ಧಾರವಾಡ: 'ಒಂದು ರಾಜ್ಯ ಒಂದು ಗ್ರಾಮೀಣ ಬ್ಯಾಂಕ್’ ನೀತಿಯನ್ವಯ ಕೇಂದ್ರ ಸರ್ಕಾರವು ವಿಲೀನ ಅಧಿಸೂಚನೆ ಹೊರಡಿಸಿದ್ದು, ರಾಜ್ಯದಲ್ಲಿನ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಕೆವಿಜಿಬಿ) ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕ್ (ಕೆಜಿಬಿ) ವಿಲೀನವಾಗಿ ಮೇ 1ರಿಂದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಉದಯಿಸಲಿದೆ.
ಈ ನೂತನ ಬ್ಯಾಂಕ್ ಪ್ರಧಾನ ಕಚೇರಿ ಬಳ್ಳಾರಿಯಲ್ಲಿ ಇದೆ. ಕೆವಿಜಿಬಿ ಅಧ್ಯಕ್ಷ ಶ್ರೀಕಾಂತ ಎಂ. ಭಂಡಿವಾಡ ಅವರು ನೂತನ ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಧಾರವಾಡದಲ್ಲಿ ಪ್ರಧಾನ ಕಚೇರಿಯಿದ್ದ ಕೆವಿಜಿಬಿ ಒಂಬತ್ತು ಜಿಲ್ಲೆಗಳಲ್ಲಿ ಒಟ್ಟು 629 ಶಾಖೆ ಹೊಂದಿದ್ದು, ವಹಿವಾಟು ₹38,714 ಕೋಟಿ ಇದೆ. ಬಳ್ಳಾರಿಯಲ್ಲಿ ಪ್ರಧಾನ ಕಚೇರಿ ಇದ್ದ ಕೆಜಿಬಿ 22 ಜಿಲ್ಲೆಗಳಲ್ಲಿ ಒಟ್ಟು 1,122 ಶಾಖೆ ಹೊಂದಿದ್ದು, ವಹಿವಾಟು ₹ 66,137 ಕೋಟಿ ಇದೆ.
‘ಎರಡೂ ಗ್ರಾಮೀಣ ಬ್ಯಾಂಕ್ಗಳು ಪ್ರಾದೇಶಿಕ ಅಭಿವೃದ್ಧಿಯಲ್ಲಿ ಪಾತ್ರ ವಹಿಸಿವೆ. ರೈತರು, ಬಡವರ, ಕುಶಲ ಕರ್ಮಿಗಳಿಗೆ ನೆರವಾಗಿವೆ. ಇದೀಗ ವಿಲೀನವಾಗಿ ಉದಯಿಸಿರುವ ನೂತನ ಬ್ಯಾಂಕ್ ವಿಶ್ವಾಸದಿಂದ ಮುನ್ನಡೆಯಲಿದೆ’ ಎಂದು ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ ಬಂಡಿವಾಡ ತಿಳಿಸಿರುವುದಾಗಿ ಬ್ಯಾಂಕ್ನ ಎಜಿಎಂ ಉಲ್ಲಾಸ್ ಆರ್.ಗುನಗಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.