ಹುಬ್ಬಳ್ಳಿಯ ಕೆಎಲ್ಇ ಸಂಸ್ಥೆಯ ಬಿ.ವಿ.ಭೂಮರಡ್ಡಿ ಎಂಜಿನಿಯರಿಂಗ್(ಬಿವಿಬಿ) ಕಾಲೇಜು ಆವರಣದಲ್ಲಿ ಹೊಸದಾಗಿ ಆರಂಭವಾಗಿರುವ ಸಂಗೀತ ಕಾರಂಜಿ ನಗರದ ಜನತೆಯನ್ನು ಕೈಬೀಸಿ ಕರೆಯುತ್ತಿದೆ. ಪ್ರತಿ ದಿನ ಸಂಜೆ 6.30ರಿಂದ 7ಗಂಟೆವರೆಗೆ ಪ್ರದರ್ಶನವಾಗುವ ಈ ಸಂಗೀತ ಕಾರಂಜಿಯ ವೈವಿಧ್ಯಮಯ ಧ್ವನಿ, ಬೆಳಕಿನ ನರ್ತನ ನೋಡುಗರ ಮನಸೂರೆಗೊಳಿಸುತ್ತಿದೆ.
ಸಂಗೀತ ಕಾರಂಜಿ ವೀಕ್ಷಣೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಇರುವುದರಿಂದ ಬಿವಿಬಿ ಕ್ಯಾಂಪಸ್ ಸಂಜೆಯಾಗುತ್ತಲೇ ಪ್ರವಾಸಿ ತಾಣವಾಗಿ ಮಾರ್ಪಡುತ್ತಿದೆ. ಪ್ರತಿ ದಿನ ನೂರಕ್ಕೂ ಅಧಿಕ ಜನ ಆನಂದಿಸುತ್ತಿದ್ದಾರೆ. ವಾರಾಂತ್ಯದಲ್ಲಿ 200ಕ್ಕೂ ಹೆಚ್ಚು ಪ್ರೇಕ್ಷಕರು ಇಲ್ಲಿಗೆ ಭೇಟಿ ನೀಡಿ ಕಣ್ಮನ ತಣಿಸಿಕೊಳ್ಳುತ್ತಿದ್ದಾರೆ. ಪ್ರೇಕ್ಷಕರಿಗಾಗಿ ಕಲ್ಲು ಬೆಂಚಿನ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಧಾರವಾಡ ಜಿಲ್ಲೆಯಲ್ಲೇ ಈ ಸಂಗೀತ ಕಾರಂಜಿ ಪ್ರಥಮ ಎನಿಸಿದೆ.
ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಆಡಳಿತ ಕಚೇರಿಯ ಮುಂಭಾಗದಲ್ಲಿ ಮೈಚಾಚಿಕೊಂಡಿರುವ ಹುಲ್ಲು ಹಾಸಿನ ಆವರಣದಲ್ಲಿ ಭವ್ಯವಾದ ಕಾರಂಜಿ, ಆಗಸದೆತ್ತರಲ್ಲಿ ಹಾರಾಡುವ ಬೃಹತ್ ತಿರಂಗಾ ಬಾವುಟ, ಸುತ್ತಲೂ ತೆಂಗಿನ, ಹೂವಿನ ಗಿಡಗಳ ಸೌಂದರ್ಯದ ನಡುವೆ ಪುಟಿಯುವ ಸಂಗೀತ ಕಾರಂಜಿ ಭ್ರಮಾಲೋಕವೇ ಹುಬ್ಬಳ್ಳಿಯಲ್ಲಿ ಮೈದಳೆದಂತೆ ಭಾಸವಾಗುತ್ತದೆ.
ವರನಟ ಡಾ.ರಾಜ್ಕುಮಾರ್ ಗಾಯನದ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು..’ ಹಾಡಿನೊಂದಿಗೆ ಆರಂಭವಾಗುವ ಸಂಗೀತ ಕಾರಂಜಿ ಹಾಡು ಮತ್ತು ಸಂಗೀತದ ಏರಿಳಿತಕ್ಕೆ ತಕ್ಕಂತೆ ವೈಯಾರದಿಂದ ಬಾಗಿ, ಬಳುಕಿ ನರ್ತಿಸುವುದನ್ನು ನೋಡಲು ಎರಡು ಕಣ್ಣು ಸಾಲದು.
‘ಲಕ್ಷ್ ಹೈ...’, ‘ವಂದೇ ಮಾತರಂ...‘ ದೇಶ ಭಕ್ತಿಗೀತೆಗಳಿಗೆ ಮೈನವಿರೇಳುವಂತೆ ನೀರು ಆಗಸದೆತ್ತರಕ್ಕೆ ಚಿಮ್ಮುವ ಮೂಲಕ ಮಬ್ಬುಗತ್ತಲಿನಲ್ಲಿ ಮನ ತಣಿಸುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.