ಹುಬ್ಬಳ್ಳಿ: ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಕೆಲವೆಡೆ ಹಾನಿ ಉಂಟಾಗಿದೆ.
ಹಳೇಹುಬ್ಬಳ್ಳಿ, ತಾರಿಹಾಳ, ಗೋಪನಕೊಪ್ಪ ಸೇರಿದಂತೆ ವಿವಿಧೆಡೆ ಜೂನ್ನಿಂದ ಈವರೆಗೆ ಸುರಿದ ಮಳೆಯಿಂದ 18 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಗುರುವಾರ ಎರಡು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಗ್ರಾಮೀಣ ಭಾಗದಲ್ಲಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಆದರೆ, ಮಳೆ ಹೀಗೇ ಮುಂದುವರಿದರೆ ಹಾನಿಯಾಗುವ ಸಾಧ್ಯತೆ ಹೆಚ್ಚು ಎಂದು ಅಧಿಕಾರಿಗಳು ತಿಳಿಸಿದರು.
ನಗರದ ಡಾಲರ್ಸ್ ಕಾಲೊನಿ, ಲಕ್ಮಿನಗರ, ಚಿಟಗುಪ್ಪಿ ಕ್ವಾರ್ಟರ್ಸ್ನಲ್ಲಿ ಮರದ ಕೊಂಬೆಗಳ ಮುರಿದುಬಿದ್ದ ಬಗ್ಗೆ ಹು–ಧಾ ಮಹಾನಗರ ಪಾಲಿಕೆಗೆ ದೂರುಗಳು ಬಂದಿವೆ. ಹುಬ್ಬಳ್ಳಿ-12.7 ಮಿ.ಮೀ., ಛಬ್ಬಿ-9.4 ಮಿ.ಮೀ., ಶಿರಗುಪ್ಪಿ-6.4 ಮಿ.ಮೀ., ಬ್ಯಾಹಟ್ಟಿ-8.0 ಮಿ.ಮೀ. ಮಳೆಯಾಗಿದೆ.
ಬೆಳೆ ಹಾನಿ: ‘ಸತತ ಮಳೆಗೆ ಕೃಷಿಭೂಮಿಯಲ್ಲಿ ನೀರು ನಿಂತ ಪರಿಣಾಮ ಕೆಲವೆಡೆ ಗೋವಿನಜೋಳ ಹಾಗೂ ಸೋಯಾಬೀನ್ ಬೆಳೆ ಹಾಳಾಗುವ ಹಂತ ತಲುಪಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಲುಕಿದ್ದಾರೆ’ ಎಂದು ಅಗಡಿಯ ರೈತ ಬಸಯ್ಯ ಮಂಟೆಯ್ಯನವರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.