ADVERTISEMENT

ರಾಯಣ್ಣ ಜಯಂತಿ, ಸಂತ್ರಸ್ತರಿಗೆ ಪರಿಹಾರ ವಿತರಣೆ ನಾಳೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2019, 12:40 IST
Last Updated 13 ಆಗಸ್ಟ್ 2019, 12:40 IST

ಹುಬ್ಬಳ್ಳಿ: ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿಯಿಂದ ಆಗಸ್ಟ್ 15ರಂದು ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಸಂಜೆ 4ಕ್ಕೆ ಸಂಗೊಳ್ಳಿ ರಾಯಣ್ಣ ಜಯಂತ್ಯುತ್ಸವ ನಡೆಯಲಿದೆ.

ಕಾರ್ಯಕ್ರಮದಲ್ಲಿ ಜಿಲ್ಲೆಯ ನೆರೆ ಸಂತ್ರಸ್ತರಿಗೆ ಪರಿಹಾರ ಹಾಗೂ ಅಗತ್ಯ ಸಾಮಗ್ರಿ ವಿತರಿಸಲಾಗುವುದು’ ಎಂದು ಜಯಂತ್ಯುತ್ಸವದ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಶಿವಾನಂದ ಮುತ್ತಣ್ಣವರ ಹೇಳಿದರು.

‘ಅಂದು ಮಧ್ಯಾಹ್ನ 12.30ಕ್ಕೆ ವೀರಾಪುರ ರಸ್ತೆಯ ಮಹಾಬಲೇಶ್ವರ ದೇವಸ್ಥಾನದ ಆವರಣದಲ್ಲಿ ಡೊಳ್ಳಿನ ಜಾತ್ರೆ, ಚನ್ನಮ್ಮನ ವೃತ್ತದವರೆಗೆ ರಾಯಣ್ಣನ ಭಾವಚಿತ್ರದ ಮೆರವಣಿಗೆ ಹಾಗೂ ಉತ್ತರ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಉದ್ಘಾಟನೆ ನಡೆಯಲಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ನಟರಾದ ನೀನಾಸಂ ಸತೀಶ್, ದುನಿಯಾ ವಿಜಯ್, ಧನಂಜಯ ಹಾಗೂ ‘ಸಲಗ’ ಚಿತ್ರದ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಅವರು ನೆರೆ ಸಂತ್ರಸ್ತರಿಗೆ ಪರಿಹಾರ ವಿತರಿಸಲಿದ್ದಾರೆ. ರಾಯಣ್ಣ ಜಯಂತ್ಯುತ್ಸವವನ್ನು ಶಾಸಕ ಜಗದೀಶ ಶೆಟ್ಟರ್ ಉದ್ಘಾಟಿಸಲಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ’ ಎಂದರು.

10 ಮಂದಿಗೆ ‘ರಾಯಣ್ಣ ಶೌರ್ಯ ಪ್ರಶಸ್ತಿ’:

‘ರಾಯಣ್ಣ ಜಯಂತ್ಯುತ್ಸವ ನಿಮಿತ್ತ ವಿವಿಧ ಕ್ಷೇತ್ರಗಳ ಸಾಧಕರಿಗೆ ನೀಡುವ ‘ರಾಯಣ್ಣ ಶೌರ್ಯ ಪ್ರಶಸ್ತಿ’ಗೆ ಬಿ. ಅರವಿಂದ (ಪತ್ರಿಕೋದ್ಯಮ), ಯಶವಂತ (ಛಾಯಾಗ್ರಹಣ), ಸಂದೀಪ ಬೂದಿಹಾಳ (ಶಿಕ್ಷಣ), ಸಂತೋಷ ಕೃಷ್ಣಾಪುರ (ಶಿಕ್ಷಣ), ಡಾ. ಕ್ರಾಂತಿಕಿರಣ್ (ವೈದ್ಯಕೀಯ), ಮಂಜು ಬಳ್ಳಾರಿ (ಕ್ರೀಡೆ), ವಿನೋದ್ ಮುಕ್ತೇದಾರ್ (ಪೊಲೀಸ್), ನಾಗರಾಜ ಕೆಂಚಣ್ಣವರ (ಪೊಲೀಸ್), ಮಹಾದೇವ ಭಗವತಿ (ಸಾರಿಗೆ) ಹಾಗೂ ಈರಣ್ಣ ಶಿಂತ್ರಿ (ಧಾರ್ಮಿಕ) ಸೇರಿ ಒಟ್ಟು 10 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಉತ್ತರ ಕರ್ನಾಟಕ ಪ್ರವಾಹದಿಂದ ತತ್ತರಿಸಿರುವುದರಿಂದ ಪ್ರಶಸ್ತಿಯನ್ನು 2020ರ ಜನವರಿ 26ರಂದು ಪ್ರದಾನ ಮಾಡಲಾಗುವುದು’ ಎಂದು ತಿಳಿಸಿದರು.

ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ತಾಲೂರ, ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಕುಂದಗೋಳ, ರ್‍ಯಾವಪ್ಪ ವೀರಣ್ಣ, ನಾಗಪ್ಪ ರಾಣೋಜಿ, ಅಣ್ಣಪ್ಪ ಗೋಕಾಕ, ಫಕ್ಕೀರೇಶ ನಾಯ್ಕರ, ಕಿರಣ ಬೆಟಗೇರಿ, ಸಿದ್ದಣ್ಣ ಅಮರಾವತಿ ಹಾಗೂ ಚನ್ನು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.