ADVERTISEMENT

ವಾಯವ್ಯ ಸಾರಿಗೆಗೆ 330 ಹೊಸ ಬಸ್‌

2025-26ನೇ ಸಾಲಿನಲ್ಲಿ ಗುಜರಿಗೆ ಸೇರಲಿವೆ 289 ಬಸ್‌

ನಾಗರಾಜ ಚಿನಗುಂಡಿ
Published 24 ಜನವರಿ 2026, 2:32 IST
Last Updated 24 ಜನವರಿ 2026, 2:32 IST
ಗುಜರಿಗೆ ಹೋಗಲಿರುವ ಬಳಕೆಯಾಗದ ಎನ್‌ಡಬ್ಲುಕೆಆರ್‌ಟಿಸಿ ಬಸ್‌ (ಫೈಲ್‌ ಚಿತ್ರ)
ಗುಜರಿಗೆ ಹೋಗಲಿರುವ ಬಳಕೆಯಾಗದ ಎನ್‌ಡಬ್ಲುಕೆಆರ್‌ಟಿಸಿ ಬಸ್‌ (ಫೈಲ್‌ ಚಿತ್ರ)   

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ (ಎನ್‌ಡಬ್ಲುಕೆಆರ್‌ಟಿಸಿ) 2025–26 ವರ್ಷಾಂತ್ಯಕ್ಕೆ ಒಟ್ಟು 289 ಬಸ್‌ಗಳು ಗುಜರಿಗೆ ಹೋಗುತ್ತಿದ್ದು, ಇವುಗಳ ಜಾಗಕ್ಕೆ ಹೊಸದಾಗಿ 330 ಹೊಸ ಬಸ್‌ಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ.

ಹೊಸ ಬಸ್‌ಗಳ ಚೆಸ್ಸಿ ತಪಾಸಣೆ ಕಾರ್ಯ ಮುಗಿದಿದ್ದು, ಬರುವ ಫೆಬ್ರುವರಿ 1ರಿಂದ ನಿಗದಿತ ಸಂಖ್ಯೆಯಲ್ಲಿ ಆಯಾ ಡಿಪೊಗಳಿಗೆ ಹೊಸ ಬಸ್‌ಗಳನ್ನು ಪೂರೈಸುವಂತೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಸೂಚಿಸಿದ್ದಾರೆ. 2026–27ನೇ ಹಣಕಾಸು ವರ್ಷದಲ್ಲಿ 550 ಬಸ್‌ಗಳು 15 ವರ್ಷ ಪೂರ್ಣಗೊಳಿಸಿ, ಗುಜರಿಗೆ ಹೋಗಲಿವೆ. ಇದೇ ಅವಧಿಯಲ್ಲಿ ಹೊಸ ಬಸ್‌ಗಳನ್ನು ಖರೀದಿಸುವ ಜೊತೆಗೆ ಶಕ್ತಿ ಯೋಜನೆಯ ಬೇಡಿಕೆ ಪೂರೈಸಲು ಹೆಚ್ಚುವರಿ ಬಸ್‌ಗಳನ್ನು ಹೊಂದಬೇಕಾದ ಸವಾಲು ಸಂಸ್ಥೆಗೆ ಎದುರಾಗಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಡಿಸೆಂಬರ್‌ ಅಂತ್ಯದವರೆಗೂ 266 ಬಸ್‌ಗಳು ಗುಜರಿಗೆ ಹೋಗಿವೆ. ಹೀಗಾಗಿ ಹಳೆ ಬಸ್‌ಗಳ ಜಾಗಕ್ಕೆ ಹೊಸ ಬಸ್‌ಗಳು ಬರುತ್ತಿವೆ. ‘ವಾಸ್ತವದಲ್ಲಿ ಸಂಸ್ಥೆಗೆ ಇನ್ನೂ ಸಾಕಷ್ಟು ಸಂಖ್ಯೆಯಲ್ಲಿ ಹೊಸ ಬಸ್‌ಗಳು ಮತ್ತು ಸಿಬ್ಬಂದಿ ಬೇಕಾಗಿದೆ. ಶಕ್ತಿ ಯೋಜನೆಯಡಿ ಸಂಚರಿಸುವ ಪ್ರಯಾಣಿಕರ ಸಂಖ್ಯೆಯನ್ನು ಪರಿಗಣಿಸಿದರೆ ಇನ್ನಷ್ಟು ಬಸ್‌ಗಳು ಮತ್ತು ಸಿಬ್ಬಂದಿ ಬೇಕೇಬೇಕು’ ಎನ್ನುತ್ತಿದ್ದಾರೆ ಎನ್‌ಡಬ್ಲುಕೆಆರ್‌ಟಿಸಿ ಅಧಿಕಾರಿಗಳು.

ADVERTISEMENT

‘ಪ್ರತಿವರ್ಷವೂ ಸಿಬ್ಬಂದಿ ನಿವೃತ್ತಿ ಆಗುತ್ತಿದ್ದಾರೆ. ಅದೇ ರೀತಿ ಹಳೇ  ಬಸ್‌ಗಳು ಗುಜರಿಗೆ ಹೋಗುತ್ತಿವೆ. ಖಾಲಿಯಾದ ಜಾಗ ತುಂಬಲಾಗುತ್ತಿದೆ ವಿನಾ ಹೆಚ್ಚುವರಿಯಾಗಿ ಹೊಸ ಬಸ್‌ಗಳನ್ನು ಮತ್ತು ಸಿಬ್ಬಂದಿ ನೇಮಕ ಮಾಡಿಕೊಳ್ಳುವುದಕ್ಕೆ ಆಗುತ್ತಿಲ್ಲ’ ಎಂದು ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

‘ಎರಡು ಬಸ್‌ ಸಂಚರಿಸುವ ಗ್ರಾಮೀಣ ಮಾರ್ಗಕ್ಕೆ ಮತ್ತೆರಡು ಹೊಸ ಬಸ್‌ ಕೊಡಬೇಕಿದೆ. ನಾಲ್ಕು ಬಸ್‌ಗಳು ಸಂಚರಿಸುವ ಮಾರ್ಗಕ್ಕೆ ಕನಿಷ್ಠ ಇನ್ನು ಮೂರು ಬಸ್‌ಗಳು ಬೇಕಾಗಿವೆ. ಸಮೀಪದ ಊರುಗಳಲ್ಲಿ ಸಂಚರಿಸುವ ಪ್ರಯಾಣಿಕರ ಅನುಕೂಲ ನೋಡಿಕೊಂಡು ಅಗತ್ಯವಿದ್ದಷ್ಟು ಬಸ್‌ಗಳನ್ನು ಬಿಡುವುದು ಸಂಸ್ಥೆಗೆ ದೊಡ್ಡ ಸವಾಲಾಗಿದೆ. ಮುಂಬರುವ ವರ್ಷಗಳಲ್ಲಿ ಭಾರಿ ಸಂಖ್ಯೆಯಲ್ಲಿ ಹೊಸ ಬಸ್‌ಗಳನ್ನು ಸೇರ್ಪಡೆ ಮಾಡಿಕೊಳ್ಳುವುದು ಮತ್ತು ಅದಕ್ಕೆ ತಕ್ಕಂತೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ತಯಾರಿ ಮಾಡಿಕೊಳ್ಳಬೇಕಿದೆ’ ಎನ್ನುವುದು ಹಿರಿಯ ಅಧಿಕಾರಿಗಳ ವಿವರಣೆ.

ಸಾರಿಗೆ ಸಂಸ್ಥೆಯು ಈ ಮೊದಲು ಹೊಂದಿದ ಮೂಲಸೌಕರ್ಯವನ್ನೇ ಬಳಸಿಕೊಂಡು ಅತಿಹೆಚ್ಚಿನ ಸಂಖ್ಯೆಯ ಪ್ರಯಾಣಿಕರಿಗೆ ಸಂಚಾರ ಸೇವೆ ಒದಗಿಸುತ್ತಿದೆ. ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಬಸ್‌ಗಳನ್ನು ಹಾಗೂ ಮೂಲಸೌಕರ್ಯವನ್ನು ಹೆಚ್ಚಿಸಿಕೊಳ್ಳುವುದಾದರೆ, ವರಮಾನವು ಹೆಚ್ಚಳವಾಗಲಿದೆ.

ಹೆಚ್ಚಳವಾದ ಬೇಡಿಕೆ

20 ಕಿ.ಮೀ.ಗಿಂತ ಹೆಚ್ಚು ದೂರದ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಬಸ್‌ಗಳ ಕೊರತೆಯಿಲ್ಲ. ಜಿಲ್ಲಾ ಕೇಂದ್ರ ಹಾಗೂ ಪ್ರಮುಖ ತಾಲ್ಲೂಕು ಕೇಂದ್ರಗಳ ಸುತ್ತಮುತ್ತ ಶಕ್ತಿ ಯೋಜನೆಯಡಿ ಸಂಚರಿಸುವ ಪ್ರಯಾಣಿಕರಿಗೆ ಬಸ್‌ಗಳು ಸಾಕಾಗುತ್ತಿಲ್ಲ. ಶಕ್ತಿ ಯೋಜನೆ ಆರಂಭವಾಗುವ ಮುನ್ನ ಜನರು ಖಾಸಗಿ ವಾಹನಗಳಲ್ಲಿ ಸಂಚರಿಸುತ್ತಿದ್ದರು. ಸರ್ಕಾರಿ ಬಸ್‌ ಪ್ರಯಾಣಿಕರಿಲ್ಲದೆ ಖಾಲಿಖಾಲಿ ಹೋಗಿ ಬರುತ್ತಿದ್ದವು. ಈಗ ಪರಿಸ್ಥಿತಿ ಭಿನ್ನವಾಗಿದೆ. ಮಹಿಳಾ ಪ್ರಯಾಣಿಕರು ಬಹುತೇಕ ಸರ್ಕಾರಿ ಬಸ್‌ನಲ್ಲಿ ಸಂಚರಿಸಲು ಆದ್ಯತೆ ನೀಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.