ಹುಬ್ಬಳ್ಳಿ: ‘2022-23ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ₹2461.61 ಕೋಟಿಯೊಂದಿಗೆ ನೈರುತ್ಯ ರೈಲ್ವೆಯ ಮೂಲ ಆದಾಯವು ಕಳೆದ ವರ್ಷದ ಇದೇ ಅವಧಿಗಿಂತ ಶೇ 44.73ರಷ್ಟು ಹೆಚ್ಚಳವಾಗಿದೆ. ಮಾರ್ಚ್ನಿಂದ ಜುಲೈವರೆಗೆ 26.46 ದಶಲಕ್ಷ ಟನ್ ಸರಕನ್ನು ಲೋಡ್ ಮಾಡಲಾಗಿದ್ದು, ಹಿಂದಿನ ವರ್ಷಕ್ಕಿಂತ ಶೇ 2.84ರಷ್ಟು ಪ್ರಗತಿಯಾಗಿದೆ’ ಎಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಹೇಳಿದರು.
ನಗರದ ಗದಗ ರಸ್ತೆಯಲ್ಲಿರುವ ನೈರುತ್ಯ ರೈಲ್ವೆಯ ಪ್ರಧಾನ ಕಚೇರಿ ರೈಲು ಸೌಧದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ‘ಕೋವಿಡ್–19 ಸಾಂಕ್ರಾಮಿಕದ ನಂತರ ಸ್ಥಗಿತಗೊಂಡಿದ್ದ ರೈಲುಗಳ ಪೈಕಿ ಶೇ 99.5ರಷ್ಟು ರೈಲುಗಳನ್ನು ಮತ್ತೆ ಆರಂಭಿಸಲಾಗಿದೆ. ನೈರುತ್ಯ ರೈಲ್ವೆಯು ಶೇ 94.10ರಷ್ಟು ಸಮಯಪಾಲನೆಯನ್ನು ತೋರಿದ್ದು, ದೇಶದಲ್ಲೇ ನಾಲ್ಕನೇ ಸ್ಥಾನದಲ್ಲಿದೆ. ಜನವರಿಯಿಂದ ಜುಲೈವರೆಗೆ 71.2 ದಶಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದು, ₹1345.19 ಕೋಟಿ ಆದಾಯ ಸಂಗ್ರಹವಾಗಿದೆ. ಕಳೆದ ವರ್ಷಕ್ಕಿಂತ ಇದು ಶೇ 104.2ರಷ್ಟು ಜಾಸ್ತಿಯಾಗಿದೆ’ ಎಂದರು.
75 ವರ್ಷ ಪೂರ್ಣಗೊಳಿಸಿರುವ ಹುಬ್ಬಳ್ಳಿ ಕಾರ್ಯಾಗಾರದ ನಿವೃತ್ತ ಕಚೇರಿ ಅಧೀಕ್ಷಕ ಯೂಸುಫ ಮುಲ್ಲಾ ಅವರನ್ನು ಸನ್ಮಾಣಿಸಲಾಯಿತು. ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಪಿ.ಕೆ. ಮಿಶ್ರಾ ಹಾಗೂ ಹಿರಿಯ ಅಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.