ADVERTISEMENT

ಹೊಸ ರೈಲು ಸಂಚಾರ ಆರಂಭಿಸಲು ಪ್ರಸ್ತಾವ: ರವಿಂದ್ರ ಎಸ್‌.ಬಳಿಗಾರ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 15:50 IST
Last Updated 20 ಜೂನ್ 2025, 15:50 IST
ಹುಬ್ಬಳ್ಳಿಯ ಗದಗ ರಸ್ತೆಯ ರೈಲ್ವೆ ವರ್ಕ್‌ಶಾಪ್‌ನಲ್ಲಿ ಶುಕ್ರವಾರ ನಡೆದ ಡಿಆರ್‌ಯುಸಿಸಿ ಸಭೆಯಲ್ಲಿ ನೈರುತ್ಯ ರೈಲ್ವೆ ವಿಭಾಗದ ಅಧಿಕಾರಿಗಳು ಡಿಆರ್‌ಯುಸಿಸಿ ಸದಸ್ಯರು ಭಾಗವಹಿಸಿದ್ದರು
ಹುಬ್ಬಳ್ಳಿಯ ಗದಗ ರಸ್ತೆಯ ರೈಲ್ವೆ ವರ್ಕ್‌ಶಾಪ್‌ನಲ್ಲಿ ಶುಕ್ರವಾರ ನಡೆದ ಡಿಆರ್‌ಯುಸಿಸಿ ಸಭೆಯಲ್ಲಿ ನೈರುತ್ಯ ರೈಲ್ವೆ ವಿಭಾಗದ ಅಧಿಕಾರಿಗಳು ಡಿಆರ್‌ಯುಸಿಸಿ ಸದಸ್ಯರು ಭಾಗವಹಿಸಿದ್ದರು    

ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಬೆಂಗಳೂರಿಗೆ ವಂದೇ ಭಾರತ್‌ ಸ್ಲೀಪರ್‌ ಕೋಚ್‌ ವಿಶೇಷ ರೈಲು ಸಂಚಾರ ಆರಂಭಿಸಬೇಕು. ಹುಬ್ಬಳ್ಳಿ– ತಿರುಪತಿಗೆ ಹೆಚ್ಚುವರಿಯಾಗಿ ಮತ್ತೊಂದು ವಿಶೇಷ ರೈಲು ಸಂಚಾರ ಆರಂಭಿಸಬೇಕು ಸೇರಿದಂತೆ ಹೊಸ ರೈಲು ಸಂಚಾರದ ಬೇಡಿಕೆ ಕುರಿತು ನೈರುತ್ಯ ರೈಲ್ವೆ ಅಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಯಿತು ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಗೌರವ ಕಾರ್ಯದರ್ಶಿ, ಡಿಆರ್‌ಯುಸಿಸಿ ಸದಸ್ಯ ರವಿಂದ್ರ ಎಸ್‌.ಬಳಿಗಾರ ತಿಳಿಸಿದ್ದಾರೆ. 

ಗದಗ ರಸ್ತೆಯ ರೈಲ್ವೆ ವರ್ಕ್‌ಶಾಪ್‌ನಲ್ಲಿ ಶುಕ್ರವಾರ ನಡೆದ ಡಿಆರ್‌ಯುಸಿಸಿ ಸಭೆಯಲ್ಲಿ ಪ್ರಸ್ತಾಪ ಸಲ್ಲಿಸಿದ ಅವರು, ಹುಬ್ಬಳ್ಳಿ– ಬಿಜಾಪುರ– ತಿರುಪತಿಯಿಂದ ಹೊಸ ರೈಲನ್ನು ಗದಗ, ಹೊಸಪೇಟೆ, ಬಳ್ಳಾರಿ ಮತ್ತು ಮದನಪಲ್ಲಿ ಮೂಲಕ ಸಂಚರಿಸಲು ಅನುಮತಿ ನೀಡಬೇಕು. ಇದರಿಂದ ಪ್ರಯಾಣಿಕರ ದಟ್ಟಣೆ ಕಡಿಮೆಯಾಗುತ್ತದೆ. 

ಗದಗ ಮತ್ತು ಬಳ್ಳಾರಿ ಮೂಲಕ ಬೆಳಗಾವಿ– ಭದ್ರಾಚಲಂ ನಡುವೆ ವಿಶೇಷ ರೈಲುನ್ನು (7335/7336) ನಿಯಮಿತವಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಮರು ಆರಂಭಿಸಬೇಕು.  

ADVERTISEMENT

ದೀರ್ಘಕಾಲದಿಂದ ಬಾಕಿ ಇರುವ ಯೋಜನೆಗಳಾದ ಹುಬ್ಬಳ್ಳಿ– ಅಂಕೋಲ ಮಾರ್ಗ, ಧಾರವಾಡ– ಬೆಳಗಾವಿ ಮಾರ್ಗ, ಹುಬ್ಬಳ್ಳಿ– ಶಿರಸಿ– ತಾಳಗುಪ್ಪ ಯೋಜನೆ ನವೀಕರಿಸಬೇಕು. 

ಸರಕು ಸಾಗಣೆ ಮೂಲಸೌಕರ್ಯ ಸುಧಾರಣೆಗಾಗಿ ಧಾರವಾಡದ ನವಲೂರಿನಲ್ಲಿ ಕಂಟೇನರ್ ಲೋಡಿಂಗ್ ಸೌಲಭ್ಯ, ಬಾದಾಮಿಯಲ್ಲಿ ಗೂಡಶೆಡ್ ಸೌಲಭ್ಯ ಆರಂಭಿಸಬೇಕು. ಇದರಿಂದ ಆ ಭಾಗದ ವ್ಯಾಪಾರಸ್ಥರಿಗೆ ಅನುಕೂಲವಾಗುತ್ತದೆ.

ಯಶವಂತಪುರ– ವಾಸ್ಕೊ ಎಕ್ಸ್‌ಪ್ರೆಸ್‌ ಹಾಗೂ ಜನಶತಾಬ್ದಿ ಎಕ್ಸ್‌ಪ್ರೆಸ್‌ ರೈಲನ್ನು ಬ್ಯಾಡಗಿ ರೈಲು ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ನಿಲುಗಡೆಗೆ ಅವಕಾಶ ನೀಡಬೇಕು ಎಂದು ಪ್ರಸ್ತಾವ ಸಲ್ಲಿಸಲಾಯಿತು. ಡಿಆರ್‌ಯುಸಿಸಿ ಸದಸ್ಯ ಚನ್ನವೀರ ಮುಂಗರವಾಡಿ, ನೈರುತ್ಯ ರೈಲ್ವೆ ಅಧಿಕಾರಿಗಳು ಇದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.