ADVERTISEMENT

ಧಾರವಾಡ: ರಾಷ್ಟ್ರೀಯ ಲೋಕ ಅದಾಲತ್ ಸೆ.9ಕ್ಕೆ 

​ಪ್ರಜಾವಾಣಿ ವಾರ್ತೆ
Published 25 ಜುಲೈ 2023, 13:56 IST
Last Updated 25 ಜುಲೈ 2023, 13:56 IST
   

ಧಾರವಾಡ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳ ಆದೇಶದಂತೆ ಜಿಲ್ಲೆಯ ಎಲ್ಲ ಕೋರ್ಟ್‌ಗಳಲ್ಲಿ ಸೆಪ್ಟೆಂಬರ್‌ 9ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ.

ಇಲ್ಲಿ ಬಾಕಿ ಇರುವ ರಾಜಿ ಆಗಬಹುದಾದ ಸಿವಿಲ್ ವ್ಯಾಜ್ಯ, ಮೋಟಾರ್ ವಾಹನ ಅಪಘಾತ ಪರಿಹಾರದ ಪ್ರಕರಣಗಳು, ಭೂ ಸ್ವಾಧೀನ ಪ್ರಕರಣಗಳು, ವಿದ್ಯುತ್ ಮಂಡಳಿ ಮುಂತಾದ ಸ್ಥಳೀಯ ಸಂಸ್ಥೆಗಳ ಪರ ಮತ್ತು ವಿರುದ್ಧ ದಾಖಲಾದ ಹಾಗೂ ಎಲ್ಲ ತರಹದ ಪ್ರಕರಣಗಳನ್ನು ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ಪ್ರಕಟಣೆ ತಿಳಿಸಿದೆ.

ಶಿಕ್ಷಕರ ಪರಸ್ಪರ ವರ್ಗಾವಣೆ: ಕೌನ್ಸೆಲಿಂಗ್ ಇಂದಿನಿಂದ

ADVERTISEMENT

ಧಾರವಾಡ: 2022-23ನೇ ಸಾಲಿನಲ್ಲಿ ಅಂತರ್ ವಿಭಾಗ ಮಟ್ಟದ ವರ್ಗಾವಣೆಗೆ ಅರ್ಜಿ ಸಲ್ಲಿಸಿರುವ ಎಲ್ಲ ಅರ್ಹ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕರುಗಳಿಗೆ ಅಂತಿಮ ಆದ್ಯತಾ ಪಟ್ಟಿಯ ಪ್ರಕಾರ ಜುಲೈ 26 ರಿಂದ ಆಗಸ್ಟ್‌ 11ರವರೆಗೆ ಕೋರಿಕೆ ಪರಸ್ಪರ ವರ್ಗಾವಣಾ ಕೌನ್ಸೆಲಿಂಗ್‌ ಗೆ ಅವಕಾಶ ಕಲ್ಪಿಸಲಾಗಿದೆ.

ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಸ್ಟೇಟ್ ಆನ್‌ಲೈನ್ ಕೌನ್ಸೆಲಿಂಗ್ ಪ್ರಕ್ರಿಯೆ ಮೂಲಕ ಮಾರ್ಪಡಿಸಿದ ವೇಳಾಪಟ್ಟಿಯಂತೆ ಬೆಳಿಗ್ಗೆ 9 ರಿಂದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ನಡೆಯಲಿದೆ.

ಅಂತರ ವಿಭಾಗ ಮಟ್ಟದ ವರ್ಗಾವಣೆಗೆ ಅರ್ಜಿ ಸಲ್ಲಿಸಿರುವ ಅರ್ಹ ಶಿಕ್ಷಕರುಗಳು ನಿಗದಿತ ದಿನಾಂಕ ಹಾಗೂ ಸಮಯಕ್ಕೆ ಅಧಿಕೃತ ಮೂಲ ದಾಖಲೆಗಳೊಂದಿಗೆ ಕೌನ್ಸಲಿಂಗ್‌ಗೆ ಹಾಜರಾಗುವಂತೆ ಪ್ರಕಟಣೆ ತಿಳಿಸಿದೆ.

31 ರಂದು ಪಾಲಿಕೆ ಸಾಮಾನ್ಯ ಸಭೆ 

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯನ್ನು ಜುಲೈ 31 ರ ಬೆಳಿಗ್ಗೆ 11ಕ್ಕೆ ಧಾರವಾಡದಲ್ಲಿನ ಮಹಾನಗರ ಪಾಲಿಕೆಯ ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಸಭಾ ಭವನದಲ್ಲಿ ನಿಗದಿಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮದ್ಯ ಮಾರಾಟ ನಿಷೇಧ

ಧಾರವಾಡ: ಮೊಹರಂ ಹಬ್ಬದ ಆಚರಣೆ ಸಮಯದಲ್ಲಿ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಜುಲೈ 28 ರಿಂದ 31 ರವರೆಗೆ ಮದ್ಯ ಸಾಗಾಣಿಕೆ ಮತ್ತು ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ.

ಎಲ್ಲ ತಾಲ್ಲೂಕುಗಳಲ್ಲಿ ಅಂದಿನ ಸಂಜೆ 6 ರಿಂದ ‌ಜುಲೈ 30ರ ಸಂಜೆ 6ರವರೆಗೆ ಹಾಗೂ ಹುಬ್ಬಳ್ಳಿ ಗ್ರಾಮೀಣ ತಾಲ್ಲೂಕು ಅರಳಿಕಟ್ಟಿ ಗ್ರಾಮ ಮತ್ತು ಕುಂದಗೋಳ ತಾಲ್ಲೂಕಿನ ಯರಗುಪ್ಪಿ, ಯರಿನಾರಾಯಣಪುರ, ಚಿಕ್ಕನರ್ತಿ, ಮುಳ್ಳೋಳ್ಳಿ, ಪಶುಪತಿಹಾಳ ಗ್ರಾಮಗಳಲ್ಲಿ 29 ರ ಸಂಜೆ 6ರಿಂದ 31 ರ ಬೆಳಿಗ್ಗೆ 6ರವರೆಗೆ ನಿಷೇಧಿಸಲಾಗಿದೆ.

ಈ ಸಮಯದಲ್ಲಿ ಮದ್ಯಪಾನ, ಮಾರಾಟ, ಸಾಗಾಟ ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಬಕಾರಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಬೆಳೆಗಳ ನೋಂದಣಿಗೆ ಜುಲೈ 31 ಕೊನೆ

ಧಾರವಾಡ: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿಗೆ ಅನುಷ್ಠಾನಗೊಳಿಸಲಾಗಿದೆ. ಜಿಲ್ಲೆಯಾದ್ಯಂತ ಈವರೆಗೆ 46,863 ರೈತರು ವಿವಿಧ ಬೆಳೆಗಳಿಗೆ ಈ ಯೋಜನೆಯಡಿ ಪ್ರಿಮಿಯಂ ಪಾವತಿಸಿ ನೊಂದಣಿ ಮಾಡಿಕೊಂಡಿದ್ದಾರೆ.

ಕೆಂಪು ಮೆಣಸಿನಕಾಯಿ ಆಗಸ್ಟ್‌ 16 ರಂದು ಹೊರತುಪಡಿಸಿ ಉಳಿದೆಲ್ಲ ಬೆಳೆಗಳಿಗೆ ನೋಂದಣಿ ಮಾಡಿಕೊಳ್ಳಲು ಇದೇ 31 ಕೊನೆಯ ದಿನವಾಗಿದೆ. ಜಿಲ್ಲೆಯ ಎಲ್ಲ ರೈತರು ಈ ಯೋಜನೆಯಡಿ ನೊಂದಣಿ ಮಾಡಿಕೊಂಡು ಪ್ರಯೋಜನ ಪಡೆಯುವಂತೆ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.