ಹುಬ್ಬಳ್ಳಿ: ನಮ್ಮ ಪಕ್ಷದ ಬೆಳವಣಿಗೆ ಸಹಿಸಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಆಗುತ್ತಿಲ್ಲ. ಹೀಗಾಗಿ ನಮ್ಮ ಪಕ್ಷದ ಬಗ್ಗೆ ಲಘುವಾಗಿ ಹೇಳಿಕೆ ಕೊಡುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮಹಾನಗರ ಪಾಲಿಕೆ ಚುನಾವಣಾ ಉಸ್ತುವಾರಿ ಶಾಂತಲಾ ದಾಮ್ಲೆ ಟೀಕಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಮಹಾನಗರ ಪಾಲಿಕೆ ಚುನಾವಣೆಗೆ ನಮ್ಮ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಪ್ರಲ್ಹಾದ ಜೋಶಿ ಆಪ್ ಕೇವಲ ಸಾಮಾಜಿಕ ತಾಣದಲ್ಲಿದೆ ಎಂದಿದ್ದರು. ಅವರ ಈ ಹೇಳಿಕೆಗೆ ಚುನಾವಣೆಯ ಮೂಲಕವೇ ಉತ್ತರ ಕೊಡಲಾಗುವುದು’ ಎಂದರು.
ಪಕ್ಷದ ಮುಖಂಡ ಎಚ್.ಡಿ. ಬಸವರಾಜು ಮಾತನಾಡಿ ‘ಮಹಾನಗರ ಪಾಲಿಕೆಯಲ್ಲಿ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ, ಜನರಿಗೆ ನೀಡಿದ ಯಾವ ಭರವಸೆ ಈಡೇರಿಸಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೂ ಅಭಿವೃದ್ಧಿಯಾಗಿಲ್ಲ. ಜಿಲ್ಲೆಯ ಬಿಜೆಪಿ ನಾಯಕರಲ್ಲಿ ಅಸಮಾಧಾನ ಹೊಗೆಯಾಡುತ್ತಿದ್ದು, ಚುನಾವಣಾ ಫಲಿತಾಂಶದಲ್ಲಿ ಅದು ಗೊತ್ತಾಗುತ್ತದೆ. ಖಾತೆ ಕ್ಯಾತೆಯಿಂದ ರಾಜ್ಯದಲ್ಲಿಯೂ ಸರ್ಕಾರ ಸರಿಯಾಗಿ ಆಡಳಿತ ನಡೆಸುತ್ತಿಲ್ಲ’ ಎಂದು ಟೀಕಿಸಿದರು.
ಎರಡನೇ ಪಟ್ಟಿ ಬಿಡುಗಡೆ: ಇದೇ ವೇಳೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು.
ಮೆಹಬೂಬ್ ಇಬ್ರಾಹಿಂ ಹದ್ಲಿ (ವಾರ್ಡ್: 3), ಶರೀಫ್ ಸಾಬ ಮಡಿಕೇಶ್ವರ (8), ಹಸೀನಾಬಾನು ನಿಸ್ಸಾರ ಅಹ್ಮದ್ ಮಮದಾಪೂರ (10), ಶ್ರೀರಂಗ ಮುತಾಲಿಕ್ ದೇಸಾಯಿ (29), ಶಿವಯೋಗಿ ಹೂಲಿ (33), ಮೋಹನ ಮದನಗೌಡ ಪಾಟೀಲ (53), ನಾರಾಯಣ ಯಲ್ಲಪ್ಪ ಮೊರಬ್ (55), ವಿಕ್ಕಿ ಆಶಿಸ್ ಇಗೋಣಿ (61), ರವಿ ಬಸವರಾಜ ಅರಳೀಕಟ್ಟಿ (67) ಮತ್ತು ಲತಾ ವೈಶಾಖವರ್ಮನ್ ಕೊಯಿಲೊ (70).
***
ಜಿಲ್ಲೆಯಲ್ಲಿಯೂ ಪಕ್ಷದ ಬೆಳವಣಿಗೆ ಸಹಿಸದೆ ಕೆಲವರು ಪರೋಕ್ಷವಾಗಿ ತಡೆ ಒಡ್ಡುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಕಾನೂನು ಹೋರಾಟ ಮಾಡಬೇಕಾಗುತ್ತದೆ.
-ಸಂತೋಷ ನರಗುಂದ,ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.