ADVERTISEMENT

ಹುಬ್ಬಳ್ಳಿ | ಚಿರತೆ ಓಡಾಟದ ದೃಶ್ಯ ಸೆರೆ; ಹೆಚ್ಚಿದ ಆತಂಕ

ಅರಣ್ಯ ಇಲಾಖೆ ಸಿಬ್ಬಂದಿಯಿಂದ ಗಸ್ತು ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 5:46 IST
Last Updated 17 ಜನವರಿ 2026, 5:46 IST
   

ಹುಬ್ಬಳ್ಳಿ: ಕೆಲ ದಿನಗಳ ಹಿಂದಷ್ಟೇ ನಗರದ ಗಾಮನಗಟ್ಟಿ ರಸ್ತೆ ಹಾಗೂ ವಿಮಾನ ನಿಲ್ದಾಣದ ಸುತ್ತಮುತ್ತ ಚಿರತೆ ಕಾಣಿಸಿಕೊಂಡು ಜನತೆಯಲ್ಲಿ ಭಯದ ವಾತಾವರಣ ಸೃಷ್ಟಿಸಿತ್ತು. ಇದೀಗ ಮತ್ತೆ ಕಾರವಾರ ರಸ್ತೆಯ ಅಸ್ಮಾ ಇಂಡಸ್ಟ್ರೀಯಲ್‌ ಕಾಂಪೌಂಡ್‌ ಒಳಗೆ ಚಿರತೆ ಓಡಾಡಿದೆ ಎನ್ನಲಾದ ಚಿತ್ರ ಹಾಗೂ ಸಿಸಿಟಿವಿ ದೃಶ್ಯಾವಳಿ ಸೆರೆಯಾಗಿದ್ದು, ಮತ್ತಷ್ಟು ಆತಂಕ ಸೃಷ್ಟಿಸಿದೆ.

ಕಾರವಾರ ರಸ್ತೆಯಲ್ಲಿ ಕೈಗಾರಿಕಾ ಕಂಪನಿಯ ಪ್ರದೇಶದೊಳಗೆ ಬೆಳಿಗ್ಗೆ 5 ಗಂಟೆ ಸುಮಾರಿಗೆ ಚಿರತೆ ಓಡಾಡಿದೆ ಎನ್ನುವ ಸಿಸಿಟಿವಿ ದೃಶ್ಯಾವಳಿ ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿರತೆಯ ಹೆಜ್ಜೆ ಗುರುತು ಎಲ್ಲಿಯೂ ಪತ್ತೆಯಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಸುತ್ತಮುತ್ತ ಸಿಬ್ಬಂದಿ ಗಸ್ತು ಹೆಚ್ಚಿಸಲಾಗಿದೆ.

ಈ ನಡುವೆಯೇ, ಗಾಮನಗಟ್ಟಿ ರಸ್ತೆ ಹಾಗೂ ವಿಮಾನ ನಿಲ್ದಾಣದಲ್ಲಿ ಕೆಲ ದಿನಗಳಿಂದ ಕಾಣಿಸಿಕೊಂಡು, ನಾಪತ್ತೆಯಾಗಿದ್ದ ಚಿರತೆ ಗುರುವಾರ ಬೆಳಿಗ್ಗೆ ಮತ್ತೆ ಕಾಣಿಸಿಕೊಂಡಿದೆ.

ADVERTISEMENT

‘ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾದ ವಿಡಿಯೋ ಪರಿಶೀಲಿಸಿ ಸ್ಥಳಕ್ಕೆ ಭೇಟಿ ನೀಡಿದಾಗ, ಚಿರತೆ ಓಡಾಡಿರುವ ಯಾವ ಕುರುಹು ಕಂಡು ಬಂದಿಲ್ಲ. ವಿಡಿಯೋದಲ್ಲಿ ಸೆರೆಯಾಗಿರುವ ದೃಶ್ಯ ಅಸ್ಪಷ್ಟವಾಗಿದ್ದು, ಚಿರತೆ ಹೋಲಿಕೆಯೂ ಕಂಡು ಬರುತ್ತಿಲ್ಲ. ಕತ್ತೆ ಕಿರುಬ ಹೋಲಿಕೆಯಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಚಿರತೆ ಓಡಾಡಿದ್ದರೆ ಹೆಜ್ಜೆ ಗುರುತು ಇರುತ್ತಿತ್ತು. ಮುಂಜಾಗ್ರತೆಯಾಗಿ ಅರಣ್ಯ ಇಲಾಖೆ ಸಿಬ್ಬಂದಿಯನ್ನು ನೇಮಿಸಿ, ಗಸ್ತು ಹಾಕಲಾಗಿದೆ’ ಎಂದು ಹುಬ್ಬಳ್ಳಿ ನಗರದ ವಲಯ ಅರಣ್ಯಾಧಿಕಾರಿ ಆರ್‌.ಎಸ್‌. ಉಪ್ಪಾರ ತಿಳಿಸಿದರು.

‘ಗಾಮನಗಟ್ಟಿ ರಸ್ತೆಯಲ್ಲಿ ಓಡಾಡುತ್ತಿರುವ ಚಿರತೆ ಸೆರೆಗೆ ಈಗಾಗಲೇ ಎರಡು–ಮೂರು ಕಡೆ ಬೋನ್‌ ಇಡಲಾಗಿದೆ. ಕೆಲ ದಿನಗಳಿಂದ ಚಿರತೆಯ ಸುಳಿವು ಇರಲಿಲ್ಲ. ಕೆಲವು ಕಡೆ ಅಳವಡಿಸಿರುವ ಕ್ಯಾಮೆರಾಗಳಲ್ಲೂ ಟ್ರ್ಯಾಪ್‌ ಆಗಿರಲಿಲ್ಲ. ಗುರುವಾರ ಅದೇ ಪ್ರದೇಶದಲ್ಲಿ ಚಿರತೆ ಓಡಾಡಿದ ಚಿತ್ರ ಸೆರೆಯಾಗಿದ್ದು, ಹಿಡಿಯಲು ಯೋಜನೆ ರೂಪಿಸಲಾಗಿದೆ. ಸಾರ್ವಜನಿಕರು ಒಬ್ಬೊಬ್ಬರೇ ಓಡಾಡದೆ, ಗುಂಪಿನಲ್ಲಿ ಓಡಾಡಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.