ಧಾರವಾಡ: ಲಾಕ್ಡೌನ್ನಿಂದ ಕೆಲಸವಿಲ್ಲದೆ ಪರಿತಪಿಸುತ್ತಿದ್ದ ಕಾರ್ಮಿಕರು ತಮ್ಮೂರಿಗೆ ಹೊರಡಲು ಸಿದ್ಧರಾಗಿದ್ದರು. ಆದರೆ ರೈಲು ಇಲ್ಲದಿರುವುದು ಖಾತ್ರಿಯಾದ ನಂತರ ಮಂಗಳವಾರ ನಸುಕಿನಲ್ಲಿ ಸೈಕಲ್ ಏರಿ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ.
ನಗರದ ವಿವಿಧೆಡೆ ದುಡಿಮೆ ಕಂಡುಕೊಂಡಿದ್ದ ಮಧ್ಯಪ್ರದೇಶ ಹಾಗೂ ಮಾಹಾರಾಷ್ಟ್ರದ ಕಾರ್ಮಿಕರು ಲಾಕ್ಡೌನ್ನಿಂದ ನಗರದಲ್ಲೇ ಉಳಿದುಕೊಂಡಿದ್ದರು. ಸೇವಾ ಸಿಂಧು ಆ್ಯಪ್ನಲ್ಲೂ ಇವರು ತಮ್ಮ ಊರುಗಳಿಗೆ ತೆರಳಲು ಹೆಸರು ನೋಂದಾಯಿಸಿಕೊಂಡಿದ್ದರು. ಆದರೆ ದೆಹಲಿಯಿಂದ ಮಾತ್ರ 15 ರೈಲು ಪ್ರಯಾಣ ಬೆಳೆಸುತ್ತಿರುವುದರಿಂದ, ತಮ್ಮ ಊರುಗಳಿಗೆ ತೆರಳಲು ಅಸಾಧ್ಯ ಎಂದು ಅರಿತ ಇವರು ಬೇರೆಯದೇ ಯೋಜನೆ ಸಿದ್ಧಪಡಿಸಿದರು.
13 ಜನ ಕಾರ್ಮಿಕರುಸೋಮವಾರ ಸಂಜೆ ತಮ್ಮ ಬಳಿ ಇದ್ದ ಹಣದಲ್ಲಿ ತಲಾ ಒಂದು ಸೈಕಲ್ ಖರೀದಿಸಿದರು. ಊರಿಗೆ ತಲುಪುವರೆಗೂ ಬೇಕಾದ ಊಟೋಪಚಾರ ವ್ಯವಸ್ಥೆಯನ್ನೂ ಮಾಡಿಕೊಂಡರು. ಬರೋಬ್ಬರಿ ಗರಿಷ್ಟ 1300 ಕಿ.ಮೀ. ಪ್ರಯಾಣಿಸಬೇಕಿರುವುದರಿಂದ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಮನೋಜ್, ‘ನಿತ್ಯ150 ಕಿ.ಮೀ. ಪ್ರಯಾಣಿಸುವುದು ಇವರ ಯೋಜನೆ ನಮ್ಮದು. ಸೊಲ್ಲಾಪುರ ಮಾರ್ಗವಾಗಿ ಪ್ರಯಾಣಿಸಿ ಗರಿಷ್ಠ 10 ದಿನಗಳ ಒಳಗಾಗಿ ಊರು ಮುಟ್ಟುವ ಗುರಿ ಹೊಂದಲಾಗಿದೆ. ಧಾರವಾಡಕ್ಕೆ ಮತ್ತೆ ಮರಳುವ ಕುರಿತು ಊರಿಗೆ ತಲುಪಿ ಯೋಚಿಸಲಾಗುವುದು’ ಎಂದರು.
ಮಂಗಳವಾರ ನಸುಕಿನಲ್ಲಿ ಇಲ್ಲಿನ ನಗರ ಹೊರವಲಯದಲ್ಲಿ ಹೊಸ ಸೈಕಲ್ಗಳನ್ನು ಏರಿ ಎಲ್ಲರನ್ನೂ ಹುರುದುಂಬಿಸಿಕೊಂಡು ಈ ಕಾರ್ಮಿಕರು ತಮ್ಮೂರತ್ತ ಪ್ರಯಾಣ ಬೆಳೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.