ADVERTISEMENT

ಭದ್ರತಾ ಲೋಪ: ಪಾಕಿಸ್ತಾನದೊಂದಿಗೆ ಸೇರಿ ಪಂಜಾಬ್‌ ಒಳಸಂಚು- ಜೋಶಿ ಆರೋಪ

​ಪ್ರಜಾವಾಣಿ ವಾರ್ತೆ
Published 5 ಜನವರಿ 2022, 14:31 IST
Last Updated 5 ಜನವರಿ 2022, 14:31 IST
   

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತೆ ಕಲ್ಪಿಸುವಲ್ಲಿ ಲೋಪ ಎಸಗಿರುವ ಪಂಜಾಬ್‌ನ ಕಾಂಗ್ರೆಸ್‌ ಸರ್ಕಾರ ಪಾಕಿಸ್ತಾನದೊಂದಿಗೆ ಸೇರಿ ಒಳಸಂಚು ರೂಪಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.

ಯಾವುದೇ ರಾಜ್ಯಕ್ಕೆ ಪ್ರಧಾನಿ ಭೇಟಿ ನೀಡಿದಾಗ ಅವರ ರಕ್ಷಣೆ, ಭದ್ರತಾ ವ್ಯವಸ್ಥೆಯ ಹೊಣೆಗಾರಿಕೆ ಆಯಾ ರಾಜ್ಯ ಸರ್ಕಾರದ್ದಾಗಿರುತ್ತದೆ. ಮೋದಿ ಅವರ ಪಂಜಾಬ್ ಪ್ರವಾಸದಲ್ಲಿ ವಾಹನ ಕೆಲವು ಅಂತರದವರೆಗೆ ರಸ್ತೆ ಮೇಲೆ ಸಂಚರಿಸುವ ಪೂರ್ವ ಆ ಮಾರ್ಗದಲ್ಲಿ ಯಾವುದೇ ಜನಸಂದಣಿ ಇರುವುದಿಲ್ಲ. ಅದು ಸಂಪೂರ್ಣ ಜನಸಂಚಾರ ರಹಿತವಾಗಿರುವುದೆಂದು ರಾಜ್ಯದ ಮುಖ್ಯಕಾರ್ಯದರ್ಶಿ ಹಾಗೂ ಡಿಜಿಪಿ ಸ್ಪಷ್ಟವಾಗಿ ಹೇಳಿದ್ದರೂ ಪ್ರತಿಭಟನಾಕಾರರು ನುಸುಳಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸೋಲು ಖಚಿತ ಎಂದು ಅರಿತು ಕಾಂಗ್ರೆಸ್‌ ಇಂಥ ಕೃತ್ಯಕ್ಕೆ ಕೈ ಹಾಕಿದ್ದು ನಾಚಿಕೆಗೇಡು’ ಎಂದು ಟೀಕಿಸಿದ್ದಾರೆ.

ಪ್ರಧಾನಿಗೆ ಭದ್ರತೆ ನೀಡದ ಪಂಜಾಬ್ ಪೊಲೀಸರು ಇನ್ನು ಸಾಮಾನ್ಯ ಜನರಿಗೆ ಯಾವ ರೀತಿ ರಕ್ಷಣೆ ಒದಗಿಸುತ್ತಾರೆ ಎಂದು ಪ್ರಶ್ನಿಸಿರುವ ಜೋಶಿ, ಪಂಜಾಬ್‌ ಸರ್ಕಾರ ಭದ್ರತೆಯ ನಿಯಮಗಳನ್ನು ಗಾಳಿಗೆ ತೂರಿ ಪ್ರಧಾನಿ ಅವರನ್ನು 20 ನಿಮಿಷಗಳ ಕಾಲ ತಡೆದು ನಡುರಸ್ತೆಯಲ್ಲಿ ನಿಲ್ಲುವಂತೆ ಮಾಡಿದೆ. ಇದು ಇಡೀ ದೇಶಕ್ಕೆ ಮಾಡಿದ ಅವಮಾನ. ಇದು ಪೂರ್ವ ನಿರ್ಧರಿತ ಕೃತ್ಯ ಎಂದೂ ಆರೋಪಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.