ADVERTISEMENT

ಯಾವುದೇ ಒತ್ತಡದಿಂದ ರಾಜೀನಾಮೆ ನೀಡಿಲ್ಲ: ಬಾಪುಗೌಡ

​ಪ್ರಜಾವಾಣಿ ವಾರ್ತೆ
Published 15 ಜೂನ್ 2021, 12:00 IST
Last Updated 15 ಜೂನ್ 2021, 12:00 IST
ಬಾಪುಗೌಡ ಪಾಟೀಲ
ಬಾಪುಗೌಡ ಪಾಟೀಲ   

ಧಾರವಾಡ: ‘ಕೆಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಹಿರಿಯರ ಸೂಚನೆಯಂತೆ ರಾಜಿನಾಮೆ ನೀಡಿದ್ದೇನೆಯೇ ಹೊರತು, ಯಾವುದೇ ರಾಜಕೀಯ ಒತ್ತಡದಿಂದಲ್ಲ’ ಎಂದು ಬಾಪುಗೌಡ ಪಾಟೀಲ ಹೇಳಿದರು.

‘2018ರಲ್ಲಿ ನಡೆದ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆಯಲ್ಲಿ ನವಲಗುಂದ ತಾಲ್ಲೂಕು ಪ್ರತಿನಿಧಿಸಿ ನಿರ್ದೇಶಕನಾಗಿ ಆಯ್ಕೆಯಾದೆ. ನಂತರ ಹಿತೈಷಿಗಳ ಮಾರ್ಗದರ್ಶನದಂತೆ ಬ್ಯಾಂಕ್ ಅಧ್ಯಕ್ಷನಾದೆ.ಈ 30 ತಿಂಗಳು ಅಧ್ಯಕ್ಷಾವಧಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದು ಬ್ಯಾಂಕ್ ಅಭಿವೃದ್ಧಿ ಪಥದಲ್ಲಿ ಸಾಗುವಂತೆ ಮಾಡಿದ್ದೇನೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಕೆಸಿಸಿ ಬ್ಯಾಂಕ್ ಉತ್ತಮ ಹಾದಿಯಲ್ಲಿ ನಡೆದು ಲಾಭ ಗಳಿಸುವಂತೆ ಮಾಡಿದ್ದೇನೆ. ಬ್ಯಾಂಕಿನಲ್ಲಿ ಎರಡು ದಶಕಗಳಿಂದ ವಸೂಲಾಗದೇ ಬಾಕಿ ಉಳಿದಿರುವ ವಿವಿಧ ಸಂಸ್ಕರಣ ಘಟಕಗಳ ಸಾಲ ವಸೂಲಾತಿಗೆ ವಿಶೇಷ ಯೋಜನೆ ಜಾರಿಗೆ ತಂದು, ರಾಣೆಬೆನ್ನೂರಿನ ತುಂಗಭದ್ರಾ ರೈತರ ಸಹಕಾರಿ ನೂಲಿನ ಗಿರಣಿ, ಮಲಪ್ರಭಾ ಸಹಕಾರಿ ಎಣ್ಣೆ ಗಿರಣಿ, ವರದಾ ಶುಗರ್ಸ್‌ನಿಂದ ಅಸಲು ಹಾಗೂ ಬಡ್ಡಿ ಸೇರಿ ಸುಮಾರು ₹26 ಕೋಟಿ ವಸೂಲಿ ಮಾಡಲಾಗಿದೆ. ಎರಡು ವರ್ಷಗಳ ಅವಧಿಯಲ್ಲಿ ಸರ್ಕಾರದ ಶೇ 3ರ ಬಡ್ಡಿ ದರದಲ್ಲಿ ನೀಡುವ ಕೃಷಿ ಮಾಧ್ಯಮಿಕ ಯೋಜನೆಗಳಿಗೆ ₹60 ಕೋಟಿ ಸಾಲ ನೀಡಿ ಶೇ 100 ರಷ್ಟು ವಸೂಲಿ ಮಾಡಲಾಗಿದೆ. ಕಿಸಾನ್ ಬಳಕೆ ಸಾಲದ ಯೋಜನೆ, 16 ಸಾವಿರ ರೈತ ಸದಸ್ಯರಿಗೆ ₹43 ಕೋಟಿ ಸಾಲ ವಿತರಣೆ, ₹60 ಕೋಟಿ ಕೃಷಿ ಬೆಳೆಸಾಲ ವಿತರಣೆ ಮಾಡಲಾಗಿದೆ’ ಎಂದು ಬಾಪುಗೌಡ ತಿಳಿಸಿದರು.

ADVERTISEMENT

‘ನನ್ನ ರಾಜೀನಾಮೆಗೆ ಯಾವುದೇ ತಪ್ಪು ಅರ್ಥ ಕಲ್ಪಿಸುವುದು ಬೇಡ. ಇನ್ನೂ ಎರಡು ವರ್ಷಗಳ ಕಾಲ ನಾನು ಬ್ಯಾಂಕಿನ ಸಾಮಾನ್ಯ ನಿರ್ದೇಶಕರನಾಗಿ ಸೇವೆ ಸಲ್ಲಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.