ಹುಬ್ಬಳ್ಳಿ: ಕೊರೊನಾ ಸೋಂಕು ದೃಢಪಟ್ಟಿರುವ ಪೊಲೀಸರು ಮತ್ತು ಅಪರಾಧ ಪ್ರಕರಣಗಳ ಆರೋಪಿಗಳನ್ನು ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡಲು ಅವಳಿನಗರ ಪೊಲೀಸರು ಮುಂದಾಗಿದ್ದಾರೆ. ಧಾರವಾಡದಲ್ಲಿರುವ ಬಿ.ಡಿ. ಜತ್ತಿ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್ (ಸಿಸಿಸಿ) ನಲ್ಲಿ ಸಿಬ್ಬಂದಿಗೆ ಹಾಗೂ ಹುಬ್ಬಳ್ಳಿಯ ಹೆಗ್ಗೇರಿಯಲ್ಲಿರುವ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿರುವ ಸಿಸಿಸಿಯಲ್ಲಿ ಆರೋಪಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತ ಆರೋಪಿಯೊಬ್ಬ ಇತ್ತೀಚೆಗೆ ಆಸ್ಪತ್ರೆಯಿಂದ ಪರಾರಿಯಾಗಿದ್ದ. ಪೊಲೀಸರ ತಂಡ ಗದಗದಲ್ಲಿ ಬಂಧಿಸಿ ಕರೆ ತಂದಿತ್ತು. ನಂತರ, ಬಂಧಿತರಾಗಿದ ಇಬ್ಬರು ಆರೋಪಿಗಳಿಗೂ ಸೋಂಕು ಇರುವುದು ದೃಢವಾಗಿತ್ತು. ಅವರನ್ನು ಪ್ರತ್ಯೇಕ ಕೋವಿಡ್ ಕೇಂದ್ರಗಳಿಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು.
‘ಭದ್ರತೆಯ ದೃಷ್ಟಿಯಿಂದ ಸೋಂಕಿತ ಆರೋಪಿಗಳನ್ನು ಒಂದೇ ಕಡೆ ದಾಖಲಿಸಿ, ಚಿಕಿತ್ಸೆ ಕೊಡಿಸಲು ನಿರ್ಧರಿಸಲಾಗಿದೆ. ಸದ್ಯ ಮೂವರನ್ನು ಹೆಗ್ಗೇರಿಯಲ್ಲಿರುವ ಸಿಸಿಸಿಗೆ ಸ್ಥಳಾಂತರಿಸಲಾಗಿದೆ’ ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಆರ್.ಬಿ. ಬಸರಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಅದೇ ರೀತಿ ಕರ್ತವ್ಯದ ಸಂದರ್ಭದಲ್ಲಿ ಸೋಂಕಿತರಾದ ಸಿಬ್ಬಂದಿಗೆ ಧಾರವಾಡದ ಬಿ.ಡಿ. ಜತ್ತಿ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ 25 ಮಂದಿ ದಾಖಲಾಗಿದ್ದಾರೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.