ADVERTISEMENT

ಆಡಳಿತಾಧಿಕಾರಿಗಳನ್ನು ನೇಮಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 16:58 IST
Last Updated 4 ಜೂನ್ 2020, 16:58 IST

ಹುಬ್ಬಳ್ಳಿ: ನಗರದ ಹಳೇ ಕೋರ್ಟ್‌ ವೃತ್ತದಲ್ಲಿರುವ ಸಾಯಿ ಮಂದಿರದ ಆಡಳಿತ ಮಂಡಳಿ ಸದಸ್ಯರು ವೈಯಕ್ತಿಕ ಹಿತಾಸಕ್ತಿ ಸಾಧಿಸಲು ದೇವಸ್ಥಾನವನ್ನು ವೇದಿಕೆಯಾಗಿ ಬಳಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಸರ್ಕಾರ ದೇವಸ್ಥಾನಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಬೇಕು ಎಂದು ಕರ್ನಾಟಕ ಸಂಗ್ರಾಮ ಸೇನೆ ರಾಜ್ಯ ಘಟಕದ ಅಧ್ಯಕ್ಷ ಸಂಜೀವ ಧುಮಕ್ಕನಾಳ ಆಗ್ರಹಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಸಾರ್ವಜನಿಕರು ನೀಡುವ ಹಣದ ಕಾಣಿಕೆಯನ್ನು ಆ ಮಂದಿರದ ಆಡಳಿತ ಮಂಡಳಿ ಸದಸ್ಯರು ವೈಯಕ್ತಿಕ ಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಮಂಡಳಿಯ ಗೌರವ ಕಾರ್ಯದರ್ಶಿ ವೆಂಕಟರಾವ ಕುಲಕರ್ಣಿ ಸಹಕಾರಿ ಇಲಾಖೆಯಲ್ಲಿದ್ದು ನಿವೃತ್ತಿಯಾಗಿದ್ದಾರೆ. ಅವರನ್ನು ನೇಮಕ ಮಾಡಿಕೊಂಡಿದ್ದು ಕಾನೂನಿಗೆ ವಿರುದ್ಧವಾಗಿದೆ. ಈ ಎಲ್ಲ ವಿಷಯಗಳ ಕುರಿತು ಸಹಕಾರಿ ಸಂಘಗಳ ಸಹಾಯಕ ನಿಬಂಧಕರು ಶಾಸಕ ಬದ್ಧ ವಿಚಾರಣೆ ನಡೆಸಿ ವರದಿ ನೀಡಿದ್ದಾರೆ. ಆದ್ದರಿಂದ ಆಡಳಿತಾಧಿಕಾರಿಯನ್ನು ನೇಮಿಸಬೇಕು’ ಎಂದು ಒತ್ತಾಯಿಸಿದರು.

ಧುಮ್ಮಕ್ಕನಾಳ ಆರೋಪಕ್ಕೆ ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟನೆ ನೀಡಿರುವ ಶಿರಡಿ ಸಾಯಿ ಸದ್ಭಕ್ತ ಮಂಡಳಿ ‘ಸಹಾಯಕ ಸಂಘಗಳ ನಿಬಂಧಕರು ವಿಚಾರಣೆ ಮಾಡಿದ್ದಾರೆ ಹೊರತು; ಅದು ಶಾಸನಬದ್ಧ ಅಲ್ಲ. ಮೇ 5ರಂದು ನಿಬಂಧಕರು ಪತ್ರ ಬರೆದು ನಾಲ್ಕು ಅಂಶಗಳನ್ನು ಸರಿಪಡಿಸುವಂತೆ ಅಷ್ಟೇ ತಿಳಿಸಿದ್ದಾರೆ. ಈಗಿರುವ ಆಡಳಿಯ ಮಂಡಳಿ ನಿಯಮಕ್ಕೆ ಅನುಗುಣವಾಗಿಯೇ ಕೆಲಸ ಮಾಡುತ್ತಿದೆ. ಆದ್ದರಿಂದ ಭಕ್ತರು ಸುಳ್ಳು ಆರೋಪಗಳಿಗೆ ಕಿವಿಗೊಡಬಾರದು’ ಎಂದು ಮನವಿ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.