ಹುಬ್ಬಳ್ಳಿ: ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ನೀಡುವ ಆಹಾರವನ್ನು ಗುಣಮಟ್ಟ ಪರೀಕ್ಷಾ ಅಧಿಕಾರಿಗಳು ನಿತ್ಯ ತಪಾಸಣೆಗೆ ಒಳಪಡಿಸುತ್ತಿದ್ದಾರೆ.
ಇಲ್ಲಿನ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್ )ಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಆಹಾರ ಗುಣಮಟ್ಟದ ಬಗ್ಗೆ ತಕರಾರು ತೆಗೆದಿದ್ದರು. ಸೋಂಕಿತರಿಗೆ ಒಳ್ಳೆಯ ಊಟ ಕೊಡುತ್ತಿಲ್ಲ ಎಂದು ದೂರಿದ್ದರು.
ಇತ್ತೀಚಿಗೆ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಹೋಗಿದ್ದ ಕಳ್ಳತನದ ಆರೋಪ ಹೊತ್ತಿರುವ ಸೋಂಕಿತ ವ್ಯಕ್ತಿ ನನಗೆ ಊಟ ಸರಿಯಾಗಿ ಸಿಗದ ಕಾರಣ ತಪ್ಪಿಸಿಕೊಂಡು ಹೋಗಿದ್ದೆ ಎಂದು ಹೇಳಿದ್ದ. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಕಡ್ಡಾಯವಾಗಿ ಗುಣಮಟ್ಟದ ಊಟ ಕೊಡಬೇಕು, ಸೋಂಕಿತರಿಗೆ ಅಹಾರ ಕೊಡುವ ಮೊದಲು ಅದನ್ನು ಅಧಿಕಾರಿಗಳು ಪರೀಕ್ಷೆ ಮಾಡಬೇಕು ಎಂದು ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ನಿತ್ಯ ಆಹಾರ ಪರೀಕ್ಷೆ ಮಾಡಿ ಜಿಲ್ಲಾಧಿಕಾರಿಗೆ ಮಾಹಿತಿ ನೀಡುತ್ತಿದ್ದಾರೆ. ಸೋಂಕಿತರಿಗೆ ಆಹಾರ ವಿತರಿಸುವ ಹೊಣೆಯನ್ನು ಮಮ್ಮಾಸ್ ಲಂಚ್ ಬಾಕ್ಸ್ ಫುಡ್ ಟೆಕ್ ಪ್ರೈವೇಟ್ ಲಿಮಿಟೆಡ್ ಕಂಪನಿ ಗುತ್ತಿಗೆ ಪಡೆದುಕೊಂಡಿದೆ.
ಪೌಷ್ಠಿಕ ಆಹಾರ: ಸೋಂಕಿತರು ಬೇಗ ಗುಣಮುಖರಾಗಲು ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಮೊದಲು ನೀಡುತ್ತಿದ್ದ ಆಹಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ವಿಷಯವನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೆವು. ಆಹಾರದ ಮೆನು ಬದಲಿಸಲು ಅವರು ಸೂಚಿಸಿದ್ದರು ಎಂದು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ತಿಳಿಸಿದರು.
ಗುರುವಾರದ ಮಧ್ಯಾಹ್ನಕ್ಕೆ ಚಪಾತಿ, ಅಲಸಂದಿ ಪಲ್ಯ, ಅನ್ನ ಹಾಗೂ ಸಾರು ನೀಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.