ADVERTISEMENT

ಹುಬ್ಬಳ್ಳಿ: ಅಸೂಟಿ ಪರ ಕೆಲಸ ಮಾಡಲು ರಜತ್‌ ಬೆಂಬಲಿಗರ ನಿರ್ಣಯ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2024, 16:08 IST
Last Updated 22 ಮಾರ್ಚ್ 2024, 16:08 IST
ರಜತ್‌ ಉಳ್ಳಾಗಡ್ಡಿಮಠ
ರಜತ್‌ ಉಳ್ಳಾಗಡ್ಡಿಮಠ   

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್‌ ಹೈಕಮಾಂಡ್‌ ಟಿಕೆಟ್‌ ನೀಡಿರುವ ವಿನೋದ್‌ ಅಸೂಟಿ ಪರ ಕೆಲಸ ಮಾಡಲು ಟಿಕೆಟ್‌ ವಂಚಿತ ರಜತ್‌ ಉಳ್ಳಾಗಡ್ಡಿಮಠ ಕರೆದಿದ್ದ ಬೆಂಬಲಿಗರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಇಲ್ಲಿನ ಗೋಕುಲ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ನಡೆದ ರಜತ್ ಉಳ್ಳಾಗಡ್ಡಿಮಠ ಬೆಂಬಲಿಗರು, ಹಿತೈಷಿಗಳು ಹಾಗೂ ಸಮಾನ ಮನಸ್ಕರು ಸಭೆ ನಡೆಸಿ ತೀರ್ಮಾನ ಕೈಗೊಂಡರು.

ಇದಕ್ಕೂ ಮುಂಚೆ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ ಹಳ್ಳೂರ ಮಾತನಾಡಿ, ರಜತ್ ಅವರಿಗೆ ಟಿಕೆಟ್‌ ತಪ್ಪಿರುವುದು  ದುರದೃಷ್ಟಕರ. ಮುಂದಿನ ದಿನಗಳಲ್ಲಿ ಅವರಿಗೆ ಪಕ್ಷ ಸೂಕ್ತ ಸ್ಥಾನಮಾನ ನೀಡಲಿ ಎಂದು ಆಶಿಸಿದರು.

ADVERTISEMENT

ಹು–ಧಾ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ಸುವರ್ಣ ಕಲ್ಲಕುಂಟ್ಲಾ ಮಾತನಾಡಿ, ರಜತ್‌ ಕ್ಷೇತ್ರದಲ್ಲಿ ಸಾಕಷ್ಟು ಸಂಘಟನೆ ಮಾಡಿ ಪಕ್ಷಕ್ಕೆ ಬಲ ತುಂಬಿದ್ದಾರೆ. ಇವರಿಗೆ ಟಿಕೆಟ್ ತಪ್ಪಬಾರದಾಗಿತ್ತು ಎಂದು ಹೇಳಿದರು.

ರಜತ್ ಉಳ್ಳಾಗಡ್ಡಿಮಠ ಮಾತನಾಡಿ, ‘ಕಳೆದ ಎಂಟು ತಿಂಗಳಿಂದ ನಾನು ಪಕ್ಷ ಸಂಘಟನೆ ಮಾಡಿದ್ದೆ. ಎಲ್ಲಾ ಸರ್ವೆಯಲ್ಲಿಯೂ ನನ್ನ ಹೆಸರು ಮುನ್ನಡೆಯಲ್ಲಿತ್ತು. ಆದ್ರೆ ಟಿಕೆಟ್ ಬೇರೆಯವರಿಗೆ ನೀಡಲಾಗಿದೆ. ಯೋಗ್ಯತೆ ಇದ್ರೂ ಯೋಗ ಇಲ್ಲ’ ಎಂದು ಅಸಮಾಧಾನ ಹೊರಹಾಕಿದರು.

ಸಭೆಯಲ್ಲಿ ಪಾಲಿಕೆ ಸದಸ್ಯರಾದ ಆರೀಫ್ ಭದ್ರಾಪುರ, ಇಕ್ಬಾಲ್ ನವಲೂರು, ನವನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತ ಕೊರವರ, ಧಾರವಾಡ ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ಗುರು ಬೆಂಗೇರಿ, ಸರೋಜಾ ಹೂಗಾರ, ಕಲ್ಲಪ್ಪ ವಾಲಿಕಾರ, ಬಾಳಮ್ಮ ಜಂಗನವರ, ಮಹೇಶ ಧಾಬಡೆ, ರವೀಂದ್ರ ಹರ್ತಿ, ಸುನೀಲ ಮಠಪತಿ, ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.