ಹುಬ್ಬಳ್ಳಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗಾಗಿ ಕರೆದಿದ್ದ ಟೆಂಡರ್ನಲ್ಲಿ ಪಾಲಿಕೆ ಅಧಿಕಾರಿಗಳು ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿ, ಶೌಚಾಲಯ ನಿರ್ವಹಣೆಯ ಗುತ್ತಿಗೆದಾರ ಹಾಗೂ ಉತ್ತರ ಕರ್ನಾಟಕ ಅಭಿವೃದ್ಧಿ ಹೋರಾಟ ಸೇನೆ ಅಧ್ಯಕ್ಷ ಗಂಗಾಧರ ಪೇರೂರ ಪಾಲಿಕೆ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.
ಪಾಲಿಕೆಯ ಘನತ್ಯಾಜ್ಯ ನಿರ್ವಹಣಾ ವಿಭಾಗದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ ಪೇರೂರ, ತಮಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
‘ಶೌಚಾಲಯಗಳ ನಿರ್ವಹಣೆಗಾಗಿ ನಮ್ಮ ಸಂಸ್ಥೆ ಪಡೆದಿದ್ದ ಟೆಂಡರ್ನ ಪ್ಯಾಕೇಜ್ 1 ಮತ್ತು 2ರ ಪಟ್ಟಿಯಲ್ಲಿದ್ದ 12 ಶೌಚಾಲಯಗಳನ್ನು ತೆಗೆದು ಹಾಕಿ, ಅವುಗಳ ನಿರ್ವಹಣೆಯನ್ನು ಬಿಹಾರ ಮೂಲದವರಿಗೆ ನೀಡಿದ್ದಾರೆ. ಇದಕ್ಕಾಗಿ ಅಧಿಕಾರಿಗಳು ಲಂಚ ಪಡೆದಿದ್ದಾರೆ’ ಎಂದು ಗಂಗಾಧರ ಪೇರೂರ ಆರೋಪಿಸಿದರು.
‘ನಮ್ಮ ಪ್ಯಾಕೇಜ್ನಲ್ಲಿ ಈದ್ಗಾ ಮೈದಾನದ ಶೌಚಾಲಯ ಸೇರಿದಂತೆ ಜನನಿಬಿಡ ಪ್ರದೇಶದ ಶೌಚಾಲಯಗಳಿದ್ದವು. ಅದರ ಆದೇಶ ಪತ್ರ ನೀಡಲು ಅಧಿಕಾರಿಗಳು ಪೀಡಿಸುತ್ತಿದ್ದಾರೆ. ಜತೆಗೆ, ಆದೇಶವನ್ನು ರದ್ದು ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಮೂರ್ನಾಲ್ಕು ತಿಂಗಳಾದರೂ ಶೌಚಾಲಯಗಳ ಕಬ್ಜಾ ಕೊಟ್ಟಿಲ್ಲ’ ಎಂದು ಆರೋಪಿಸಿದ ಅವರು, ‘ಟೆಂಡರ್ ಪ್ರಕಾರ ಪ್ಯಾಕೇಜ್ 1 ಮತ್ತು 2ರ ಪಟ್ಟಿಯಲ್ಲಿದ್ದ ಶೌಚಾಲಯಗಳ ನಿರ್ವಹಣೆಯನ್ನು ನಮ್ಮ ಸಂಸ್ಥೆಗೆ ನೀಡಬೇಕು’ ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.