
ಕಲಘಟಗಿ: ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ತಾಲ್ಲೂಕಿನ ಸಂಗೇದೇವರಕೊಪ್ಪ ಗ್ರಾಮದ ಶಾಲ್ಮಲಾ ಹಾಗೂ ಬೇಡ್ತಿ ನದಿಗಳ ಕೂಡಲ ಸಂಗಮ ಪವಿತ್ರ ಕ್ಷೇತ್ರದಲ್ಲಿ ನಡೆಯುವ ಸಂಗಮೇಶ್ವರ ಬಸವಣ್ಣ ದೇವರ ಜಾತ್ರಾ ರಥೋತ್ಸವ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಗುರುವಾರ ಸಂಭ್ರಮದಿಂದ ಜರುಗಿತು.
ಬೆಳಿಗ್ಗೆ ದೇವಸ್ಥಾನದ ಅರ್ಚಕರಿಂದ ಬಸವಣ್ಣ ದೇವರಿಗೆ ವಿಶೇಷ ಪೂಜೆ ನಡೆಯಿತು. ನಂತರ ಭಕ್ತರು ಪೂಜೆ ಸಲ್ಲಿಸಿದರು.
ಜಾತ್ರೆ ಅಂಗವಾಗಿ ಬಸವಣ್ಣ ದೇವರ ರಥೋತ್ಸವಕ್ಕೆ ಮೊದಲೇ ರುದ್ರಾಕ್ಷಿ, ಹುಮಾಲೆ ಹಾಗೂ ವಿವಿಧ ವಸ್ತುಗಳಿಂದ ಅಲಂಕರಿಸಲಾಗಿತ್ತು.
ಮಡಕಿಹೊನ್ನಳ್ಳಿ ಗ್ರಾಮದ ಕಲ್ಮೇಶ್ವರ ದೇವರ ಆಗಮನದೊಂದಿಗೆ ಸಂಜೆ 4.30ಕ್ಕೆ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಮಂಗಳಾರತಿಯೊಂದಿಗೆ ರಾಯನಾಳ ವಿರಕ್ತ ಮಠದ ಅಭಿನವ ರೇವಣಸಿದ್ದೇಶ್ವರ ಸ್ವಾಮೀಜಿ, ಕಲಘಟಗಿ ಹನ್ನೆರಡು ಮಠದ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿಗಳು ಹಾಗೂ ಗ್ರಾಮದ ಗುರು ಹಿರಿಯರು ಸೇರಿಕೊಂಡು ಚಾಲನೆ ನೀಡಿದರು.
ರಥೋತ್ಸವಕ್ಕೆ ಮುಂದೆ ಸಾಗುತ್ತಿದಂತೆ ನೆರೆದಿದ್ದ ಭಕ್ತರು ಬಸವೇಶ್ವರ, ಸಂಗಮೇಶ್ವರ ಮಹಾರಾಜಕೀ ಜೈ ಘೋಷ ಮೊಳಗಿಸಿ ರಥಕ್ಕೆ ಬಾಳೆಹಣ್ಣು ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು.
ಮಲಕನಕೊಪ್ಪ, ಹಿಂಡಸಗೇರಿ, ಸಂಗೇದೇವರಕೊಪ್ಪ ಗ್ರಾಮದ ಕರಡಿ ಮಜಲುಗಳು, ಬಸವಣ್ಣ ದೇವರ ನಂದಿಕೋಲುಗಳು ಜಾತ್ರೆಗೆ ಮತ್ತಷ್ಟು ಮೆರಗು ತಂದುಕೊಟ್ಟವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.