ADVERTISEMENT

ರಾಷ್ಟ್ರೀಯ ವಿಚಾರ ಸಂಕಿರಣ ನಾಳೆ

ನ್ಯಾಯಾಧೀಶರಾದ ಜಿ.ಕೆ ಕಾಲೇಜಿನ ವಿದ್ಯಾರ್ಥಿಗಳಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 13:08 IST
Last Updated 7 ಫೆಬ್ರುವರಿ 2019, 13:08 IST

ಹುಬ್ಬಳ್ಳಿ: ನಗರದ ಬಿ.ವಿ.ಬಿ ಕ್ಯಾಂಪಸ್‌ನ ಐ.ಎಂ.ಎಸ್‌.ಆರ್‌ ಸಭಾಂಗಣದಲ್ಲಿ ಫೆ. 9ರಂದು ಬೆಳಿಗ್ಗೆ 9.30ರಿಂದ ‘ಬೌದ್ಧಿಕ ಸ್ವತ್ತಿನ ಹಕ್ಕುಗಳು, ಹೊಸ ಆಯಾಮಗಳು ಮತ್ತು ಸಮಸ್ಯೆಗಳು’ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ.

ಕೆಎಲ್‌ಇ ಸಂಸ್ಥೆಯ ಗುರುಸಿದ್ದಪ್ಪ ಕೋತಂಬ್ರಿ (ಜಿ.ಕೆ) ಕಾನೂನು ಮಹಾವಿದ್ಯಾಲಯ, ಬೆಳಗಾವಿಯ ಕೆಎಲ್‌ಇ ಕಾನೂನು ಅಕಾಡೆಮಿ, ಜಿ.ಕೆ. ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆಯಾಗಿದೆ.

ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್‌ ವಿಚಾರ ಸಂಕಿರಣಕ್ಕೆ ಚಾಲನೆ ನೀಡಲಿದ್ದಾರೆ. ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ಪ್ರಾಧ್ಯಾಪಕ ಟಿ. ರಾಮಕೃಷ್ಣ ಪ್ರಧಾನ ಭಾಷಣ ಮಾಡಲಿದ್ದಾರೆ’ ಎಂದರು.

ADVERTISEMENT

‘ನಮ್ಮ ಮಹಾವಿದ್ಯಾಲಯದಲ್ಲಿ ಶಿಕ್ಷಣ ಪಡೆದು ವಿವಿಧೆಡೆ ನ್ಯಾಯಾಧೀಶರಾಗಿ ಕೆಲಸ ಮಾಡುತ್ತಿರುವ ಅಶ್ವಿನಿ ಶಿರಿಯಣ್ಣವರ, ಚಂದ್ರಶೇಖರ ಬಣಕಾರ, ಟಿ.ಕೆ. ಪ್ರಿಯಾಂಕಾ, ಸುಮಲತಾ ಬೆಣಕಲ್‌, ಅಮೃತಾ ಬಂಗಾರಶೆಟ್ಟರ, ಸಂತೋಷ ದೈವಜ್ಞ, ಹರೀಶ ಜಾಧವ, ಸಿದ್ಧಲಿಂಗೇಶ ಗಂಗಾಧರಮಠ ಹಾಗೂ ಜ್ಯೋತಿ ಪಾಟೀಲ ಅವರನ್ನು ಸನ್ಮಾನಿಸಲಾಗುವುದು’ ಎಂದರು.

ಜಿ.ಕೆ. ಕಾನೂನು ಕಾಲೇಜಿನ ಪ್ರಾಚಾರ್ಯೆ ಡಾ. ಶಾರದಾ ಜಿ. ಪಾಟೀಲ ಮಾತನಾಡಿ ‘ತಂತ್ರಜ್ಞಾನ ವೇಗವಾಗಿ ಬೆಳೆದ ಬಳಿಕ ಹಕ್ಕು ಸ್ವಾಮ್ಯ, ಬೌದ್ಧಿಕ ಸ್ವತ್ತಿನ ಶೋಷಣೆ ಬಗ್ಗೆ ಪ್ರಮುಖವಾಗಿ ಚರ್ಚೆಯಾಗುತ್ತಿದೆ. ಬೌದ್ಧಿಕ ಆಸ್ತಿಯ ಆವಿಷ್ಕಾರಗಳ ಬಗ್ಗೆ ರಕ್ಷಿಸಲು ಇರುವ ಕಾನೂನಾತ್ಮಕ ಹಾದಿಗಳ ಬಗ್ಗೆ ವಿಚಾರ ಸಂಕಿರಣದಲ್ಲಿ ತಜ್ಞರು ವಿಷಯ ಮಂಡನೆ ಮಾಡಲಿದ್ದಾರೆ’ ಎಂದರು.

ಒಟ್ಟು ನಾಲ್ಕು ಗೋಷ್ಠಿಗಳು ಜರುಗಲಿದ್ದು, ಬೇರೆ ಬೇರೆ ರಾಜ್ಯಗಳಿಂದ ಬರುವ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಸಂಶೋಧನಾರ್ಥಿಗಳು ಬೌದ್ಧಿಕ ಸ್ವತ್ತಿನ ಹಕ್ಕುಗಳ ಬಗ್ಗೆ ಸಂಶೋಧನಾ ಪ್ರಬಂಧ ಮಂಡಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.