
ಧಾರವಾಡ: ‘ಸಂಶೋಧನಾ ವಿದ್ಯಾರ್ಥಿಗಳು ಕ್ವಾಂಟಮ್ ಭೌತವಿಜ್ಞಾನದಲ್ಲಿ ನವ ಸಂಶೋಧನೆ ನಡೆಸಬೇಕು. ಭವಿಷ್ಯದ ಸವಾಲುಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು’ ಎಂದು ಬೆಂಗಳೂರು ವಿ.ವಿಯ ವಿಶ್ರಾಂತ ಕುಲಪತಿ ಪ್ರೊ.ಕೆ.ಸಿದ್ದಪ್ಪ ಹೇಳಿದರು.
ಪಿಎಂ ಉಷಾ ಯೋಜನೆ, ಎಂ.ಆರ್.ಗೋರಬಾಳ್ ಫೌಂಡೇಷನ್, ಭೌತಶಾಸ್ತ್ರ ಅಲ್ಯುಮ್ನಿ ಅಸೋಸಿಯೇಷನ್, ಸ್ಪೈ ಸ್ಟೂಡೆಂಟ್ ಚಾಪ್ಟರ್ ಸಹಯೋಗದಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಕ್ವಾಂಟಮ್ ಭೌತಶಾಸ್ತ್ರದ 100 ವರ್ಷಗಳು: ಬೆಳವಣಿಗೆಗಳು ಮತ್ತು ನಾವಿನ್ಯ ಭೌತಿಕತೆಯಲ್ಲಿ ಬಹುಶಿಸ್ತೀಯ ಅನ್ವಯಿಕೆಗಳು’ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
‘ಕ್ವಾಂಟಮ್ ಭೌತವಿಜ್ಞಾನವು ವೈದ್ಯಕೀಯ ಮತ್ತು ಉದ್ಯಮ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ‘ಲೇಸರ್ ಲೆಪ್ರೊಸ್ಕೊಪಿ’, ‘ಕ್ವಾಂಟಮ್ ಕಂಪ್ಯೂಟಿಂಗ್ ಟೆಕ್ನಾಲಜಿ’ ಮುನ್ನೆಲೆಗೆ ಬಂದಿವೆ. ಈ ತಂತ್ರಜ್ಞಾನಗಳು ವೈದ್ಯಕೀಯ ಚಿಕಿತ್ಸೆ ಮತ್ತು ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಬಳಕೆಯಾಗುತ್ತಿವೆ’ ಎಂದರು.
ಪ್ರೊ.ಎಸ್.ಉಮಾಪತಿ ‘ವೈದ್ಯಕೀಯ ಚಿಕಿತ್ಸೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಬಳಕೆಯಾಗುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಎಐ ಬಳಕೆ ಮಾಡುವಾಗ ಕಾನೂನಾತ್ಮಕ ಮತ್ತು ನೈತಿಕ ಮೌಲ್ಯಗಳ ಪಾಲನೆ ಅಗತ್ಯ’ ಎಂದು ಹೇಳಿದರು.
ಕರ್ನಾಟಕ ವಿ.ವಿ ಕುಲಪತಿ ಪ್ರೊ.ಎ.ಎಂ.ಖಾನ್ ಅಧ್ಯಕ್ಷತೆ ವಹಿಸಿದ್ದರು. ಜಯಶ್ರೀ ಟೋನಣ್ಣವರ, ಪ್ರೊ. ಆರ್.ಎಫ್. ಭಜಂತ್ರಿ, ಎ.ಎಸ್ ಬೇನಾಳ, ಸುಕನ್ಯಾ ಪಾಟೀಲ ಇದ್ದರು.
ಕ್ವಾಂಟಮ್ ಮೆಕ್ಯಾನಿಕ್ಸ್ ಕ್ವಾಂಟಮ್ ಕಂಪ್ಯೂಟಿಂಗ್ ತಂತ್ರಜ್ಞಾನಗಳು ಹೊಸ ವಿಸ್ಮಯವನ್ನು ಸೃಷ್ಟಿಸುವ ತಂತ್ರಜ್ಞಾನಗಳಾಗಿವೆ. ಸಂಶೋಧನಾ ವಿದ್ಯಾರ್ಥಿಗಳು ಹೊಸದನ್ನು ಅನ್ವೇಷಣೆ ಮಾಡಲು ಆಸಕ್ತಿ ವಹಿಸಬೇಕು-ಪ್ರೊ.ಬಿ.ಜಿ.ಮೂಲಿಮನಿ, ವಿಶ್ರಾಂತ ಕುಲಪತಿ ಗುಲ್ಬರ್ಗಾ ವಿ.ವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.