ಹುಬ್ಬಳ್ಳಿ: 'ಬದುಕಿದ್ದಾಗ ಉತ್ತಮ ಕೆಲಸ ಮಾಡಿ, ನಾವು ನಡೆದ ಹೆಜ್ಜೆಯ ಗುರುತು ಬಿಟ್ಟುಹೋಗಬೇಕು. ಅದನ್ನು ಮುಂದಿನ ಪೀಳಿಗೆ ನೆನಪಿಸಿಕೊಳ್ಳುವಂತಾಗಬೇಕು' ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಸಕ್ಷಮ ಉತ್ತರ ಕರ್ನಾಟಕ ಪ್ರಾಂತ ಮತ್ತು ಮಜೇಥಿಯಾ ಫೌಂಡೇಷನ್ ವತಿಯಿಂದ ಕಿಮ್ಸ್ ಹೊರರೋಗಿ ವಿಭಾಗದಲ್ಲಿ ಶನಿವಾರ 'ದಿವ್ಯಾಂಗ ಸೇವಾ ಕೇಂದ್ರ' ಉದ್ಘಾಟಿಸಿ ಅವರು ಮಾತನಾಡಿದರು.
'ಮನುಷ್ಯನಾದವನಿಗೆ ಮನುಷ್ಯತ್ವ ಇರಬೇಕು. ಎಲ್ಲರ ಬಗ್ಗೆಯೂ ಗೌರವ, ಪ್ರೀತಿ ಇರಬೇಕು. ದುರ್ಬಲರಿಗೆ ಅನುಕಂಪ ತೋರಿಸುವುದಕ್ಕಿಂತ, ಕೈಲಾದ ನೆರವು ಮಾಡಿ ಅವರ ಬದುಕಿಗೆ ನೆರವಾಗಬೇಕು. ಆ ನಿಟ್ಟಿನಲ್ಲಿ ಸಕ್ಷಮ ಮತ್ತು ಮಜೇಥಿಯಾ ಸಂಸ್ಥೆ ಕಾರ್ಯ ಶ್ಲಾಘನೀಯ' ಎಂದರು.
'ಅಂಗವಿಕಲರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕಿಮ್ಸ್ನಲ್ಲಿ ದಿವ್ಯಾಂಗ ಸೇವಾ ಕೇಂದ್ರ ತೆರೆದಿರುವುದು ಉತ್ತಮ ಕೆಲಸ. ಇಂತಹ ಕೆಲಸಗಳು ಇನ್ನೂ ಹೆಚ್ಚಾಗಬೇಕು. ನಮ್ಮ ಅವ್ವ ಸೇವಾ ಟ್ರಸ್ಟ್ನಿಂದ ಸಂಸ್ಥೆಗೆ ಯಾವೆಲ್ಲ ನೆರವು ಬೇಕೋ ಅವುಗಳನ್ನು ಮಾಡುತ್ತೇನೆ' ಎಂದು ಹೇಳಿದರು.
ಸಕ್ಷಮಾ ಅಧ್ಯಕ್ಷ ಎಸ್.ಬಿ. ಶೆಟ್ಟಿ ಮಾತನಾಡಿ, 'ಕಿಮ್ಸ್ಗೆ ಪ್ರತಿನಿತ್ಯ ಸಾವಿರಾರು ರೋಗಿಗಳು ಬರುತ್ತಾರೆ. ಅವರಲ್ಲಿ ಅಂಗವಿಕಲರು ಸಹ ಇರುತ್ತಾರೆ. ಅವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಸುಲಭವಾಗಿ ಸಿಗುವಂತೆ ಮಾಡಲು ಕಿಮ್ಸ್, ಮಜೇಥಿಯಾ ಸಹಯೋಗದಲ್ಲಿ ಕೇಂದ್ರ ಸ್ಥಾಪಿಸಿದ್ದೇವೆ. ಕೇಂದ್ರದಲ್ಲಿ ಇಬ್ಬರು ಕಾರ್ಯಕರ್ತರು ಮಾಹಿತಿ ಹಾಗೂ ಸಹಾಯ ಮಾಡುತ್ತಾರೆ' ಎಂದರು.
ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ, ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಕಿಮ್ಸ್ ಮುಖ್ಯ ಆಡಳಿತಾಧಿಕಾರಿ ಸುಮಾ ಗುಮಾಸ್ತೆ,ಮಜೇಥಿಯಾ ಫೌಂಡೇಷನ್ ಚೇರ್ಮೆನ್ ಜಿತೇಂದ್ರ ಮಜೇಥಿಯಾ, ಉದ್ಯಮಿ ಪಿ.ಆರ್. ನಾಯಕ, ವೈದ್ಯಕೀಯ ಅಧೀಕ್ಷಕ ಸಿ. ಅರುಣಕುಮಾರ, ಸ್ಥಾನಿಕ ವೈದ್ಯಾಧಿಕಾರಿ ಡಾ. ಸಿದ್ಧೇಶ್ವರ ಕಡಕೋಳ, ಡಾ. ಸುನಿಲ್ ಗೋಖಲೆ, ಡಾ. ಈಶ್ವರ ಹೊಸಮನಿ, ದೊಡ್ಡಪ್ಪ ಮೂಲಿಮನಿ, ಉಪ ಅಧೀಕ್ಷಕಿ ಡಾ. ಜಾನಕಿ, ನಾಗಲಿಂಗ ಮುರಗಿ, ಡಾ. ಸುಭಾಷ್ ಬಬ್ರುವಾಡ, ದೊಡ್ಡಪ್ಪ ಮೂಲಿಮನಿ ಇದ್ದರು.
ಕೋವಿಡ್ ರಾಮಲಿಂಗಪ್ಪ: ಹೊರಟ್ಟಿ ಹಾಸ್ಯ
ಕೋವಿಡ್ ಸಂದರ್ಭದಲ್ಲಿ ಕಿಮ್ಸ್ ಸಾಕಷ್ಟು ಮಂದಿಯ ಪ್ರಾಣ ಉಳಿಸಿದೆ. ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಪ್ರಸಿದ್ಧವಾಯಿತು. ಬೆಂಗಳೂರಲ್ಲಿಯೂ ಕಿಮ್ಸ್ ಬಗ್ಗೆ ಹೆಮ್ಮೆಯ ಮಾತುಗಳು ಕೇಳಿ ಬಂದವು. ಆ ಸಂದರ್ಭ ನಿರ್ದೇಶಕ ರಾಮಲಿಂಗಪ್ಪ ಅವರ ಕಾರ್ಯ ನಿರ್ವಹಣೆ ಮೆಚ್ಚುಗೆಗೆ ಪಾತ್ರವಾಯಿತು. ನಾವು ಕೋವಿಡ್ ರಾಮಲಿಂಗಪ್ಪ ಎಂದೇ ಕರೆಯುತ್ತಿದ್ದೆವು' ಎಂದು ಬಸವರಾಜ ಹೊರಟ್ಟಿ ಚಟಾಕಿ ಹಾರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.