ಅಳ್ನಾವರ: ಸಂವಿಧಾನದ ಆಶಯದಂತೆ ಎಲ್ಲರೂ ನಡೆದುಕೊಳ್ಳಬೇಕು. ನಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ತಿಳಿದುಕೊಳ್ಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನತೆ ಸದಾ ನಂಬಿಕೆ ಇಡಬೇಕು. ಶಾಸಕಾಂಗ, ಕಾರ್ಯಾಂಗ, ಮತ್ತು ನ್ಯಾಯಾಂಗ ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆದು ಭವ್ಯ ಭಾರತ ಕಟ್ಟಲು ಯುವ ಸಮೂಹ ಮುಂದೆ ಬರಬೇಕು ಎಂದು ಎಂದು ತಹಶೀಲ್ದಾರ್ ಅಮರೇಶ ಪಮ್ಮಾರ ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್ಎಸ್ಎಸ್ ಹಾಗೂ ಕ್ರೀಡಾ ವಿಭಾಗ, ಯೂತ್ ರೆಡ್ ಕ್ರಾಸ್ ಘಟಕ, ನೆಹರೂ ಯುವ ಕೇಂದ್ರ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಸಂಯುಕ್ತ ಅಶ್ರಯಲ್ಲಿ ನಡೆದ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಯುವ ಸಂಸತ್ತು ಹಾಗೂ ಮತದಾನ ಜಾಗೃತಿ ಕುರಿತ ಬಿತ್ತಿ ಪತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ವಿದ್ಯಾರ್ಥಿ ಸಮೂಹ ಕಠಿಣ ಪರಿಶ್ರಮ, ಶ್ರದ್ಧೆಯಿಂದ ಅಧ್ಯಯನ ಮಾಡಬೇಕು. ಪದವಿ ಹಂತದಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮತ್ತು ಅವುಗಳಿಗೆ ಬೇಕಾದ ತಯಾರಿಯನ್ನು ಆರಂಭಿಸಬೇಕು ಎಂದರು.
ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅಶ್ವಿನಿ ನಿಪ್ಪಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲ ಡಾ. ಸಿ.ಎನ್. ಹೊಂಬಾಳಿ ಅಧ್ಯಕ್ಷತೆ ವಹಿಸಿದ್ದರು. ಡಾ. ಎಸ್.ಎಂ. ಕಳಸಗೇರಿ, ಪ್ರೊ. ಎಸ್.ಬಿ. ಪಾಟೀಲ, ಅನುಪಮಾ ಢವಳೆ, ಶಿರಿನಬಾನು ಹಿರೇಕುಂಬಿ, ಡಾ. ಸುರೇಶ ದೊಡ್ಡಮನಿ,ಸಿದ್ದೇಶ್ವರ ಕಣಬರ್ಗಿ, ಶ್ರೀಪಾಲ ಕುರಕುರಿ, ಸುಶೀಲಾ ಕರ್ಜಗಿ, ಮಮತಾ ಭಟ್ , ಸಂತೋಷ ಕುರುಬರ ಇದ್ದರು. ರಾಣಿ ಬರಗುಂಡಿ ಸ್ವಾಗತಿಸಿದರು. ಶ್ರಾವಣಿ ಕಲಾಲ ವಂದಿಸಿದರು. ನಾಜಿಯಾ ಮುಜಾವರ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.