ಹುಬ್ಬಳ್ಳಿ: ‘ವೀರಶೈವ– ಲಿಂಗಾಯತ ಸಮಾಜದ ಮೀಸಲಾತಿಯನ್ನು ಶೇ 5ರಿಂದ 7ಕ್ಕೆ ಹಾಗೂ ಒಕ್ಕಲಿಗರ ಮೀಸಲಾತಿಯನ್ನು ಶೇ 4ರಿಂದ 6ಕ್ಕೆ ಏರಿಸಲಾಗಿದೆ. ಒಳ ಮೀಸಲಾತಿ ಜಾರಿಗೆ ತಂದು ಎಲ್ಲರಿಗೂ ನ್ಯಾಯ ಕಲ್ಪಿಸಲಾಗಿದೆ. ಸಾಮಾಜಿಕ ನ್ಯಾಯದ ದಿಕ್ಸೂಚಿಯಾಗಿರುವ ಈ ನಿರ್ಧಾರದಿಂದ, ಎಲ್ಲಾ ಸಮುದಾಯಗಳು ಸಂತಸಗೊಂಡಿವೆ’ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು.
ನಗರದಲ್ಲಿರುವ ಮುಖ್ಯಮಂತ್ರಿ ನಿವಾಸದ ಬಳಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೀಸಲಾತಿ ಹಂಚಿಕೆ ಚುನಾವಣೆಯ ಗಿಮಕ್ ಅಲ್ಲ. ಎರಡು ವರ್ಷಗಳಿಂದ ಮೀಸಲಾತಿಯ ಹಂಚಿಕೆಯ ಪ್ರಕ್ರಿಯೆ ನಡೆಯುತ್ತಿದೆ. ಇದು ಅವಸರದಲ್ಲಿ ಮಾಡಿದ ಕೆಲಸವಲ್ಲ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವರದಿ ಮೇರೆಗೆ, ಬಿಜೆಪಿ ಮೀಸಲಾತಿ ಜಾರಿಗೊಳಿಸಿದೆ’ ಎಂದರು.
ಪಂಚಮಸಾಲಿ ಮೀಸಲಾತಿಗೆ ಹೋರಾಟ ಸಮಿತಿಯ ವಿಜಯಾನಂದ ಕಾಶಪ್ಪನವರ ವಿರೋಧ ಕುರಿತು ಪ್ರತಿಕ್ರಿಯಿಸಿದ ಅವರು, ‘ಹಿಂದೆ ಅವರ ಸರ್ಕಾರವೇ ಇತ್ತು. ಅವರೂ ಶಾಸಕರಾಗಿದ್ದರು. ಆಗ, ಯಾಕೆ ಮೀಸಲಾತಿ ಕೊಡಲಿಲ್ಲ. ರಾಜಕೀಯ ಕಾರಣಕ್ಕಾಗಿ ವಿರೋಧಿಸಿದರೆ, ಯಾರೂ ಗಣನೆಗೆ ತೆಗೆದುಕೊಳ್ಳುವುದಿಲ್ಲ’ ಎಂದು ತಿರುಗೇಟು ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.