ಹುಬ್ಬಳ್ಳಿ: ವಾಣಿಜ್ಯ ನಗರಿ ಶನಿವಾರ ಬೆಳಿಗ್ಗೆಯಿಂದಲೇ ಮಂಜಿನ ನಗರಿಯಾಗಿ ಬದಲಾಗಿತ್ತು. ‘ನಿವಾರ್‘ ಚಂಡಮಾರುತದ ಪರಿಣಾಮದಿಂದಾಗಿ ದಿನಪೂರ್ತಿ ಬೀಸಿದ ತಂಪಾದ ಗಾಳಿ ಹಾಗೂ ಚಳಿಗೆ ಜನ ಥರಗುಟ್ಟಿದರು.
ಇತ್ತೀಚೆನ ಒಂದು ವಾರದಿಂದ ರಾತ್ರಿ ಮತ್ತು ಬೆಳಗಿನ ಜಾವ ತಂಪಾದ ಗಾಳಿ ಬೀಸುತ್ತಿತ್ತು. ಇದರಿಂದ ಚಳಿಯ ಅನುಭವವಾಗುತ್ತಿತ್ತು. ಶನಿವಾರವಂತೂ ಬಹಳಷ್ಟು ಜನ ಎಂದಿನಂತೆ ಮನೆಬಿಟ್ಟು ಹೊರಗಡೆ ಬರಲಿಲ್ಲ. ಮೋಡಮುಸುಕಿದ ವಾತಾವರಣ ಮತ್ತು ಕೆಲವು ನಿಮಿಷಗಳ ಕಾಲ ಜಿಟಿಜಿಟಿಯಾಗಿ ಮಳೆಯೂ ಬಂತು. ನೃಪತುಂಗ ಬೆಟ್ಟದ ಅಂಚಿನಿಂದ ಸುತ್ತಲಿನ ದೃಶ್ಯವನ್ನು ನೋಡಿದಾಗ ಈಡೀ ಹುಬ್ಬಳ್ಳಿ ನಗರವೇ ಮಂಜು ಹಾಸಿ ಹೊದ್ದು ಮಲಗಿದಂತೆ ಕಾಣುತ್ತಿತ್ತು. ಹೀಗಾಗಿ ಇಂದಿರಾ ಗಾಜಿನ ಮನೆ, ಕುಂಬಕೋಣಂ ಪ್ಲಾಂಟ್, ಅರ್ಜುನ ವಿಹಾರ ಸೇರಿದಂತೆ ಪ್ರಮುಖ ಉದ್ಯಾನಗಳಲ್ಲಿ ಹೆಚ್ಚು ಜನ ವಾಯುವಿಹಾರಕ್ಕೆ ಬಂದಿರಲಿಲ್ಲ. ಹಾಲು ಹಾಕುವವರು, ಪತ್ರಿಕೆ ಹಂಚುವ ಹುಡುಗರು ಮೈ ನಡುಗಿಸುವ ಚಳಿಯಲ್ಲಿಯೇ ಕೆಲಸ ನಿರ್ವಹಿಸಿದರು.
ಕ್ರಿಕೆಟ್ ಪಂದ್ಯಗಳು ರದ್ದು: ಶಿರೂರು ಪಾರ್ಕ್ ಲೇ ಔಟ್ನ ಬಾಣಜಿ ಡಿ. ಕಿಮ್ಜಿ ಮೈದಾನದಲ್ಲಿ ನಡೆಯುತ್ತಿರುವ ಹುಬ್ಬಳ್ಳಿ ಕ್ರಿಕೆಟ್ ಲೀಗ್ ಟೂರ್ನಿಯ ಪಂದ್ಯಗಳು ಮಂದಬೆಳಕಿನ ಕಾರಣದಿಂದ ರದ್ದಾದವು.
‘ನಿಗದಿಯಂತೆ ಬೆಳಿಗ್ಗೆ 8.30ಕ್ಕೆ ಟೂರ್ನಿಯ ಕೊನೆಯ ಲೀಗ್ ಹಂತದ ಪಂದ್ಯಗಳು ಆರಂಭವಾಗಬೇಕಿತ್ತು. ಮಂದಬೆಳಕಿನ ಕಾರಣದಿಂದ ಪಂದ್ಯ ಆರಂಭಿಸಲು ಸಮಯ ತೆಗೆದುಕೊಂಡೆವು. ಬಳಿಕ ಹನಿ, ಹನಿ ಮಳೆ ಸುರಿದ ಕಾರಣ ಪೂರ್ಣವಾಗಿ ಪಂದ್ಯಗಳನ್ನೇ ರದ್ದು ಮಾಡಬೇಕಾಯಿತು’ ಎಂದು ಟೂರ್ನಿಯ ಸಂಘಟಕ ಶಿವಾನಂದ ಗುಂಜಾಳ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.