ADVERTISEMENT

ಧಾರವಾಡ: ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಆಡಳಿತಾಧಿಕಾರಿಯಾಗಿ ಷಾ ಅಲಂ ಹುಸೇನ್‌

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2023, 13:51 IST
Last Updated 29 ಡಿಸೆಂಬರ್ 2023, 13:51 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಧಾರವಾಡ: ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ (ಕರ್ನಾಟಕ) ಆಳಿತಾಧಿಕಾರಿಯಾಗಿ ವಿಭಾಗಾಧಿಕಾರಿ ಷಾ ಅಲಂ ಹುಸೇನ್‌ ಅವರು ಶುಕ್ರವಾರ ಕಾರ್ಯಭಾರ ವಹಿಸಿಕೊಂಡಿದ್ಧಾರೆ.

ಸಹಕಾರ ಇಲಾಖೆ ಅಧೀನ ಕಾರ್ಯದರ್ಶಿಯವರು ಆಡಳಿತಾಧಿಕಾರಿ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. 6 ತಿಂಗಳ ಅವಧಿಗೆ ಆಡಳಿತಾಧಿಕಾರಿ ನೇಮಿಸಲಾಗಿದೆ. ಹೈಕೋರ್ಟ್‌ ಆದೇಶ ಹಾಗೂ ಸಂಘದ ನಿಯಮದಂತೆ ಆಡಳಿತ ಮಂಡಳಿಗೆ ಚುನಾವಣೆ ನಡೆಸಿ, ನೂತನ ಆಡಳಿತ ಮಂಡಳಿ ಅಧಿಕಾರ ಹಸ್ತಾಂತರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

2020 ಮಾರ್ಚ್‌ 1ರಂದು ನಡೆಸಿದ್ದ ಪದಾಧಿಕಾರಿಗಳ ಚುನಾವಣೆಯಲ್ಲಿ ಕೇಂದ್ರ ಸಭಾದ ನಿಯಮಗಳನ್ನು ಪಾಲಿಸಿಲ್ಲ ಎಂದು ಆಚುನಾವಣೆಯನ್ನು ರದುಪಡಿಸಿ ಸಂಘದ ಆಡಳಿತ ನಿರ್ವಹಣೆಗೆ ವಿಶೇಷ ಕಾರ್ಯದರ್ಶಿ ಮತ್ತು ಅವರಿಗೆ ಸಲಹೆ ನೀಡಲು ಮೂವರ ಸಲಹಾ ಸಮಿತಿ ನೇಮಿಸಲಾಗಿತ್ತು.

ವಿಶೇಷ ಕಾರ್ಯದರ್ಶಿ ನ್ಯಾಯಾಲಯದ ಆದೇಶ ಪಾಲನೆ ಮಾಡಿಲ್ಲ, ನಿಯಮಗಳಂತೆ ಸಂಘಕ್ಕೆ ಚುನಾವಣೆ ನಡೆಸಲು ವಿಫಲರಾಗಿದ್ದು, ಅವರ ವಿರುದ್ಧ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿದೆ, ಸಂಘಕ್ಕೆ ಆಡಳಿತಾಧಿಕಾರಿ ನೇಮಿಸಬೇಕು ಎಂದು ಸಂಘದ ಸದಸ್ಯರಾದ ರಾಯಪ್ಪ ಬಾಳಪ್ಪ ಪುಡಕಲಕಟ್ಟಿ, ಮಲ್ಲಪ್ಪ ಪುಡಕಲಕಟ್ಟಿ ಮನವಿ ಸಲ್ಲಿಸಿದ್ದರು.

ಕೋರ್ಟ್ ಆದೇಶಗಳು ಮತ್ತು ವಿವಿಧ ಅಂಶಗಳನ್ನು ಪರಿಶೀಲಿಸಲಾಗಿದೆ. 2020–24ರ ಅವಧಿಗೆ ಆಯ್ಕೆಯಾಗಿದ್ದ ಆಡಳಿತ ಮಂಡಳಿ ಹಾಗೂ ಪದಾಧಿಕಾರಿಗಳ ಆಯ್ಕೆಯು ಅನೂರ್ಜಿತವಾಗಿರುತ್ತದೆ. ವಿಶೇಷ ಕಾರ್ಯದರ್ಶಿ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ ವಿಚಾರಣಾ ಹಂತದಲ್ಲಿದೆ. ಸಂಘದ ವ್ಯಾಪ್ತಿಯ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು, ಸಂಘದ ಹಿತದೃಷ್ಟಿಯಿಂದ ಸಂಘಕ್ಕೆ ಚುನಾವಣೆ ನಡೆಸಿ ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಲು ಅನುವಾಗುವಂತೆ ಸಭಾಕ್ಕೆ ಆಡಳಿತಾಧಿಕಾರಿ ನೇಮಿಸುವಂತೆ ಸಹಕಾರ ಸಂಘಗಳ ಉಪನಿಬಂಧಕರು ಪ್ರಸ್ತಾವನೆ ಸಲ್ಲಿಸಿದ್ಧಾರೆ. ಅದರಂತೆ ಕ್ರಮ ವಹಿಸಲಾಗಿದೆ ಎಂದು ಆದೇಶ ತಿಳಿಸಿದ್ದಾರೆ.

ಧಾರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಆಡಳಿತ ಮಂಡಳಿ ಅನೂರ್ಜಿತವಾಗಿದೆ. ಸರ್ಕಾರದ ಆದೇಶದಂತೆ ಸಭಾ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದೇನೆ.
– ಷಾ ಅಲಂ ಹುಸೇನ್‌, ಉಪವಿಭಾಗಾಧಿಕಾರಿ, ಧಾರವಾಡ

ಆದೇಶ ಹಿಂಪಡೆಯಲು ಸಿ.ಎಂ.ಗೆ ಮನವಿ

‘ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾಕ್ಕೂ ರಾಜ್ಯ ಸರ್ಕಾರಕ್ಕೂ ಸಂಬಂಧ ಇಲ್ಲ. ಆಡಳಿತಾಧಿಕಾರಿ ನೇಮಕ ಹಿಂಪಡೆಯುವಂತೆ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸುತ್ತೇವೆ. ಸರ್ಕಾರದ ನಿರ್ಣಯ ಸರಿ ಇಲ್ಲ ಎಂದು ತಿಳಿಸುತ್ತೇವೆ’ ಎಂದು ಪಾಲಿಕೆ ಸದಸ್ಯ ಈರೇಶ ಅಂಚಿಟಗೇರಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾವು ಕೇಂದ್ರ ಸರ್ಕಾರ ವ್ಯಾಪ್ತಿಗೆ ಸೇರಿದೆ. ಈ ಸಂಘದ ಕೇಂದ್ರ ನೋಂದಣಿ ಕಾಯ್ಕೆ ವ್ಯಾಪ್ತಿಗೆ ಒಳಪಟ್ಟಿದೆ , ರಾಜ್ಯ ನೋಂದಣಿ ವ್ಯಾಪ್ತಿಗೆ ಒಳಪಡಲ್ಲ ಎಂದು ಹಿಂದಿನ ಸರ್ಕಾರವು 2021ರಲ್ಲಿ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದೆ’ ಎಂದು

‘ಸಭಾ ಆಡಳಿತ ಮಂಡಳಿ ಚುನಾವಣೆ ಪ್ರಕ್ರಿಯೆ ನಡೆದಿದೆ, ಫಲಿತಾಂಶ ಘೋಷಣೆಯಾಗಿದೆ ಎಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಪ್ರಕರಣ ಹೈಕೋರ್ಟ್‌ ಏಕಸದಸ್ಯ ಪೀಠದ ಮುಂದೆ ವಿಚಾರಣೆ ಹಂತದಲ್ಲಿದೆ. ಪ್ರಕರಣದ ವಿಚಾರಣೆ ಜನವರಿ 5ಕ್ಕೆ ಇದೆ. ಈ ನಡುವೆ ಕೆಲವರು ಚುನಾವಣೆ ನಡೆದಿಲ್ಲ ಆಡಳಿತಾಧಿಕಾರಿ ನೇಮಕ ಮಾಡಬೇಕು ಎಂದು ತಪ್ಪು ಮಾಹಿತಿ ನೀಡಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.