ADVERTISEMENT

ಶಾನವಾಡ | ವಾರ್ಡ್‌ ಸಭೆಗೆ ಸದಸ್ಯರ ಗೈರು: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 5:17 IST
Last Updated 10 ಡಿಸೆಂಬರ್ 2025, 5:17 IST
ನವಲಗುಂದ ತಾಲ್ಲೂಕಿನ ಶಾನವಾಡ ಗ್ರಾಮದಲ್ಲಿ ವಾರ್ಡ್ ಸಭೆ ಜರುಗಿತು
ನವಲಗುಂದ ತಾಲ್ಲೂಕಿನ ಶಾನವಾಡ ಗ್ರಾಮದಲ್ಲಿ ವಾರ್ಡ್ ಸಭೆ ಜರುಗಿತು   

ನವಲಗುಂದ: ಸರ್ಕಾರದ ಯೋಜನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡುವ ಗ್ರಾಮ ಸಭೆಗೆ ಗ್ರಾಮ ಪಂಚಾಯಿತಿ ಸದಸ್ಯರು ಬಾರದಿರುವುದಕ್ಕೆ ಶಾನವಾಡ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ಹಾಳಕುಸುಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾನವಾಡ ಗ್ರಾಮದಲ್ಲಿ ಮಂಗಳವಾರ ವಾರ್ಡ್‌ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಒಬ್ಬ ಸದಸ್ಯ ಮಾತ್ರ ಮಾತ್ರ ಹಾಜರಿದ್ದರು.

ಉಳಿದ ಸದಸ್ಯರು ಏಕೆ ಬಂದಿಲ್ಲ ಎಂದು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಪ್ರಶ್ನಿಸಿದರು. ಅಲ್ಲದೆ, ಇನ್ನಿತರ ಸದಸ್ಯರು ಬಾರದೆ ಸಭೆ ನಡೆಸಬಾರದು ಎಂದು ಪಟ್ಟು ಹಿಡಿದರು.

‘ಗ್ರಾಮ ಪಂಚಾಯಿತಿ ಸದಸ್ಯರಿಗೆ ಅವರ ಅಧಿಕಾರ ವ್ಯಾಪ್ತಿ, ಕರ್ತವ್ಯಗಳ ಬಗ್ಗೆ ತರಬೇತಿ ನೀಡಿದರೂ ಸಭೆಗೆ ಹಾಜರಾಗದೆ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ. ಅವರ ಬೇಜವಾಬ್ದಾರಿಯಿಂದಾಗಿ ಗ್ರಾಮದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ’ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎ.ಎಫ್.ಗೋಣಾಗರ್ ಮಾತನಾಡಿ, ‘ಸಭೆಗೆ ಬರುವಂತೆ ಎಲ್ಲ ಸದಸ್ಯರಿಗೂ ನೋಟಿಸ್ ನೀಡಲಾಗಿದೆ. ಅಲ್ಲದೆ, ಕರೆ ಮಾಡಿ ತಿಳಿಸಲಾಗಿದೆ. ಆದರೂ ಬಂದಿಲ್ಲ. ಗ್ರಾಮಸ್ಥರು ಬೇಡಿಕೆಯಂತೆ ಅಧ್ಯಕ್ಷರೊಂದಿಗೆ ಚರ್ಚಿಸಿ ಮತ್ತೊಮ್ಮೆ ಸಭೆ ಕರೆಯಲಾಗುವುದು’ ಎಂದರು. 

ಗ್ರಾಮ ಪಂಚಾಯಿತಿ ಸದಸ್ಯ ರವಿ ಗೊಬ್ಬರಗುಂಪಿ, ಮಲ್ಲಿಕಾರ್ಜುನ ಅಂಗಡಿ, ಶರೀಫ ಶಿವಯೋಗಿ ವೀರಪ್ಪನವರ, ಬಸವರಾಜ್ ಮೇಟಿ, ಚನ್ನಬಸಪ್ಪ ನವಲಗುಂದ, ಭೀಮಪ್ಪ ಕನಕನವರ, ಶೇಖರಪ್ಪ ಮರಕುಂಬಿ, ಗ್ವಾಲಪ್ಪ ತಳವಾರ, ಮೋನಯ್ಯ ಹಿರೇಮಠ, ಬಸಯ್ಯ ಹಿರೇಮಠ ಇದ್ದರು. 

ತಹಶೀಲ್ದಾರ್ ಕಚೇರಿಗೆ ಮುತ್ತಿಗೆ; ಎಚ್ಚರಿಕೆ
ವರ್ಷದಿಂದ ವಾರ್ಡ ಸಭೆ ಕರೆದಿಲ್ಲ. ಈ ಸಭೆಗೂ ಗ್ರಾಮಸ್ಥರನ್ನು ಮುಂಚಿತವಾಗಿ  ಆಹ್ವಾನಿಸಿಲ್ಲ. ಕಾಟಾಚಾರಕ್ಕೆ ವಾರ್ಡ್‌ ಸಭೆ ಕರೆಯಲಾಗಿದೆ. ಯಾವುದೇ ಯೋಜನೆ ಕೈಗೊಳ್ಳುವಾಗ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಗ್ರಾಮದಲ್ಲಿ ಸಮರ್ಪಕವಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಇದೇ ರೀತಿ ಮುಂದುವರಿದರೆ ತಹಶೀಲ್ದಾರ್‌ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು  ಗ್ರಾಮದ ನಿವಾಸಿ ಪ್ರಕಾಶಗೌಡ ಪಾಟೀಲ ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.