ಹುಬ್ಬಳ್ಳಿ: ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ನಿರ್ಮಾಣ ವಿರೋಧಿಸಿ, ನಗರದ ಚನ್ನಮ್ಮ ವೃತ್ತದಲ್ಲಿ ಯುವತಿಯೊಬ್ಬರು ಸೋಮವಾರ ಏಕಾಂಗಿಯಾಗಿ ಪ್ರತಿಭಟಿಸುವ ಮೂಲಕ ಗಮನ ಸೆಳೆದರು.
ಬಿವಿಬಿ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಎಂ.ಟೆಕ್ ಮುಗಿಸಿರುವ ಹುಬ್ಬಳ್ಳಿಯ ಕೀರ್ತಿ ಚೆನ್ನರೆಡ್ಡಿ ಪ್ರತಿಭಟನೆ ನಡೆಸಿದವರು. ಚನ್ನಮ್ಮನ ಪ್ರತಿಮೆ ಕೆಳಗೆ ಕೆಲ ಹೊತ್ತು ಕುಳಿತು ಪ್ರತಿಭಟಿಸಿದ ಕೀರ್ತಿ, ರೈಲು ಮಾರ್ಗದಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಪಟ್ಟಿಯನ್ನೊಳಗೊಂಡ ಕಪ್ಪು ಬೋರ್ಡ್ ಪ್ರದರ್ಶಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಉದ್ದೇಶಿತ 163 ಕಿಲೋಮಿಟರ್ ಉದ್ದದ ರೈಲು ಯೋಜನೆಗಾಗಿ ಎರಡೂವರೆ ಲಕ್ಷಕ್ಕೂ ಅಧಿಕ ಮರಗಳನ್ನು ಕತ್ತರಿಸಬೇಕಾಗುತ್ತದೆ. ಇದರಿಂದ ಪ್ರಕೃತಿ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ’ ಎಂದರು.
‘ನಗರ ಪ್ರದೇಶಗಳ ಸುತ್ತಮುತ್ತ ಇದ್ದ ಅರಣ್ಯವನ್ನು ಅಭಿವೃದ್ಧಿ ಹೆಸರಿನಲ್ಲಿ ಈಗಾಗಲೇ ನಾಶ ಮಾಡಲಾಗಿದೆ. ರೈಲು ಯೋಜನೆಗಾಗಿ, ಈಗ ಪರಿಸರ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟಕ್ಕೆ ಹಾನಿ ಮಾಡುವುದು ಬೇಡ. ಇಂತಹ ಯೋಜನೆಗಳನ್ನು ಸರ್ಕಾರ ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು’ ಎಂದು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.