
ನವಲಗುಂದ (ಧಾರವಾಡ ಜಿಲ್ಲೆ): ಪಟ್ಟಣದ ಗಾಂಧಿ ಮಾರುಕಟ್ಟೆಯ ಬೀದಿಬದಿ ವ್ಯಾಪಾರಸ್ಥರು ತ್ಯಾಜ್ಯ ವಿಲೇವಾರಿಗೆ ಸಹಕರಿಸುತ್ತಿಲ್ಲ ಎಂಬ ಕಾರಣಕ್ಕೆ ಪಾಠ ಕಲಿಸಲು ಮುಂದಾದ ನವಲಗುಂದ ಪುರಸಭೆ ಅಧಿಕಾರಿಗಳು, ಕೆಲ ಅಂಗಡಿಗಳ ಎದುರು ಸೋಮವಾರ ಟ್ರ್ಯಾಕ್ಟರ್ ಮೂಲಕ ತ್ಯಾಜ್ಯ ಸುರಿದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಪುರಸಭೆ ಆರೋಗ್ಯಾಧಿಕಾರಿ ಸಾವಿತ್ರಿ ಮುಷ್ಯಪ್ಪನವರ, ‘ನಿತ್ಯ ಎರಡು ಬಾರಿ ಕಸ ಸಂಗ್ರಹಣೆ ವಾಹನವು ಬಂದರೂ ಕೆಲವರು ಸಹಕರಿಸುತ್ತಿಲ್ಲ. ಕುಳಿತ ಜಾಗದ ಪಕ್ಕ ಅಥವಾ ರಸ್ತೆ ಮೇಲೆ ಕಸ ಎಸೆಯುತ್ತಾರೆ. ಅದಕ್ಕೆ ಅವರಿಗೆ ಪಾಠ ಕಲಿಸಲು ಈ ರೀತಿ ಮಾಡಲಾಗಿದೆ’ ಎಂದರು.
‘ಈ ಬಾರಿ ದಂಡ ವಿಧಿಸಿ, ಕ್ಷಮಾಪಣಾ ಪತ್ರ ಪಡೆದು ಕಸ ವಿಲೇವಾರಿ ಸಮರ್ಪಕ ರೀತಿ ಮಾಡುವಂತೆ ತಾಕೀತು ಮಾಡುತ್ತೇವೆ. ಪುನಃ ಇದೇ ತರಹ ಎಲ್ಲೆಂದರಲ್ಲಿ ಕಸ ಹಾಕಿದರೆ, ಕ್ರಮ ಜರುಗಿಸಲಾಗುವುದು’ ಎಂದರು.
‘ಯಾರೋ ಒಬ್ಬರು ರಸ್ತೆಯಲ್ಲಿ ಕಸ ಹಾಕುವುದರಿಂದ ಸಮಸ್ಯೆಯಾಗಿದೆ. ಅಂಥವರನ್ನು ನಿಖರವಾಗಿ ಗುರುತಿಸಿ ಪುರಸಭೆಯವರು ಕ್ರಮ ಕೈಗೊಳ್ಳಬೇಕು. ದಂಡ ವಿಧಿಸಿ, ತಾಕೀತು ಮಾಡಬೇಕು ‘ ಎಂದು ನವಲಗುಂದ ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರಿಯಾಜ ನಾಶಿಪುಡಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.