
ಧಾರವಾಡ: ‘ನಗರದ ಕುಂಭಾಪುರ ಭಾಗದಲ್ಲಿ ನಿರ್ಮಾಣ ಹಂತದಲ್ಲಿರುವ ಮಾವು ಅಭಿವೃದ್ಧಿ ಕೇಂದ್ರದ ಕಟ್ಟಡ ಕಾಮಗಾರಿಯನ್ನು ಮೂರು ತಿಂಗಳಲ್ಲಿ ಮುಗಿಸಿ, ಬೆಳೆಗಾರರಿಗೆ ಅನುಕೂಲ ಮಾಡಿಕೊಡಲು ಉದ್ದೇಶಿಸಲಾಗಿದೆ’ ಎಂದು ಮಾವು ಅಭಿವೃದ್ಧಿ ಹಾಗೂ ಮಾರಾಟ ನಿಗಮದ ಅಧ್ಯಕ್ಷ ಬಿ.ಸಿ.ಮುದ್ದು ಗಂಗಾಧರ್ ಹೇಳಿದರು.
ತೋಟಗಾರಿಕೆ ಇಲಾಖೆ ಸಭಾಭವನದಲ್ಲಿ ಶುಕ್ರವಾರ ನಡೆದ ಮಾವು ಬೆಳೆಗಾರರ ಬಳಗದ ಕಾರ್ಯಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ನೈಸರ್ಗಿಕ ವಿಧಾನದಲ್ಲಿ ಮಾವು ಮಾಗಿಸಲು, ಬಿಸಿ ನೀರಿನ ಉಪಚಾರ, ಸಂಸ್ಕರಣೆ, ಪ್ಯಾಕೇಜಿಂಗ್ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಆರೋಗ್ಯಕರ ಹಣ್ಣುಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಮಾವು ಅಭಿವೃದ್ಧಿ ಕೇಂದ್ರ ಸ್ಥಾಪಿಸಲಾಗುತ್ತಿದೆ. ಬೆಳೆಗಾರರು ಕೇಂದ್ರವನ್ನು ಬಳಕೆ ಮಾಡಿಕೊಳ್ಳಬೇಕು’ ಎಂದರು.
‘ರಾಜ್ಯದಲ್ಲಿ 60 ಸಾವಿರ ಹೆಕ್ಟೇರ್ನಲ್ಲಿ ಮಾವು ಬೆಳೆ ಇದೆ. ಇಳುವರಿ ಉತ್ತಮವಾಗಿದೆ. ಹೆಚ್ಚು ಬೆಲೆ ಸಿಗುತ್ತಿಲ್ಲ. ವ್ಯವಸ್ಥಿತ ಮಾರುಕಟ್ಟೆ ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಹೇಳಿದರು.
ಮಾವು ಅಭಿವೃದ್ಧಿ ಕೇಂದ್ರಕ್ಕೆ 2026-27ರ ಸಾಲಿನ ಬಜೆಟ್ನಲ್ಲಿ ₹10 ಕೋಟಿ ಅನುದಾನ ಮೀಸಲಿಡಬೇಕು ಎಂದು ಮಾವು ಬೆಳೆಗಾರರ ಗೌರವ ಅಧ್ಯಕ್ಷ ರಾಜೇಂದ್ರ ಪೋದ್ಧಾರ ಅವರು ಮನವಿಪತ್ರ ಸಲ್ಲಿಸಿದರು.
ಮಾವು ಬೆಳೆಗಾರರ ಬಳಗದ ಅಧ್ಯಕ್ಷ ಸುಭಾಸ ಆಕಳವಾಡಿ, ಉಪಾಧ್ಯಕ್ಷ ಪ್ರಮೋದ ಗಾಂವ್ಕರ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಕಾಶಿನಾಥ ಭದ್ರಣ್ಣವರ, ಮಾವು ಅಭಿವೃದ್ಧಿ ಕೇಂದ್ರದ ಉಪನಿರ್ದೇಶಕ ಸಂತೋಷ ಸಪ್ಪಂಡಿ ಇದ್ದರು.