ADVERTISEMENT

ದೇವಿ ಆರಾಧನೆಯ ‘ನವರಾತ್ರಿ’ ಇಂದಿನಿಂದ

ಜಗನ್ಮಾತೆಯ ತ್ರಿವಿಧ ರೂಪಗಳ ಸ್ತುತಿ : ಮಹಾಕಾಳಿ, ಲಕ್ಷ್ಮಿ, ಸರಸ್ವತಿ ಪೂಜೆ

ರಾಮಕೃಷ್ಣ ಸಿದ್ರಪಾಲ
Published 26 ಸೆಪ್ಟೆಂಬರ್ 2022, 20:15 IST
Last Updated 26 ಸೆಪ್ಟೆಂಬರ್ 2022, 20:15 IST
ಬನಶಂಕರಿ ದೇವಿ
ಬನಶಂಕರಿ ದೇವಿ   

ಹುಬ್ಬಳ್ಳಿ: ಜಗನ್ಮಾತೆಯಾಗಿ, ಸಂಪತ್ತಿನ ಅಧಿದೇವತೆಯಾಗಿ, ಜ್ಞಾನದಾತೆಯಾಗಿ ಒಂಬತ್ತು ದಿನ ದೇವಿಯನ್ನು ಆರಾಧಿಸುವ ಆಚರಣೆಯೇ ‘ನವರಾತ್ರಿ’. ಆದಿ ಶಕ್ತಿಯನ್ನು ನವವಿಧಗಳಲ್ಲಿ ಪೂಜಿಸುವ ವೃತಾಚರಣೆಯಿದು. ಅವಳಿ ನಗರದ ಬಹುತೇಕ ಎಲ್ಲ ದೇವಿ, ದುರ್ಗಾದೇವಾಲಯಗಳಲ್ಲಿ ಸಿದ್ಧತೆಗಳು ನಡೆದಿದ್ದು ಸೋಮವಾರದಿಂದ ‘ಘಟ (ಕಲಶ) ಸ್ಥಾಪನೆ’ ಯೊಂದಿಗೆ ದೇವಿ ಉಪಾಸನೆ ಆರಂಭಗೊಳ್ಳುತ್ತಿದೆ.

ನವರಾತ್ರಿ ಆರಂಭದಲ್ಲಿ ಸಮೃದ್ಧಿ ಸಂಕೇತವಾಗಿ ಘಟ (ಕಲಶ) ಸ್ಥಾಪನೆ ಮಾಡುವುದು ವಾಡಿಕೆ. ಕಲಶದಲ್ಲಿ ದೇವತೆಗಳು ಇರುತ್ತವೆ ಎಂಬ ಧಾರ್ಮಿಕ ನಂಬಿಕೆಯಿದೆ. ಅದರೊಳಗೆ ಶುದ್ಧ ಮಣ್ಣಿನ ಪದರಗಳನ್ನು ಹಾಕಿ, ಅನ್ನಬ್ರಹ್ಮ , ಅನ್ನಪೂರ್ಣೇಶ್ವರಿಯ ಸಂಕೇತವೆಂದು ಪರಿಗಣಿಸಿ ಏಳು ಬಗೆಯ ಧಾನ್ಯಗಳನ್ನು ಬಿತ್ತಿ, ದೂರ್ವೆ, ಅಕ್ಷತೆ, ವೀಳ್ಯದೆಲೆ, ನಾಣ್ಯ, ಮಾವಿನ ಎಲೆ, ತೆಂಗಿನಕಾಯಿ ಇಟ್ಟು ಕಲಶ ಸ್ಥಾಪನೆ ಮಾಡಲಾಗುತ್ತದೆ.

ನವರಾತ್ರಿಯಲ್ಲಿ ‘ದುರ್ಗಾ ಸಪ್ತಶತಿ’ ಪಾರಾಯಣವನ್ನು ಬಹುತೇಕ ಮನೆಗಳಲ್ಲಿ, ದೇವಾಲಯಗಳಲ್ಲಿ ಪ್ರತಿದಿನ ಪಠಿಸಲಾಗುತ್ತದೆ. ಅದಕ್ಕೆ ‘ಚಂಡಿಪಾರಾಯಣ’ ಎಂಬ ಹೆಸರೂ ಇದೆ. ದೇವಿಭಾಗವತ, ಲಲಿತಾಪೂಜೆ, ಸರಸ್ವತಿಪೂಜೆ, ಉಪವಾಸ, ಜಾಗರಣೆ ನವರಾತ್ರಿಯ ಆಚರಣೆಯ ಭಾಗಗಳಾಗಿವೆ. ಒಂಬತ್ತು ದಿನ ಉಪವಾಸವೂ ವೃತಾಚರಣೆಯ ವಿಶೇಷ. ಹತ್ತನೆಯ ದಿನ 'ವಿಜಯ ದಶಮಿ'. ಶಮಿ(ಬನ್ನಿ)ವೃಕ್ಷಕ್ಕೆ ಪೂಜೆ ಸಲ್ಲಿಸಿ ಬನ್ನಿ ವಿನಿಮಯ ಮಾಡುವುದು ಸಂಪ್ರದಾಯ.

ADVERTISEMENT

ತ್ರಿವಿಧ ರೂಪಗಳಲ್ಲಿ ಆರಾಧನೆ:

ದುರ್ಗೆಯನ್ನು ಶಿವನ ಅರ್ಧವೆಂದು ಪರಿಗಣಿಸಲಾಗಿದೆ. ಸಿಂಹನ ಮೇಲೆ ಕುಳಿತ ದುರ್ಗೆ ಶಕ್ತಿಯ ಪ್ರತೀಕ. ನಮ್ಮ ಪುರಾಣದ ಪ್ರಕಾರ, ಜಗನ್ಮಾತೆ, ಆದಿ ಶಕ್ತಿ ರಾಕ್ಷಸರನ್ನು ಸಂಹಾರ ಮಾಡಲು ಒಂದೊಂದು ಅವತಾರವೆತ್ತಿ ಅವರನ್ನು ಸಂಹರಿಸಿ ಲೋಕವನ್ನು ಕಾಪಾಡುತ್ತಾಳೆ.

ನವರಾತ್ರಿಯಲ್ಲಿನ ಮೊದಲ ಮೂರು ದಿನ(ಪಾಡ್ಯ–ತದಿಗೆ)ಮಹಾಕಾಳಿ ಆರಾಧನೆ, ನಂತರದ ಮೂರು ದಿನ (ಚೌತಿ–ಷಷ್ಠಿ) ಮಹಾಲಕ್ಷ್ಮಿ ಮತ್ತು ಕೊನೆಯ ಮೂರು ದಿನ (ಸಪ್ತಮಿ–ನವಮಿ) ಜ್ಞಾನಕ್ಕಾಗಿ ಸರಸ್ವತಿ ಪೂಜೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಪುಸ್ತಕ, ಪವಿತ್ರಗ್ರಂಥಗಳನ್ನಿಟ್ಟು ಪೂಜಿಸುವುದು ವಾಡಿಕೆ. ನವಮಿಯಂದು ಮನೆಯಲ್ಲಿನ ವಿಶೇಷ ವಸ್ತು, ಆಯುಧಗಳನ್ನು ಪೂಜಿಸಲಾಗುತ್ತದೆ.

ನಮ್ಮ ಪುರಾಣಗಳ ಪ್ರಕಾರ, ಮಹಿಷಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿ ‘ಮಹಿಷಾಸುರ ಮರ್ದಿನಿ’ಯಾಗಿ ದುಷ್ಟಶಕ್ತಿಗಳ ಮೇಲೆ ವಿಜಯವನ್ನು ಸಾಧಿಸಿದ ದಿನ ವಿಜಯದಶಮಿ. ತ್ರೇತಾಯುಗದಲ್ಲಿ ರಾಮನು ರಾವಣನನ್ನು ಸಂಹರಿಸಿದ ದಿನ. ದ್ವಾಪರದಲ್ಲಿ ಪಾಂಡವರು ಅಜ್ಞಾತವಾಸ ಮುಗಿಸಿ, ಬನ್ನಿ ಮರದಿಂದ ತಮ್ಮ ಆಯುಧಗಳನ್ನು ಮರಳಿ ಪಡೆದು ಕುರುಕ್ಷೇತ್ರದಲ್ಲಿ ಕೌರವರನ್ನು ಸೋಲಿಸಿ ವಿಜಯ ಸಾಧಿಸಿದ ದಿನ ವಿಜಯದಶಮಿ...ಒಟ್ಟಾರೆ ವಿಜಯದ ಸಂಕೇತವಾಗಿ ನವರಾತ್ರಿಯ ಕೊನೆಯ ದಿನ ‘ಬನ್ನಿ’ ವಿನಿಮಿಯ, ವಿಜಯದಶಮಿಯೊಂದಿಗೆ ‘ದಸರಾ’ ಆಚರಣೆ ಮುಕ್ತಾಯಗೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.