ಹುಬ್ಬಳ್ಳಿ: ‘ಲವ್ ಜಿಹಾದ್ ತಡೆಯಲು ಶ್ರೀರಾಮ ಸೇನೆ ಆರಂಭಿಸಿದ್ದ 24/7 ಸಹಾಯವಾಣಿಗೆ ಒಂದು ವರ್ಷದಲ್ಲಿ ಐದು ಸಾವಿರಕ್ಕೂ ಅಧಿಕ ಕರೆಗಳು ಬಂದಿದ್ದು, ಅವುಗಳಲ್ಲಿ ಶೇ 90ರಷ್ಟು ಕರೆಗಳಿಗೆ ಪರಿಹಾರ ಒದಗಿಸಿದೆ’ ಎಂದು ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ತಿಳಿಸಿದರು.
ನಗರದ ಕ್ಯೂಬಿಕ್ಸ್ ಹೋಟೆಲ್ನಲ್ಲಿ ಭಾನುವಾರ ನಡೆದ ‘ಲವ್ ಜಿಹಾದ್ ವಿರುದ್ಧ 24/7 ಕಾರ್ಯ ನಿರ್ವಹಿಸಿದ ಸಹಾಯವಾಣಿ’ಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ರಾಜ್ಯದಿಂದಷ್ಟೇ ಅಲ್ಲ, ಹೊರ ರಾಜ್ಯ ಹಾಗೂ ವಿವಿಧ ಜಿಲ್ಲೆಗಳಿಂದ ಸಹಾಯವಾಣಿಗೆ ಕರೆಗಳು ಬಂದಿವೆ. ಅವುಗಳನ್ನೆಲ್ಲ ಕೂಲಕಂಷವಾಗಿ ಪರಿಶೀಲಿಸಿ, ಲವ್ ಜಿಹಾದ್ಗೆ ಒಳಗಾಗುತ್ತಿರುವ ಯುವತಿಯರನ್ನು ರಕ್ಷಿಸಿ, ಕುಟುಂಬಕ್ಕೆ ಒಪ್ಪಿಸಲಾಗಿದೆ. ಆದಷ್ಟು ಬೇಗ ಲವ್ ಜಿಹಾದ್ ಕೃತ್ಯ ಕೊನೆಯಾಗಬೇಕು, ಸಹಾಯವಾಣಿಯೂ ಸ್ಥಗಿತವಾಗಬೇಕು’ ಎಂದರು.
‘ವ್ಯವಸ್ಥಿತವಾಗಿ ತರಬೇತಿ ಪಡೆದು ಹಿಂದೂ ಹುಡಗಿಯರನ್ನು ಮದುವೆಯಾಗಿ, ಇಸ್ಲಾಂ ಧರ್ಮಕ್ಕೆ ಮತಾಂತರಿಸಿಕೊಳ್ಳುತ್ತಿದ್ದಾರೆ. ಹಿಂದೂ ರಾಷ್ಟ್ರವನ್ನು ಇಸ್ಲಾಂ ರಾಷ್ಟ್ರ ಮಾಡಬೇಕು ಎನ್ನುವುದು ಅವರ ಉದ್ದೇಶ. ಜಾತ್ರೆ, ಉತ್ಸವ, ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಜಾಗೃತಿ ಮೂಡಿಸಬೇಕು. ಜಾತಿಗಳ ಸಂಘರ್ಷ ಬಿಟ್ಟು, ಎಲ್ಲ ಜಾತಿಯವರು ಹಿಂದುಗಳಾಗಿ ದೇಶದದ್ರೋಹಿಗಳ ವಿರುದ್ಧ ಹೋರಾಡಬೇಕು. ಧರ್ಮ ರಕ್ಷಣೆಗೆ ಹೋರಾಡುವುದು ಅನಿವಾರ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.
ಸೇನೆಯ ದಕ್ಷಿಣ ಪ್ರಾಂತ ಪ್ರಮುಖ ಸುಂದರೇಶ ನರೇಗಲ್ ಮಾತನಾಡಿ, ‘ಸಹಾಯವಾಣಿಯು ಸಾಮಾಜಿಕ, ಆರ್ಥಿಕ, ರಾಜಕೀಯ ಸವಾಲುಗಳನ್ನು ಎದುರಿಸುತ್ತ ಒಂದು ವರ್ಷ ಪೂರೈಸಿದೆ. ಅಧಿಕಾರ, ಶಕ್ತಿ ಇದ್ದಾಗ ಮಾತ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತದೆ. ಶ್ರೀಮಂತರ, ರಾಜಕಾರಣಿಗಳ ಮಕ್ಕಳ್ಯಾರೂ ಸಂಘಟನೆಗೆ ಬರುವುದಿಲ್ಲ. ಜೈಕಾರಕ್ಕೆ ಮಾತ್ರ ನಮ್ಮನ್ನು ಬಳಸಿಕೊಳ್ಳುತ್ತಾರೆ’ ಸಂಘಟನೆ ಮಾಡುವುದು ಸುಲಭದ ಕೆಲಸವಲ್ಲ’ ಎಂದರು.
ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀನಿವಾಸ ಗುರೂಜಿ, ‘ಶ್ರೀರಾಮ ಸೇನೆ ಕಾರ್ಯಕರ್ತರು ಸಹಾಯವಾಣಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡು, ಇತರ ಸಂಘಟನೆಗಳಿಗೆ ಮಾದರಿಯಾಗಿದ್ದಾರೆ. ತಜ್ಞರು ತಂಡದಲ್ಲಿದ್ದು, ಲವ್ ಜಿಹಾದ್ಗೆ ಒಳಗಾದ ಯುವತಿಯರನ್ನು ಮರಳಿ ಕರೆತರುತ್ತಿದ್ದಾರೆ. ಪಾಲಕರು ಮಕ್ಕಳಿಗೆ ದೇಶಿಯ ಸಂಸ್ಕೃತಿ ಕಲಿಸಬೇಕು. ಪಾಲಕರು ಸಂಸ್ಕಾರವಂತರಾಗಿದ್ದರೆ ಮಕ್ಕಳು ಎಂದಿಗೂ ಹಾಳಾಗುವುದಿಲ್ಲ’ ಎಂದು ಹೇಳಿದರು.
ಸಹಾಯವಾಣಿಯ ಒಂದು ವರ್ಷದ ಸಾಧನೆ ಕರಪತ್ರ ಬಿಡುಗಡೆ ಮಾಡಲಾಯಿತು. ಶ್ರೀರಾಮ ಸೇನೆಯ ದುರ್ಗಶಕ್ತಿ ಸಂಘಟನೆ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಿಸಲಾಯಿತು. ಮೋಹನ ಗುರುಸ್ವಾಮಿ, ಪರಶುರಾಮ ದೊಡ್ಡಮನಿ, ರವಿ ಕೆ., ಮಂಜುನಾಥ, ಅಣ್ಣಪ್ಪ ದೀವಟಗಿ, ರಾಮಚಂದ್ರ ಮಟ್ಟಿ, ರಾಜೇಶ್ವರಿ ಜಡಿ, ಸ್ಫೂರ್ತಿ ನಡೂರಮಠ, ಯಶೋಧಾ ತಾಂಬೆ, ಚನ್ನು ಹೊಸಮನಿ, ಬಸು ದುರ್ಗದ, ವೀರಯ್ಯ ಸಾಲಿಮಠ ಪಾಲ್ಗೊಂಡಿದ್ದರು.
ಬಾಕ್ಸ್..
‘ವರ್ಷದಲ್ಲಿ 5,118 ದೂರವಾಣಿ ಕರೆ’
‘ಸಹಾಯವಾಣಿಗೆ ಒಂದು ವರ್ಷದಲ್ಲಿ 5,118 ದೂರವಾಣಿ ಕರೆಗಳು ಬಂದಿದ್ದು, ಶೇ 73 ರಷ್ಟು ಪ್ರಕರಣಗಳನ್ನು ಮದುವೆ ಮಾಡಿಸುವ ಮೂಲಕ ಕುಟುಂಬದ ಕಣ್ಣೀರು ಒರೆಸಿದ್ದೇವೆ’ ಎಂದು ಸಹಾಯವಾಣಿಯ ಮೇಲ್ವಿಚಾರಕ ಬಸವರಾಜ ಗೌಡರ ತಿಳಿಸಿದರು.
‘ಸಹಾಯವಾಣಿ ಆರಂಭಿಸಿದ ಪ್ರಾರಂಭದಲ್ಲಿ ಬೆದರಿಕೆ ಕರೆಗಳು ಬಂದಿದ್ದವು. ವಾಟ್ಸ್ಆ್ಯಪ್ ನಂಬರ್ ಹ್ಯಾಕ್ ಮಾಡಲಾಗಿತ್ತು. ಕೆಲವು ಯುವತಿಯರು ಪಾಲಕರ ಗಮನಕ್ಕೆ ತರದೆ ವಿವಾಹ ನೋಂದಣಿ ಮಾಡಿಸಿಕೊಂಡಿದ್ದರು. ಮದುವೆಯಾದವರನ್ನು ಬಲವಂತವಾಗಿ ಮತಾಂತರ ಮಾಡುತ್ತಿದ್ದರು. ಮಾಹಿತಿ ತಿಳಿದ ತಕ್ಷಣ ವಿಳಾಸ ಹುಡುಕಿ ಹೋಗುತ್ತಿದ್ದೆವು. ಠಾಣೆಯಲ್ಲಿ ದೂರು ದಾಖಲಿಸಲು ಸಮಸ್ಯೆಗಳು ಎದುರಾಗುತ್ತಿದ್ದವು. ಹುಡುಗಿಯರ ಮನವೊಲಿಸಿ, ಅವರನ್ನು ಕರೆತಂದು ಪಾಲಕರಿಗೆ ಒಪ್ಪಿಸಿದ್ದೇವೆ. ಬಹುತೇಕರು ಇನ್ಸ್ಟಾಗ್ರಾಮ್ನಲ್ಲಿ ಹುಡುಗಿಯರಿಗೆ ಪರಿಚಯವಾದವರೇ ಆಗಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.