ADVERTISEMENT

ಬಜೆಟ್‌ನಲ್ಲಿ ಜೈನ ಸಮಾಜಕ್ಕೆ ಅನ್ಯಾಯ; ಹೋರಾಟದ ಎಚ್ಚರಿಕೆ

ಸರ್ಕಾರ ನಡೆಸಲು ಹಣದ ಕೊರತೆ ಇದ್ದರೆ, ನಮಗೆ ಬರುವ ಪಾಲನ್ನು ವಾಪಸ್‌ ಕೊಡುತ್ತೇವೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2025, 23:47 IST
Last Updated 9 ಮಾರ್ಚ್ 2025, 23:47 IST
ಗುಣಧರನಂದಿ ಮಹಾರಾಜ
ಗುಣಧರನಂದಿ ಮಹಾರಾಜ   

ಹುಬ್ಬಳ್ಳಿ: ‘ರಾಜ್ಯ ಬಜೆಟ್‌ನಲ್ಲಿ ಜೈನ ಸಮುದಾಯದ ಯಾವುದೇ ಬೇಡಿಕೆಗಳನ್ನು ಈಡೇರಿಸದೆ ನಿರ್ಲಕ್ಷಿಸಲಾಗಿದೆ. ಶೀಘ್ರದಲ್ಲಿ ಸಮಾಜದವರ ಸಭೆ ನಡೆಸಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಇಲ್ಲಿನ ವರೂರು ನವಗ್ರಹತೀರ್ಥ ಕ್ಷೇತ್ರದ ಗುಣಧರನಂಧಿ ಮಹಾರಾಜರು ಎಚ್ಚರಿಸಿದರು.

‘ಬಜೆಟ್‌ ಗಾತ್ರ ನಾಲ್ಕು ಲಕ್ಷ ಕೋಟಿ ರೂಪಾಯಿಗೆ ಏರಿದರೂ ನಮ್ಮ ಸಮಾಜಕ್ಕೆ ನೀಡುವ ಅನುದಾನ ಕಡಿಮೆ ಆಗುತ್ತಾ ಬರುತ್ತಿದೆ. ಈ ಬಜೆಟ್‌ನಲ್ಲಿ ಅಲ್ಪಸಂಖ್ಯಾತ  ಸಮುದಾಯಗಳಿಗೆ ಕೇವಲ ₹100 ಕೋಟಿ ನೀಡಲಾಗಿದೆ. ಇದರಲ್ಲಿ ಜೈನರು, ಕ್ರೈಸ್ತರು, ಸಿಖ್ಖರು ಹಾಗೂ ಬೌದ್ಧರು ಹಂಚಿಕೊಂಡರೇ ₹33 ಕೋಟಿ ಬರುತ್ತದೆ. ಸರ್ಕಾರ ನಡೆಸಲು ಹಣದ ಕೊರತೆ ಇದ್ದರೆ, ನಮಗೆ ಬರುವ ಪಾಲನ್ನು ವಾಪಸ್‌ ಕೊಡಲು ಜೈನ ಸಮಾಜ ಸಿದ್ಧವಿದೆ’ ಎಂದು ಭಾನುವಾರ ಪ್ರತಿಕ್ರಿಯಿಸಿದರು.

‘ಸಮಾಜದ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಜೈನ ಅಭಿವೃದ್ಧಿ ನಿಗಮದ ಸ್ಥಾಪನೆ ಅಗತ್ಯವಾಗಿದ್ದು, ಈ ಬಗ್ಗೆ ಸಮಾಜದ ಮುಖಂಡರು, ಸ್ವಾಮೀಜಿಗಳು ಒತ್ತಾಯಿಸಿದ್ದರು. ನಿಗಮ ಸ್ಥಾಪನೆ ಮಾಡುವುದಾಗಿ ಗೃಹ ಸಚಿವ ಜಿ.ಪರಮೇಶ್ವರ್‌ ಸಹ ಭರವಸೆ ನೀಡಿದ್ದರು. ಆದರೂ ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾವ ಮಾಡದೆ ಸಮಾಜಕ್ಕೆ ಅನ್ಯಾಯ ಮಾಡಲಾಗಿದೆ’ ಎಂದು ದೂರಿದರು.

ADVERTISEMENT

‘ವರೂರು ನವಗ್ರಹ ತೀರ್ಥಕ್ಷೇತ್ರದ ಅಭಿವೃದ್ಧಿಗೆ ₹2 ಕೋಟಿ ನೆರವು ನೀಡುವುದಾಗಿ ಘೋಷಣೆ ಮಾಡಲಾಗಿತ್ತು. ಅದನ್ನು ಈಡೇರಿಸಿಲ್ಲ. ಈ ಹಿಂದೆ ಸಹ ರಾಜ್ಯದ ಪ್ರತಿ ಮಠಕ್ಕೆ ಎರಡೂವರೆ ಕೋಟಿ ರೂಪಾಯಿ ನೀಡುವುದಾಗಿ ಘೋಷಿಸಲಾಗಿತ್ತು. ಈವರೆಗೂ ಯಾವ ಮಠಗಳಿಗೂ ಪೂರ್ಣ ಹಣ ನೀಡಿಲ್ಲ’ ಎಂದು ದೂರಿದರು.

‘ಪ್ರಸಕ್ತ ಬಜೆಟ್‌ನಲ್ಲಿ ದಕ್ಷಿಣ ಕರ್ನಾಟಕ ಭಾಗಕ್ಕೆ ನೀಡಲಾದ ಆದ್ಯತೆಯನ್ನು ಉತ್ತರ ಕರ್ನಾಟಕ ಭಾಗಕ್ಕೆ ನೀಡಿಲ್ಲ. ಹೀಗಾಗಿ ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಕೇವಲ ದಕ್ಷಿಣ ಕರ್ನಾಟಕದ ಬಜೆಟ್ ಆಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.