ADVERTISEMENT

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮೊಬೈಲ್ ಟವರ್ ಏರಿದ ವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2023, 5:01 IST
Last Updated 11 ಫೆಬ್ರುವರಿ 2023, 5:01 IST
ಧಾರವಾಡದ ಜ್ಯುಬಿಲಿ ವೃತ್ತದಲ್ಲಿರುವ ಮೊಬೈಲ್ ಟವರ್‌ ಅನ್ನು ವ್ಯಕ್ತಿಯೊಬ್ಬ ಏರಿದ್ದರಿಂದಾಗಿ ಶುಕ್ರವಾರ ವಾಹನ ದಟ್ಟಣೆ ಉಂಟಾಗಿತ್ತು
ಧಾರವಾಡದ ಜ್ಯುಬಿಲಿ ವೃತ್ತದಲ್ಲಿರುವ ಮೊಬೈಲ್ ಟವರ್‌ ಅನ್ನು ವ್ಯಕ್ತಿಯೊಬ್ಬ ಏರಿದ್ದರಿಂದಾಗಿ ಶುಕ್ರವಾರ ವಾಹನ ದಟ್ಟಣೆ ಉಂಟಾಗಿತ್ತು   

ಧಾರವಾಡ: ಏಳು ತಿಂಗಳ ಬಾಕಿ ವೇತನ ಬಿಡುಗಡೆ ಮಾಡುವಂತೆ ಹಾಗೂ ಮರಳಿ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಆಗ್ರಹಿಸಿ ಜಲ ಮಂಡಳಿಯ ವಜಾಗೊಂಡ ನೌಕರರೊಬ್ಬರು ಇಲ್ಲಿನ ಜ್ಯುಬಿಲಿ ವೃತ್ತದಲ್ಲಿರುವ ಮೊಬೈಲ್ ಟವರ್‌ ಅನ್ನು ಶುಕ್ರವಾರ ಏರಿ ಪ್ರತಿಭಟಿಸಿದರು.

ಉಗರಗೋಳದ ನಿವಾಸಿ ಮಲ್ಲಿಕಾರ್ಜುನ ತಳವಾರ ಎಂಬುವವರು ಮೊಬೈಲ್ ಟವರ್ ಏರಿದ ವ್ಯಕ್ತಿ. ಮೊಬೈಲ್ ಟವರ್ ಏರಿ ಘೋಷಣಾ ಪತ್ರ ಪ್ರಕಟಿಸಿದ ಇವರು ಸುತ್ತಮುತ್ತಲಿನ ಜನರಲ್ಲಿ ಆತಂಕ ಸೃಷ್ಟಿಸಿದರು. ಇದರ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಇತರ ನೌಕರರು ಧರಣಿ ನಡೆಸಿ ಘೋಷಣೆ ಕೂಗಿದರು.

‘ಕಳೆದ 18ರಿಂದ 20ವರ್ಷಗಳ ಕಾಲ ಜಲಮಂಡಳಿಯ ನೌಕರನಾಗಿ ದುಡಿದಿದ್ದೇನೆ. ಇದೀಗ ಏಕಾಏಕಿ ನಮ್ಮನ್ನು ವಜಾಗೊಳಿಸಿದ್ದಾರೆ. ಜತೆಗೆ ಕಳೆದ ಏಳು ತಿಂಗಳ ವೇತವನ್ನೂ ನೀಡಿಲ್ಲ. ಅದನ್ನು ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ವ್ಯಕ್ತಿ ಮೊಬೈಲ್ ಟವರ್ ಏರಿದ ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಮೊಬೈಲ್ ಟವರ್‌ ಏರಿ ವ್ಯಕ್ತಿಯ ಮನವೊಲಿಸುವ ಪ್ರಯತ್ನ ನಡೆಸಿದರು. ನೀರು ನೀಡಿ, ಸುರಕ್ಷಿತವಾಗಿ ಕೆಳಗೆ ಇಳಿಸಿದರು.

ನೌಕರರ ಧರಣಿಗೆ ಬೆಂಬಲ ನೀಡುತ್ತಿರುವ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಅವರು ಮಲ್ಲಿಕಾರ್ಜುನ ಅವರಿಗೆ ಸಮಾಧಾನ ಹೇಳಿದರು.

‘358 ನೌಕರರ ಬದುಕು ಅತಂತ್ರವಾಗಿದೆ. ಪಾಲಿಕೆಯು ಈ ನೌಕರರ ಹಿತದೃಷ್ಟಿಯಿಂದ ಹಾಗೂ ಮಾನವೀಯತೆ ದೃಷ್ಟಿಯಿಂದ ಅವರಿಗೆ ವೇತನ ಬಿಡುಗಡೆ ಹಾಗೂ ಕೆಲಸಕ್ಕೆ ಮರು ನಿಯೋಜನೆ ಮಾಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.

ಈ ಇಡೀ ಸನ್ನಿವೇಶ ನೋಡಲು ತಂಡೋಪತಂಡವಾಗಿ ಬಂದ ಜನರು ಜ್ಯುಬಲಿ ವೃತ್ತದಲ್ಲಿ ಸೇರಿದ್ದರಿಂದ ಕೆಲ ಕಾಲ ವಾಹನ ದಟ್ಟಣೆ ಉಂಟಾಗಿತ್ತು.

ಜ. 17ರಂದು ಜಾವೇದ್ ದಲಾಯತ್ ಎಂಬ ವ್ಯಕ್ತಿ ನ್ಯಾಯಾಧೀಶರ ಭೇಟಿಗೆ ಪಟ್ಟು ಹಿಡಿದು ಇದೇ ಮೊಬೈಲ್ ಟವರ್ ಏರಿದ್ದನ್ನು ಇಲ್ಲಿ ಸ್ಮರಿಸಬಹುದು. ಜ. 23ರಂದು ‘ನಮ್ಮ ಜನ ನಮ್ಮ ಧ್ವನಿ’ ಅಂಕಣದಲ್ಲಿ ‘ಟವರ್‌ಗೆ ಬೇಕು ನಿಯಮ ಪಾಲನೆ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.