
ಅಳ್ನಾವರ: ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಭರದಿಂದ ನಡೆದಿವೆ. ಇದನ್ನೇ ಅವಕಾಶ ಮಾಡಿಕೊಂಡು ಹಲವು ಮಾರಾಟಗಾರರು ಬಿತ್ತನೆ, ಬೀಜ ಗೊಬ್ಬರವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುವ ದೂರುಗಳು ಬಂದರೆ ಅಂಥವರ ಮೇಲೆ ಸೂಕ್ತ ಕ್ರಮ ಕೈಕೊಳ್ಳಲಾಗುವದು ಎಂದು ಧಾರವಾಡ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ಅಣ್ಣುಗೌಡರ ತಿಳಿಸಿದರು.
ಪಟ್ಟಣದ ರಸಗೊಬ್ಬರ ಮತ್ತು ಬೀಜ ಮಾರಾಟ ಮಳಿಗೆಗಳಿಗೆ ಶುಕ್ರವಾರ ಬೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳೆಗಳಿಗೆ ಅವಶ್ಯವಿರುವ ಪೋಷಕಾಂಶಗಳು ವಿವಿಧ ಕಂಪನಿಯ ರಸಗೊಬ್ಬರದಲ್ಲಿ ಒಳಗೊಂಡಿರುತ್ತದೆ. ರೈತರು ನಿರ್ದಿಷ್ಟ ಕಂಪನಿಯ ಗೊಬ್ಬರವೇ ಬೇಕು ಎನ್ನುವ ಮನೋಭಾವನೆಯಿಂದ ಹೊರಗೆ ಬಂದು ಸಾರಜನಕ ಮತ್ತು ರಂಜಕ ಇರುವ ರಾಸಾಯನಿಕ ಗೊಬ್ಬರವನ್ನು ಬಳಕೆ ಮಾಡಿಕೊಳ್ಳಬೇಕು ಎಂದರು.
ಬೇವು ಲೇಪಿತ ಯೂರಿಯಾ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆಯಾ ಬೆಳೆಗಳಿಗೆ ತಕ್ಕಂತೆ ಅದನ್ನು ಉಪಯೋಗಿಸಬಹುದು. ವ್ಯಾಪಾರಸ್ಥರು ಕೃತಕ ಅಭಾವ ಸೃಷ್ಠಿ ಮಾಡುವುದು
ಕಾಯ್ದೆಗೆ ವಿರುದ್ದವಾಗಿದೆ. ನಿಯಮಿತವಾಗಿ ರಸಗೊಬ್ಬರ ಮತ್ತು ಬೀಜದ ದಾಸ್ತಾನಿನ ಬಗ್ಗೆ ಸರ್ಕಾರಕ್ಕೆ ವಿವರಣೆ ನೀಡುವುದು ಕಡ್ಡಾಯ. ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಸರ್ಕಾರ ನಿಗದಿ ಮಾಡಿದ ರಿಯಾಯತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಆರಂಭವಾಗಿದೆ. ರೈತರು ಇದರ ಲಾಭ ಪಡೆದುಕೊಳ್ಳಿ ಎಂದರು.
ನಿಗದಿಪಡಿಸಿದ ದರದಲ್ಲಿಯೇ ಗೊಬ್ಬರ ಮಾರಾಟ ಮಾಡುವಂತೆ ತಾಲ್ಲೂಕಿನ ಎಲ್ಲಾ ರಾಸಾಯನಿಕ ಗೊಬ್ಬರ ಮಾರಾಟಗಾರರಿಗೆ ನಿರ್ದೇಶನ ನೀಡಲಾಗಿದೆ. ಹೆಚ್ಚಿನ ದರಕ್ಕೆ ಮಾರುವುದು ಕಂಡು ಬಂದಲ್ಲಿ ಕೃಷಿ ಇಲಾಖೆಗೆ ಮಾಹಿತಿ ಕೊಡಬಹುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.