ADVERTISEMENT

ಮುಸ್ಲಿಂ ಯುವಕರ ವಶಕ್ಕೆ ಪಡೆದು ಬಿಡುಗಡೆ, ಪೊಲೀಸ್ ಠಾಣೆ ಮುಂದೆ ಗಲಾಟೆ

ಫ್ರಾನ್ಸ್ ಅಧ್ಯಕ್ಷರ ಹೇಳಿಕೆಯ ಕರಪತ್ರ ಹಂಚಿಕೆ ಆರೋಪ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 14:12 IST
Last Updated 1 ನವೆಂಬರ್ 2020, 14:12 IST
ಪೊಲೀಸ್ ಠಾಣೆ ಮುಂದೆ ಸೇರಿದ್ದ ಸ್ಥಳೀಯ ಮುಸ್ಲಿಂ ಮುಖಂಡರು ಹಾಗೂ ಅಂಜುಮನ್ ಸಮಿತಿ ಸದಸ್ಯರು
ಪೊಲೀಸ್ ಠಾಣೆ ಮುಂದೆ ಸೇರಿದ್ದ ಸ್ಥಳೀಯ ಮುಸ್ಲಿಂ ಮುಖಂಡರು ಹಾಗೂ ಅಂಜುಮನ್ ಸಮಿತಿ ಸದಸ್ಯರು   

ಹುಬ್ಬಳ್ಳಿ: ಮೊಹಮ್ಮದ್‌ ಪೈಗಂಬರ್‌ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಫ್ರಾನ್ಸ್‌ ಅಧ್ಯಕ್ಷರ ಸಂದೇಶಗಳನ್ನು ಒಳಗೊಂಡ ಭಿತ್ತಿಪತ್ರಗಳನ್ನು ಹಂಚುತ್ತಿದ್ದಾರೆ ಎನ್ನುವ ಆರೋಪದ ಮೇಲೆ ಮುಸ್ಲಿಂ ಸಮಾಜದ ಐವರು ಯುವಕರನ್ನು ಇಲ್ಲಿನ ಕಸಬಾಠಾಣೆ ಪೊಲೀಸರು ವಶಕ್ಕೆ ಪಡೆದಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯ ಮುಸ್ಲಿಂ ಮುಖಂಡರು ಹಾಗೂ ಅಂಜುಮನ್ ಸಮಿತಿ ಸದಸ್ಯರು ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕೆಲ ಹೊತ್ತಿನ ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು.

‘ಮುಸ್ಲಿಂ ಧರ್ಮಗುರುವಿನ ಬಗ್ಗೆ ಫ್ರಾನ್ಸ್ ಅಧ್ಯಕ್ಷರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಯುವಕರು ಕರಪತ್ರ ಹಂಚುತ್ತಿದ್ದ ವಿಡಿಯೊ ವೈರಲ್‌ ಆಗಿದೆ. ಶಾಂತಿ ಕದಡದಂತೆ ಎಚ್ಚರಿಕೆ ವಹಿಸಲು ಮುಂಜಾಗ್ರತಾ ಕ್ರಮವಾಗಿ ಅವರನ್ನು ವಶಕ್ಕೆ ಪಡೆದಿದ್ದೆವು’ ಎಂದು ಕಸಬಾ ಠಾಣೆ ಪೊಲೀಸರು ತಿಳಿಸಿದರು.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಮಾಜದ ಮುಖಂಡರು ‘ಈದ್ ಮಿಲಾದ್‌ ದಿನದಂದು ರಸ್ತೆಯಲ್ಲಿ ಬಿದ್ದಿದ್ದ ಕರಪತ್ರಗಳನ್ನು ನಮ್ಮ ಸಮಾಜದ ಕೆಲ ಯುವಕರು ತುಳಿದಿದ್ದರು. ಅವುಗಳನ್ನು ಯಾರು ಹಂಚಿದ್ದಾರೆ ನಮಗೆ ಗೊತ್ತಿಲ್ಲ. ಯಾರೂ ದೂರು ನೀಡದಿದ್ದರೂ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ’ ಎಂದು ದೂರಿದರು.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮುಸ್ಲಿಂ ಸಮಾಜದ ಮುಖಂಡ ಹಾಗೂ ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಅಲ್ತಾಫ್‌ ಹಳ್ಳೂರ ‘ಫ್ರಾನ್ಸ್‌ ಅಧ್ಯಕ್ಷರ ಹೇಳಿಕೆಯಿಂದ ನಮಗೆ ತೀವ್ರ ನೋವಾಗಿದೆ. ಇದನ್ನು ಪ್ರತಿಭಟಿಸಲು ಯೋಜನೆ ರೂಪಿಸಿದ್ದೆವು. ವಿನಾಕಾರಣ ಪೊಲೀಸರು ನಮ್ಮ ಸಮಾಜದ ಯುವಕರನ್ನು ವಶಕ್ಕೆ ಪಡೆದಿದ್ದಾರೆ’ ಎಂದು ಆರೋಪಿಸಿದರು.

ಸಮಾಜದ ಪ್ರಮುಖರು ಕಸಬಾಠಾಣೆ ಪೊಲೀಸರ ಜೊತೆ ಮಾತುಕತೆ ನಡೆಸಿದ ಬಳಿಕ ಆ ಯುವಕರನ್ನು ಬಿಡಲಾಯಿತು. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.