
ಹುಬ್ಬಳ್ಳಿ: ‘ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಜನಪ್ರತಿನಿಧಿಗಳಿಂದ ಕೇಳಿ ಪಡೆಯಬೇಕು. ಕೇವಲ ಜೈಕಾರ ಹಾಕಿದರೆ ಸಮಾಜದ ಉದ್ಧಾರ ಸಾಧ್ಯವಿಲ್ಲ’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ನಗರದ 63ನೇ ವಾರ್ಡ್ನ ಬಾನಿ ಓಣಿಯಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಅಂದಾಜು ₹3 ಕೋಟಿ ಅನುದಾನದ ವಿವಿಧ ಕಾಮಗಾರಿಗಳಿಗೆ ಈಚೆಗೆ ಚಾಲನೆ ನೀಡಿ ಮಾತನಾಡಿದರು.
‘ಸಮಾಜದ ಏಳ್ಗೆಗೆ ಎಲ್ಲರೂ ಒಗ್ಗಟ್ಟಾಗಿ ಚಿಂತನೆ ಮಾಡಬೇಕು. ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯವಿದ್ದು, ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದರು.
ಸಮುದಾಯ ಭವನ, ಸಾರ್ವಜನಿಕ ಶೌಚಾಲಯ, ಒಳಚರಂಡಿ, ಚರಂಡಿ ಮತ್ತು ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಅವರು, ‘ಹೆಚ್ಚಿನ ಅನುದಾನ ಅಗತ್ಯವಿದ್ದರೆ ಮಂಡಳಿಯಿಂದ ನೀಡಲಾಗುವುದು’ ಎಂದು ಭರವಸೆ ನೀಡಿದರು.
ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಇಲಿಯಾಸ್ ಮನಿಯಾರ್, ಮುಖಂಡರಾದ ಈಶ್ವರಪ್ಪ ಶಿರಕೋಳ, ಪರಮೇಶ್ವರ ಶಿರಕೋಳ, ಲಕ್ಷ್ಮಣ ಹಂಡೇನವರ, ಮಲ್ಲಪ್ಪ ಶಿರಕೋಳ, ವಿನಾಯಕ ಶಿರಕೋಳ, ಮಂಜುನಾಥ ಜಂಗ್ಲಿ, ಸೂರಿ-ಗಿರಿ ಮಾನಶೆಟ್ಟರ, ರಾಕೇಶ್ ಪಲ್ಲಾಟಿ ಇದ್ದರು.
ಬಾನಿ ಓಣಿಯಲ್ಲಿ ಜನರಿಗೆ ಸಮಸ್ಯೆ ಆಗದಂತೆ ಭೂಗತ ಕೇಬಲ್ ಅಳವಡಿಕೆಗೆ ಶಾಸಕರು ಸೂಚಿಸಿದ್ದಾರೆ
-ರುದ್ರೇಶ ಘಾಳಿ ಆಯುಕ್ತ ಹು–ಧಾ ಮಹಾನಗರ ಪಾಲಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.