ADVERTISEMENT

ಹಲಾಲ್ ಮುಕ್ತ ದೀಪಾವಳಿ ಆಚರಣೆಗೆ ಮುತಾಲಿಕ್ ಕರೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2022, 8:13 IST
Last Updated 15 ಅಕ್ಟೋಬರ್ 2022, 8:13 IST
ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಮಾತನಾಡಿದರು
ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಮಾತನಾಡಿದರು   

ಹುಬ್ಬಳ್ಳಿ: 'ಪ್ರಸ್ತುತ ದೀಪಾವಳಿ ಸಂದರ್ಭ ಮುಸ್ಲಿಮ್ ವ್ಯಾಪಾರಸ್ಥರಿಂದ ಹಿಂದೂಗಳು ಯಾವುದೇ ವಸ್ತುಗಳನ್ನು ಖರೀದಿಸದೆ ಹಾಗೂ ಹಲಾಲ್ ಗುರುತು ಇರುವ ವಸ್ತುಗಳನ್ನು ನಿರಾಕರಿಸಿ ಹಲಾಲ್ ಮುಕ್ತ ಹಬ್ಬ ಆಚರಿಸಬೇಕು' ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಕರೆ ನೀಡಿದರು.

'ಮುಸ್ಲಿಂ ವ್ಯಾಪಾರಸ್ಥರಿಂದ ಹಬ್ಬದ ಸಾಮಗ್ರಿಗಳನ್ನು ಖರೀದಿಸಿದರೆ ಅದು ಅಶಾಸ್ತ್ರೋಕ್ತವಾಗುತ್ತದೆ. ಹಿಂದೂ ಸಂಪ್ರದಾಯ, ಸಂಸ್ಕೃತಿಗೆ ಅದು ವಿರೋಧ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಅವರಿಂದ ಕಬ್ಬು, ಹೂವು, ಹಣ್ಣು, ಬಾಳೆ ಗಿಡ ಸೇರಿದಂತೆ ಯಾವುದೇ ವಸ್ತುಗಳನ್ನು ಖರೀದಿಸಬಾರದು. ಹಿಂದೂ ವ್ಯಾಪಾರಸ್ಥರಿಂದಲೇ ಖರೀದಿಸಿ ಶಾಸ್ತ್ರೋಕ್ತವಾಗಿ ಹಬ್ಬ ಆಚರಿಸಬೇಕು. ಇದು ನಮ್ಮ ಮನವಿಯಲ್ಲ, ಆಗ್ರಹ' ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

'ಹಲಾಲ್ ಪ್ರಮಾಣ ಪತ್ರಕ್ಕೆ ಸರ್ಕಾರದಿಂದ ಮಾನ್ಯತೆಯಿಲ್ಲ. ಆದರೂ ಜಮಾತ್ ಉಲೇಮಾ ಹಿ‌ಂದ್ ಹಲಾಲ್ ಟ್ರಸ್ಟ್ ಸೇರಿದಂತೆ ಕೆಲವು ಸಂಘಟನೆಗಳು ಔಷಧಿ, ಆಹಾರೋತ್ಪನ್ನ ಹಾಗೂ ಇನ್ನಿತರ ವಸ್ತುಗಳ ಮೇಲೆ ಹಲಾಲ್ ಗುರುತು ಹಾಕಲು‌ ಪ್ರಮಾಣ ಪತ್ರ ನೀಡುತ್ತಿದೆ. ಹಲ್ದಿರಾಮ್ ಕಂಪನಿ 140 ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದು, ಅದರ ಮೇಲೂ ಹಲಾಲ್ ಗುರುತು ಇವೆ. ಕಾನೂನು ಬಾಹಿರವಾಗಿ ನೀಡುವ ಪ್ರಮಾಣ ಪತ್ರವನ್ನು ಕೇಂದ್ರ‌ ಸರ್ಕಾರ ರದ್ದು ಪಡಿಸಬೇಕು. ಇದಕ್ಕೆ ಹಿಂದೂ ಸಂಘಟನೆಗಳ ಸಂಪೂರ್ಣ ಬೆಂಬಲವಿದೆ' ಎಂದರು.

ADVERTISEMENT

'ಹಲಾಲ್ ಉತ್ಪನ್ನದಿಂದ ಬರುವ ಆದಾಯ ಜಗತ್ತಿನಲ್ಲಿಯೇ ಆತಂಕ ಸೃಷ್ಟಿಸಿದೆ. ಆರ್ಥಿಕವಾಗಿ ಅವರು ಬಲಿಷ್ಠವಾಗುತ್ತಿದ್ದು, ಆ ಹಣವನ್ನು ಭಯೋತ್ಪಾದನೆಗೆ ಹಾಗೂ ದೇಶದ್ರೋಹಿ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ. ಹುಬ್ಬಳ್ಳಿ ಗಲಭೆಗೆ, ಕೆಜಿ ಹಳ್ಳಿ ಧಂಗೆಗೂ ಅಲ್ಲಿಂದಲೇ ಹಣ ಬಂದಿದೆ' ಎಂದು ಆರೋಪಿಸಿದರು.

ಹಿಂದೂ ಸಂಘಟನೆಯ ಗಂಗಾಧರ ಕುಲಕರ್ಣಿ, ರೂಪಾ ಧವಲಿ, ಹನುಮಂತ ನಿರಂಜನ, ಗುರುಪ್ರಸಾದ ಗೌಡ ಇದ್ದರು.

ಹಲಾಲ್ ಇಲ್ಲದ ವಸ್ತು ಹರಾಮ್ ಎಂದು ಕುರಾನ್ ಹೇಳುತ್ತಿದೆ. ಅದನ್ನು ಹಿಂದೂಗಳಾದ ನಾವ್ಯಾಕೆ ಖರೀದಿಸಬೇಕು
- ಪ್ರಮೋದ ಮುತಾಲಿಕ, ಮುಖ್ಯಸ್ಥ, ಶ್ರೀರಾಮ ಸೇನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.