ADVERTISEMENT

ಪ್ರಲ್ಹಾದ ಜೋಶಿ ಕಾಂಗ್ರೆಸ್‌ಗೆ ಹೋರಾಟದ ಪಾಠ ಹೇಳುತ್ತಾರೆಯೇ?: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 10 ಜನವರಿ 2021, 16:41 IST
Last Updated 10 ಜನವರಿ 2021, 16:41 IST
   

ಹುಬ್ಬಳ್ಳಿ: ‘ದೇಶದ ಬೆಳವಣಿಗೆಗೆಆರ್‌ಎಸ್‌ಎಸ್‌ ಕೊಡುಗೆ ಏನೂ ಇಲ್ಲ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿಯೂ ಬಿಜೆಪಿ ಹೋರಾಡಿಲ್ಲ. ಹೀಗಿದ್ದಾಗಲೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಾಂಗ್ರೆಸ್‌ಗೆ ಹೋರಾಟದ ಪಾಠ ಹೇಳುತ್ತಾರೆಯೇ?’ ಎಂದು ವಿಧಾನಸಭೆವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

‘ಒಂದು ಕೊಠಡಿಯೊಳಗೆ ಇಬ್ಬರು ಹೋದರೆಕಾಂಗ್ರೆಸ್‌ನಿಂದ ಒಬ್ಬ ನಾಯಕ ಹುಟ್ಟುತ್ತಾನೆ’ ಎನ್ನುವ ಜೋಶಿ ಹೇಳಿಕೆಗೆ ಅವರು ಭಾನುವಾರ ನಗರದಲ್ಲಿ ಹೀಗೆ ಪ್ರತಿಕ್ರಿಯಿಸಿದರು.

‘ಹೋರಾಟ ಕಾಂಗ್ರೆಸ್‌ಗೆ ರಕ್ತಗತವಾಗಿ ಬಂದಿದೆ.ಹೋರಾಟ ಮಾಡದೆ ಅಧಿಕಾರಕ್ಕೆ ಬಂದ ಪಕ್ಷ ಬಿಜೆಪಿ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಿಜೆಪಿಯಿಂದ ಯಾರಾದರೂ ಜೀವ ಕಳೆದುಕೊಂಡಿದ್ದಾರೆಯೇ? ಆ ಸಂದರ್ಭದಲ್ಲಿ ಜೋಶಿ ಹುಟ್ಟಿದ್ದರೋ ಇಲ್ಲವೋ ಗೊತ್ತಿಲ್ಲ. ಕಾಂಗ್ರೆಸ್‌ಗೆ ಹೋರಾಟದ ಬಗ್ಗೆ ಹೇಳುತ್ತಾರೆ’ ಎಂದು ತಿರುಗೇಟು ನೀಡಿದರು.

ADVERTISEMENT

ಕಾರ್ಯಕರ್ತರ ಮೂಲಕ ಸಂಘಟನೆ: ‘ರಾಜ್ಯದಾದ್ಯಂತ ಜನರ ಸಮಸ್ಯೆ ತಿಳಿದು ಆ ನಿಟ್ಟಿನಲ್ಲಿ ಕಾರ್ಯಕರ್ತರ ಮೂಲಕ ಪಕ್ಷ ಸಂಘಟಿಸಲು ಬೆಳಗಾವಿ ವಿಭಾಗ ಮಟ್ಟದ ಸಂಕಲ್ಪ ಸಮಾವೇಶವನ್ನು ಸೋಮವಾರ ನಗರದಲ್ಲಿ ಆಯೋಜಿಸಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದರು.

ಸಮಾವೇಶದಲ್ಲಿ ಪಾಲ್ಗೊಳ್ಳಲು ಭಾನುವಾರ ರಾತ್ರಿ ನಗರದ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.