ADVERTISEMENT

ಹುಬ್ಬಳ್ಳಿ | ಉರಿಬಿಸಿಲಲ್ಲೂ ಕುಗ್ಗದ ಪ್ರೇಕ್ಷಕರ ಉತ್ಸಾಹ

ಸರತಿ ಸಾಲಿನಲ್ಲಿ ನಿಂತು ಟಿಕೆಟ್‌ ಖರೀದಿ; ನೆಚ್ಚಿನ ಆಟಗಾರರ ನೋಡಿ ಪುಳಕ

ಸತೀಶ ಬಿ.
Published 25 ಫೆಬ್ರುವರಿ 2026, 7:14 IST
Last Updated 25 ಫೆಬ್ರುವರಿ 2026, 7:14 IST
ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕರ್ನಾಟಕ ಮತ್ತು ಜಮ್ಮು –ಕಾಶ್ಮೀರ ನಡುವಿನ ಫೈನಲ್ ಪಂದ್ಯವನ್ನು ಪ್ರೇಕ್ಷಕರು ವೀಕ್ಷಿಸಿದರು
ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕರ್ನಾಟಕ ಮತ್ತು ಜಮ್ಮು –ಕಾಶ್ಮೀರ ನಡುವಿನ ಫೈನಲ್ ಪಂದ್ಯವನ್ನು ಪ್ರೇಕ್ಷಕರು ವೀಕ್ಷಿಸಿದರು    

ಹುಬ್ಬಳ್ಳಿ: ಇಲ್ಲಿನ ನೃಪತುಂಗ ಬೆಟ್ಟದ ಮಡಿಲಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯ ಮಂಗಳವಾರ ಆರಂಭವಾಯಿತು. ಉರಿ ಬಿಸಿಲಲ್ಲೂ ಪ್ರೇಕ್ಷಕರು ನೆಚ್ಚಿನ ಆಟಗಾರರ ಆಟವನ್ನು ಹತ್ತಿರದಿಂದ ಕಂಡು ಪುಳಕಿತರಾದರು‌.

ಪಂದ್ಯ ವೀಕ್ಷಣೆಗಾಗಿ ಬೆಳಿಗ್ಗೆಯೇ ವಿವಿಧ ಜಿಲ್ಲೆಗಳಿಂದ  ಕ್ರೀಡಾಂಗಣದತ್ತ ಬಂದಿದ್ದ ಅಭಿಮಾನಿಗಳು ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಿದರು. ಜಮ್ಮು ಕಾಶ್ಮೀರದಿಂದಲೂ ಕೆಲ ಅಭಿಮಾನಿಗಳು ಬಂದಿದ್ದು ವಿಶೇಷವಾಗಿತ್ತು.

ಕ್ರೀಡಾಂಗಣದ ಮೂರು ಮತ್ತು ನಾಲ್ಕನೇ ದ್ವಾರದಿಂದ ಪ್ರವೇಶ ನೀಡಲಾಯಿತು. ಆಸನಗಳು ಭರ್ತಿಯಾಗಿದ್ದರಿಂದ ಕೆಲವರು ಕ್ರೀಡಾಂಗಣದ ಸುತ್ತ ಅಳವಡಿಸಿರುವ ಜಾಲರಿ ಬಳಿ ನಿಂತು ಪಂದ್ಯ ವೀಕ್ಷಿಸಿದರು.

ADVERTISEMENT

ಯುವಕರು, ವಿದ್ಯಾರ್ಥಿಗಳು, ವಿವಿಧ ಕ್ಲಬ್‌ಗಳ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಕೆಲವರು ಕುಟುಂಬ ಸಮೇತ ಬಂದು ಪಂದ್ಯವನ್ನು ಕಣ್ತುಂಬಿಕೊಂಡರು. ಮೈದಾನದ ಹೊರಗೆ  ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರ ಹೆಸರಿದ್ದ ಜರ್ಸಿಗಳ ಮಾರಾಟವೂ ಜೋರಾಗಿತ್ತು.

ವೇಗಿ ಪ್ರಸಿದ್ಧ ಕೃಷ್ಣ ಅವರು ಆತಿಥೇಯ ತಂಡಕ್ಕೆ ಮೊದಲ ಸಫಲತೆ ತಂದುಕೊಟ್ಟಾಗ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತು. ಕರ್ನಾಟಕ ತಂಡದ ಆಟಗಾರರು ಉತ್ತಮ ಕ್ಷೇತ್ರ ರಕ್ಷಣೆ ಮಾಡಿದಾಗ ಚಪ್ಪಾಳೆ ತಟ್ಟಿ ಹುರಿದುಂಬಿಸಿದರು.

ಭಾರತ ತಂಡದ ಆಟಗಾರ ಕೆ.ಎಲ್.ರಾಹುಲ್ ಅವರನ್ನು ನೋಡುತ್ತಿದ್ದಂತೆ ಅಭಿಮಾನಿಗಳು,
‘ರಾಹುಲ್ ರಾಹುಲ್’ ಎಂದು ಕೂಗಿ ಸಂಭ್ರಮಿಸಿದರು.

‘ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್ ಪಂದ್ಯವನ್ನು ಹುಬ್ಬಳ್ಳಿಯಲ್ಲಿ ಆಯೋಜಿಸಿರುವುದು ಖುಷಿಯ ವಿಚಾರ. ಇಲ್ಲಿ ಎಲ್ಲ ಸೌಲಭ್ಯಗಳಿದ್ದು, ಹೆಚ್ಚು ಪಂದ್ಯಗಳನ್ನು ಆಯೋಜಿಸಬೇಕು. ಇದರಿಂದ ಸ್ಥಳೀಯ ಕ್ರೀಡಾಪಟುಗಳುಗೆ ಹೆಚ್ಚು ಪ್ರೋತ್ಸಾಹ, ಪ್ರೇರಣೆ ಸಿಗಲಿದೆ’ ಎಂದು ಕ್ರೀಡಾಭಿಮಾನಿ ಸತೀಶ್‌.ಎಚ್‌ ಹೇಳಿದರು. 

 ‘11 ವರ್ಷಗಳ ನಂತರ ಕರ್ನಾಟಕ ತಂಡ ಫೈನಲ್‌ ತಲುಪಿದೆ. ಅದರಲ್ಲೂ ಹುಬ್ಬಳ್ಳಿಯಲ್ಲಿ ಫೈನಲ್‌ ಪಂದ್ಯ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಈ ಬಾರಿ ಕರ್ನಾಟಕ ಟ್ರೋಫಿ ಗೆಲ್ಲಲಿದೆ’ ಎಂದು ಯಾದಗಿರಿ ಜಿಲ್ಲೆಯ ಸುರಪುರದ ಶಿವು ವಿಶ್ವಾಸದಿಂದ ಹೇಳಿದರು.

ಧಾರವಾಡದ ಸಂಜಯ್‌, ‘ಇಲ್ಲಿ ಫೈನಲ್ ಪಂದ್ಯ ನಡೆಯುತ್ತಿರುವುದರಿಂದ ಅಂತರರಾಷ್ಟ್ರೀಯ ಆಟಗಾರರನ್ನು ನೋಡಲು ಅವಕಾಶ ಸಿಕ್ಕಿದೆ. ಬೆಳಿಗ್ಗೆಯೇ ಬಂದು ಟಿಕೆಟ್ ಖರೀದಿಸಿ ಪಂದ್ಯ ವೀಕ್ಷಿಸಿದೆ’ ಎಂದರು.

ವಿಧಾನ ಪರಿಷತ್‌ ಮುಖ್ಯ ಸಚೇತಕ ಸಲೀಂ ಅಹ್ಮದ್, ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌ ಸೇರಿದಂತೆ ಇತರ ಗಣ್ಯರು ಪಂದ್ಯ ವೀಕ್ಷಿಸಿದರು.

ಹುಬ್ಬಳ್ಳಿಯ ರಾಜನಗರದ ಕೆಎಸ್.ಸಿ.ಎ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭವಾದ ರಣಜಿ ಟ್ರೋಫಿ ಟೂರ್ನಿಯ ಜಮ್ಮು ಮತ್ತು ಕಾಶ್ಮೀರ ಎದುರಿನ ಫೈನಲ್‌ ಪಂದ್ಯದಲ್ಲಿ ವಿಕೆಟ್‌ ಪಡೆದ ಪ್ರಸಿದ್ಧ ಕೃಷ್ಣ ಅವರನ್ನು ಸಹ ಆಟಗಾರರು ಅಭಿನಂದಿಸಿದರು ಪ್ರಜಾವಾಣಿ ಚಿತ್ರಗಳು: ಗೋವಿಂದರಾಜ ಜವಳಿ

ಆಸನಗಳು ಭರ್ತಿ; ಟಿಕೆಟ್‌ ನಿಗದಿಗೆ ಬೇಸರ

 ಪಂದ್ಯ ಆರಂಭವಾದ ಕೆಲವೇ ಗಂಟೆಗಳಲ್ಲಿ ಟೆಕೆಟ್‌ಗಳು ಮಾರಾಟವಾದವು. ಪ್ರೇಕ್ಷಕರಿಗೆ ವ್ಯವಸ್ಥೆ ಮಾಡಿದ್ದ ಎಲ್ಲ ಆಸನಗಳು ಭರ್ತಿಯಾಗಿದ್ದವು. ಪಂದ್ಯ ವೀಕ್ಷಣೆಗೆ ಟಿಕೆಟ್ ದರ ನಿಗದಿಪಡಿಸಿದ್ದಕ್ಕೆ ಕೆಲವು ಪ್ರೇಕ್ಷಕರು ಬೇಸರ ವ್ಯಕ್ತಪಡಿಸಿದರು. ವಾರಾಂತ್ಯದ ದಿನಗಳಾಗಿರದ ಕಾರಣ ಮತ್ತು ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯವಾಗಿದ್ದರಿಂದ ಹೆಚ್ಚು ಜನ ಬರಲಿಲ್ಲ. ಈ ಹಿಂದೆ ಇದೇ ಮೈದಾನದಲ್ಲಿ ಕೆಪಿಎಲ್‌ ಪಂದ್ಯಗಳು ನಡೆದಿದ್ದ ವೇಳೆ ಪ್ರತಿ ದಿನ 20 ಸಾವಿರ ಪ್ರೇಕ್ಷಕರು ಪಂದ್ಯಗಳನ್ನು ವೀಕ್ಷಿಸಿದ್ದರು.  ‘ಇದೇ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ರಣಜಿ ಟ್ರಫಿಯ ಫೈನಲ್ ಪಂದ್ಯ ನಡೆಯುತ್ತಿದೆ. ಹೀಗಾಗಿ ಪಂದ್ಯ ವೀಕ್ಷಣೆಗೆ ಉಚಿತ ಪ್ರವೇಶ ನೀಡಬೇಕಿತ್ತು’ ಎಂದು ಕ್ರೀಡಾಭಿಮಾನಿಯೊಬ್ಬರು ಹೇಳಿದರು.  ‘ಟಿಕೆಟ್‌ ದಿರ ನಿಗದಿಪಡಿಸುತ್ತಾರೋ ಅಥವಾ ಉಚಿತ ಪ್ರವೇಶ ಇರುತ್ತದೆಯೋ ಎಂಬುದನ್ನು ಕೆಎಸ್‌ಸಿಎ ಸಿಬ್ಬಂದಿ ಪಂದ್ಯದ ಹಿಂದಿನ ದಿನದವರೆಗೂ ಖಚಿತಪಡಿಸಲಿಲ್ಲ. ಈ ಹಿಂದೆ ಇಲ್ಲಿ ನಡೆದ ರಣಜಿ ಮತ್ತು ಲೀಸ್ಟ್‌ ಎ ಪಂದ್ಯಗಳಿಗೆ ಉಚಿತ ಪ್ರವೇಶ ಇತ್ತು. ಇನ್ನುಳಿದ ನಾಲ್ಕು ದಿನ ಉಚಿತ ಪ್ರವೇಶ ನೀಡಿದರೆ ಮಕ್ಕಳು ವಿವಿಧ ಕ್ಲಬ್‌ಗಳ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಪಂದ್ಯ ವೀಕ್ಷಣೆಗೆ ಅನುಕೂಲವಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.