ADVERTISEMENT

ಹುಬ್ಬಳ್ಳಿ : ಮನೆ ನಿರ್ಮಾಣಕ್ಕೆ ಅಡ್ಡಿ ನೆಪ; ಮರ ನಾಶ

​ಪ್ರಜಾವಾಣಿ ವಾರ್ತೆ
Published 15 ಜೂನ್ 2023, 13:55 IST
Last Updated 15 ಜೂನ್ 2023, 13:55 IST
ಹುಬ್ಬಳ್ಳಿಯ ವಿದ್ಯಾನಗರದ ಖೋಡೆ ಹಾಸ್ಟೆಲ್‌ ಹಿಂಭಾಗದಲ್ಲಿನ ರಸ್ತೆ ಬದಿಯಲ್ಲಿದ್ದ ಮರವನ್ನು ಕಡಿದಿರುವುದು
ಹುಬ್ಬಳ್ಳಿಯ ವಿದ್ಯಾನಗರದ ಖೋಡೆ ಹಾಸ್ಟೆಲ್‌ ಹಿಂಭಾಗದಲ್ಲಿನ ರಸ್ತೆ ಬದಿಯಲ್ಲಿದ್ದ ಮರವನ್ನು ಕಡಿದಿರುವುದು   

ಹುಬ್ಬಳ್ಳಿ: ಮನೆ ನಿರ್ಮಾಣಕ್ಕೆ ಅಡ್ಡಿಯಾಗಿದೆ ಎಂಬ ಕಾರಣಕ್ಕೆ ನಿರ್ಮಾಣದ ಮಾಲೀಕರು ರಸ್ತೆ ಬದಿಯ 20 ವರ್ಷದ ಬೃಹತ್‌ ಆಕಾಶ ಮರವನ್ನು ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಕಡಿದು ಹಾಕಿದ ಘಟನೆ ಗುರುವಾರ ವಿದ್ಯಾನಗರದ ಖೋಡೆ ಹಾಸ್ಟೆಲ್‌ ಹಿಂಭಾಗದಲ್ಲಿ ನಡೆದಿದೆ.

‘ವಿಶಾಲವಾಗಿ ಹರಡಿದ್ದ ಆಕಾಶ ಮರದಿಂದ ಉತ್ತಮ ಗಾಳಿ ಮತ್ತು ನೆರಳು ಸಿಗುತಿತ್ತು. ಮನೆ ನಿರ್ಮಾಣಕ್ಕೆ ಆ ಮರದಿಂದ ಯಾವ ಅಡ್ಡಿಯೂ ಇರಲಿಲ್ಲ. ಅನಗತ್ಯವಾಗಿ ರಂಬೆಗಳನ್ನು ಕಡಿದು, ಮರ ನಾಶ ಪಡಿಸಿದ್ದಾರೆ’ ಎಂದು ಸ್ಥಳೀಯ ನಿವಾಸಿ ಮಂಜುನಾಥ ಹಿರೇಮಠ್‌ ದೂರಿದರು.

‘ಸ್ಮಾರ್ಟ್‌ ಸಿಟಿ ಅಭಿವೃದ್ಧಿ ನೆಪದಲ್ಲಿ ಈಗಾಗಲೇ ನಗರದಲ್ಲಿ ಸಾಕಷ್ಟು ಗಿಡ–ಮರಗಳನ್ನು ನಾಶ ಮಾಡಲಾಗಿದೆ. ಬಡಾವಣೆ, ನಗರಗಳಲ್ಲಿ ಇರುವ ಮರಗಳನ್ನಾದರೂ ಸಂರಕ್ಷಿಸಬೇಕಾದ ನಿವಾಸಿಗಳೇ ಸಕಾರಣವಿಲ್ಲದೇ ಈ ರೀತಿ ಮರಗಳನ್ನು ನಾಶ ಮಾಡುತ್ತಿರುವುದು ಸರಿಯಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಮನೆ ನಿರ್ಮಾಣಕ್ಕೆ ಮರದ ಕೊಂಬೆಗಳು ಅಡ್ಡಿಯಾಗಿದ್ದವು. ಮರ ತೆರವುಗೊಳಿಸುವಂತೆ ತಿಂಗಳ ಹಿಂದೆಯೇ ಪಾಲಿಕೆ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ, ಕೋರಲಾಗಿತ್ತು. ಆದರೆ, ಸ್ಪಂದನೆ ಸಿಗಲಿಲ್ಲ. ಅದಕ್ಕೆ ಮರದ ರಂಬೆಗಳನ್ನು ಕಡಿಸಿದೆ.ಇದು ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೂ ಇದೆ. ಅಧಿಕಾರಿಗಳು ತೆಗೆದುಕೊಳ್ಳುವ ಕ್ರಮಕ್ಕೆ ಬದ್ಧನಾಗಿರುವೆ’ ಎಂದು ಮನೆ ನಿರ್ಮಾಣದ ಮಾಲೀಕ ಪ್ರಕಾಶ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಮರವನ್ನು ತೆರವು ಮಾಡುವ ಮುಂಚೆಯೇ ಪ್ರಕಾಶ್ ಅವರು ಮರದ ರಂಬೆಗಳನ್ನು ಕಡೆದು ಹಾಕಿಸಿದ್ದಾರೆ. ಈಗಾಗಲೇ ಕಡೆದಿರುವ ಮರದ ರಂಬೆಗಳನ್ನು ಅರಣ್ಯ ಇಲಾಖೆಗೆ ಸ್ಥಳಾಂತರಿಸಲಾಗಿದೆ. ಇಲಾಖೆಯ ನಿಯಮದನ್ವಯ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು‘ ಎಂದು ಹುಬ್ಬಳ್ಳಿ ಧಾರವಾಡ ಉಪ ವಲಯ ಅರಣ್ಯಾಧಿಕಾರಿ ರಮೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.