ್ಳಿಯ ನಾಲ್ವರು ಹವ್ಯಾಸಿ ಸೈಕ್ಲಿಸ್ಟ್ಗಳು ಕನ್ಯಾಕುಮಾರಿ ತನಕ ಪೆಡಲ್ ತುಳಿಯವ ಸಾಹಸಯಾತ್ರೆ ಹಮ್ಮಿಕೊಂಡಿದ್ದಾರೆ.
ಈ ಯಾತ್ರೆಗೆ ಸೆ. 25ರಂದು ಬೆಳಿಗ್ಗೆ 6 ಗಂಟೆಗೆ ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಚಾಲನೆ ದೊರೆಯಲಿದೆ.
ಒಟ್ಟು 1111 ಕಿ.ಮೀ. ಸೈಕಲ್ ಯಾತ್ರೆ ಇದಾಗಿದ್ದು, ಗಿರೀಶ ಹಂಪಿಹೊಳಿ, ಗುಲ್ಜಾರ್ ಅಹ್ಮದ್, ಕೌಸ್ತುಬ್ ಸಂಶುಕರ್ ಮತ್ತು ಪ್ರಸನ್ನ ಜೋಶಿ ಈ ಸಾಧನೆಯ ಗುರಿ ಇಟ್ಟುಕೊಂಡಿದ್ದಾರೆ.
ನೀರಿನ ಮಿತವ್ಯಯ ಬಳಕೆ, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ, ಮಕ್ಕಳ ಆರೋಗ್ಯ ರಕ್ಷಣೆ, ಪರಿಸರ ರಕ್ಷಣೆಗೆ ಕಾಳಜಿ, ಶಿಕ್ಷಣ ಎನ್ನುವ ಅಂಶಗಳನ್ನು ಮುಖ್ಯವಾಗಿಟ್ಟುಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಯಾತ್ರೆಯುದ್ದಕ್ಕೂ ಸೈಕ್ಲಿಸ್ಟ್ಗಳು ಭಿತ್ತಿಪತ್ರಗಳ ಮೂಲಕ ಈ ವಿಷಯಗಳ ಬಗ್ಗೆ ಅರಿವು ಮೂಡಿಸಲಿದ್ದಾರೆ.
ಹುಬ್ಬಳ್ಳಿಯಿಂದ ದಾವಣಗೆರೆ, ಬೆಂಗಳೂರು, ಧರ್ಮಪುರಿ, ಕರೂರ, ಮಧುರೈ, ತಿರುಣವೆಲೈ ಮೂಲಕ ಕನ್ಯಾಕುಮಾರಿಗೆ ತಲುಪಲಿದ್ದಾರೆ.
‘ಹಿಂದೆ ಗರಿಷ್ಠ 400 ಕಿ.ಮೀ. ತನಕ ಸೈಕಲ್ ಮೂಲಕ ಯಾತ್ರೆ ಮಾಡಿದ್ದೇನೆ. ಇದೇ ಮೊದಲ ಬಾರಿಗೆ ದೀರ್ಘ ದೂರದ ಸವಾಲಿಗೆ ಸಜ್ಜಾಗಿದ್ದೇನೆ. ಎಂಟು ದಿನಗಳಲ್ಲಿ ಕನ್ಯಾಕುಮಾರಿ ಮುಟ್ಟಲಿದ್ದೇವೆ’ ಎಂದು ಕೌಸ್ತುಬ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.