ADVERTISEMENT

ಜಾತಿ ಕಾಲಂನಲ್ಲಿ ‘ವೀರಶೈವ ಲಿಂಗಾಯತ’ ಎಂದೇ ಬರೆಸಬೇಕು; ಏಕತಾ ಸಮಾವೇಶದಲ್ಲಿ ನಿರ್ಣಯ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 23:15 IST
Last Updated 19 ಸೆಪ್ಟೆಂಬರ್ 2025, 23:15 IST
ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಶುಕ್ರವಾರ ನಡೆದ ವೀರಶೈವ ಲಿಂಗಾಯತ ಏಕತಾ ಸಮಾವೇಶದಲ್ಲಿ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.
–ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಶುಕ್ರವಾರ ನಡೆದ ವೀರಶೈವ ಲಿಂಗಾಯತ ಏಕತಾ ಸಮಾವೇಶದಲ್ಲಿ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು. –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ರಾಜ್ಯ ಸರ್ಕಾರ ನಡೆಸುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವೇಳೆ ವೀರಶೈವ ಲಿಂಗಾಯತ ಸಮಾಜದವರು ಜಾತಿ ಕಾಲಂನಲ್ಲಿ ಕಡ್ಡಾಯವಾಗಿ ‘ವೀರಶೈವ ಲಿಂಗಾಯತ’ ಬರೆಸಬೇಕು ಎಂದು ಇಲ್ಲಿ ನಡೆದ ವೀರಶೈವ ಲಿಂಗಾಯತ ಏಕತಾ ಸಮಾವೇಶ ನಿರ್ಣಯಿಸಿದೆ.

‘ಆದರೆ, ಸಮಾಜದವರು ತಮ್ಮ ವಿವೇಚನೆಗೆ ಅನುಗುಣವಾಗಿ ಧರ್ಮದ ಹೆಸರು ನಮೂದಿಸಬಹುದು’ ಎಂದು ಶುಕ್ರವಾರ ನಡೆದ ಸಮಾವೇಶ ನಿರ್ಣಯ ಅಂಗೀಕರಿಸಿತು. 

ನೆಹರೂ ಮೈದಾನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಏರ್ಪಡಿಸಿದ್ದ ಸಮಾವೇಶಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಸೇರಿ ನಾಡಿನ ವಿವಿಧ ಭಾಗಗಳ ಮಠಾಧೀಶರು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.

ADVERTISEMENT

‘ವೀರಶೈವ ಮತ್ತು ಲಿಂಗಾಯತ ಬೇರೆಯಲ್ಲ ಎಂಬ ಸಂದೇಶವನ್ನು ಸಾರುವುದರ ಜೊತೆಗೆ, ಸಮಾಜದಲ್ಲಿರುವ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಂಡು ಒಗ್ಗಟ್ಟು ಪ್ರದರ್ಶಿಸಬೇಕು’ ಎಂಬ ತೀರ್ಮಾನವೂ ಕೈಗೊಳ್ಳಲಾಯಿತು.

‘ಸಮೀಕ್ಷೆಯಲ್ಲಿ ಹೊಸ ಜಾತಿಗಳನ್ನು ಸೇರಿಸಿ, ಅಖಂಡ ಹಿಂದೂ ಸಮಾಜವನ್ನು ವಿಂಗಡಿಸಲಾಗಿದೆ. ಹಿಂದೂಗಳ ಸಂಖ್ಯೆ ಕುಂಠಿತಗೊಳಿಸಲು ಕಾಣದ‌ ಕೈಗಳು ಕೆಲಸ ಮಾಡಿವೆ. ವೀರಶೈವ ಲಿಂಗಾಯತ ಸಮಾಜವನ್ನು ಸ್ವತಂತ್ರ ಧರ್ಮವಾಗಿಸಲು ಮಹಾಸಭಾ ಪ್ರಯತ್ನಿಸಿದರೂ ಕೇಂದ್ರ ಸರ್ಕಾರ ಮಾನ್ಯ ಮಾಡಲಿಲ್ಲ. ಹೀಗಾಗಿ, ಸಮೀಕ್ಷೆಯಲ್ಲಿ ಸಂವಿಧಾನ ಮಾನ್ಯ ಮಾಡಿದ ಧರ್ಮವನ್ನೇ ಉಲ್ಲೇಖಿಸಬೇಕು. ಹೊಸ‌ಧರ್ಮ ಹುಟ್ಟುಹಾಕುವ ಬದಲು, ಇರುವ ಧರ್ಮ ಸುಭದ್ರವಾಗಿಸೋಣ’ ಎಂದು ಬಾಳೆಹೊನ್ನೂರು ರಂಭಾಪುರಿ ಮಠದ ಪ್ರಸನ್ನರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಮುಂಡರಗಿ ಅನ್ನದಾನೀಶ್ವರ ಮಠದ ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ‘ವೀರಶೈವ ಮಹಾಸಭಾಕ್ಕೆ ಲಿಂಗಾಯತ ಶಬ್ದವನ್ನು ಅನಿವಾರ್ಯವಾಗಿ ಸೇರಿಸಲಾಯಿತು. ವೀರಶೈವ ಸಮಾಜಕ್ಕೆ 12 ಉಪನಾಮಗಳಿವೆ. ವೀರಶೈವರು ಅಸ್ತಿತ್ವ ರಕ್ಷಣೆಗೆ ಆದ್ಯತೆ ನೀಡಬೇಕು’ ಎಂದರು.

ಮಹಾಸಭಾದ ಉಪಾಧ್ಯಕ್ಷರೂ ಆಗಿರುವ ಸಚಿವ ಈಶ್ವರ ಖಂಡ್ರೆ, ‘ವೀರಶೈವ ಮತ್ತು ಲಿಂಗಾಯತ ಒಂದೇ ಧರ್ಮವಾಗಿವೆ. ಅಲ್ಲಲ್ಲಿ ಒಡಕಿನ ಧ್ವನಿ ಕೇಳಿಬರುತ್ತಿರುವುದು ವಿಷಾದನೀಯ. ವೀರಶೈವ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮವಾಗಬೇಕು ಎನ್ನುವುದು ನಮ್ಮ ಬೇಡಿಕೆ. ಇತ್ತೀಚಿಗೆ ಸಮಾಜ ಕವಲುದಾರಿಯಲ್ಲಿ ಸಾಗುತ್ತಿರುವುದರಿಂದ, ಸಾಕಷ್ಟು ಸಮಸ್ಯೆ, ಸವಾಲುಗಳನ್ನು ಎದುರಿಸುವಂತಾಗಿದೆ. ಸಮಾಜದ ಅಸ್ತಿತ್ವಕ್ಕೆ ನಮ್ಮಲ್ಲಿರುವ ವೈಮನಸ್ಸನ್ನು ಬದಿಗಿಟ್ಟು ಸಂಘಟಿತರಾಗಬೇಕು’ ಎಂದು ಕರೆ ನೀಡಿದರು.

ಮಲ್ಲಿಕಾರ್ಜುನ ಕಾಶಿವಿಶ್ವರಾಧ್ಯ ಶಿವಾಚಾರ್ಯ, ಶ್ರೀಶೈಲ‌ಪೀಠದ ಚನ್ನಸಿದ್ದರಾಮ ಸ್ವಾಮೀಜಿ,  ಉಜ್ಜಯನಿ ಸಿದ್ದಲಿಂಗ ದೇಶಿಕೇಂದ್ರ ಸ್ವಾಮೀಜಿ, ಶಿರಹಟ್ಟಿಯ ಫಕ್ಕೀರ ಸಿದ್ದರಾಮ ಸ್ವಾಮೀಜಿ, ಮುಪ್ಪಿನ ಬಸವಲಿಂಗ ಸ್ವಾಮೀಜಿ, ಮೂರು ಸಾವಿರ ಮಠದ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ, ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಉಪಸ್ಥಿತರಿದ್ದರು.

ಕೆಎಲ್ಇ ಸಂಸ್ಥೆಯ ಅಧ್ಯಕ್ಷ ಪ್ರಭಾಕರ ಕೋರೆ, ವಿಧಾನ ಪರಿಷತ್ತು ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಪ್ರಮುಖರಾದ ಶಂಕರಣ್ಣ ಮುನವಳ್ಳಿ, ಮಲ್ಲಿಕಾರ್ಜುನ ಸಾವಕಾರ ಇದ್ದರು.

ಏಕತಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರು
ಸಮಾಜವು ಪಟ್ಟಭದ್ರ ಹಿತಾಸಕ್ತಿಯ ಕೈಯಲ್ಲಿ ಸಿಲುಕಿದೆ. ಸ್ವಾರ್ಥ ಮತ್ತು ರಾಜಕಾರಣಕ್ಕೆ ಸಮಾಜವನ್ನೇ ಬಲಿಕೊಡುತ್ತಿದ್ದಾರೆ. ಪ್ರತ್ಯೇಕ ಧರ್ಮಕ್ಕೆ ಒಗ್ಗಟ್ಟಾಗಿ ಹೋರಾಡಬೇಕಿದೆ.
– ವಿಜಯಾನಂದ ಕಾಶಪ್ಪನವರ, ಶಾಸಕ
ಲಿಂಗಾಯತ ವೀರಶೈವ ಸಮಾಜದವರಲ್ಲಿ ಸಾಂಪ್ರದಾಯಿಕ ಆಚರಣೆಗಳು ಕಡಿಮೆಯಾಗುತ್ತಿವೆ. ಧಾರ್ಮಿಕ ಆಚರಣೆಯಲ್ಲಿ ನಮ್ಮದು ಬಲಿಷ್ಠ ಸಮಾಜ ಎಂದು ಸಾಬೀತುಪಡಿಸಿ ಬಲಿಷ್ಠಗೊಳಿಸಬೇಕು
– ಸಿದ್ಧಲಿಂಗೇಶ್ವರ ಸ್ವಾಮೀಜಿ, ಸಿದ್ಧಗಂಗಾ ಮಠ

‘ಹಿಂದುಳಿದ ಪಟ್ಟಿಗೆ ಸೇರಿಸಲು ಹೋರಾಟ’

‘ವೀರಶೈವ ಲಿಂಗಾಯತ ಸಮಾಜದಲ್ಲಿ ತೀರಾ ಹಿಂದುಳಿದ ನಾಲ್ಕು ಜಾತಿಗಳಿಗೆ ರಾಜ್ಯದಲ್ಲಿ 1 ‘ಎ’ ಪ್ರವರ್ಗ 32 ಜಾತಿಗಳಿಗೆ 2 ‘ಎ’ ಪ್ರವರ್ಗ ಮೀಸಲಾತಿ 52 ಜಾತಿಗಳಿಗೆ ಹಿಂದುಳಿದ ವರ್ಗದ ಮಾನ್ಯತೆ ಕೇಂದ್ರದಲ್ಲಿ ಇಡೀ ಸಮಾಜವನ್ನು ಹಿಂದುಳಿದ ಪಟ್ಟಿಗೆ ಸೇರಿಸುವ ಕುರಿತು ಮಹಾಸಭಾ ಹೋರಾಟ ನಡೆಸಲಿದೆ’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಂಕರ ಬಿದರಿ ಹೇಳಿದರು.

‘ಸಮಾಜದ ಉಪಪಂಗಡಗಳ ಅಭಿವೃದ್ಧಿ ಸಂಸ್ಥೆಗಳ ಪದಾಧಿಕಾರಿಗಳಿಗೆ ಮಹಾಸಭಾದಲ್ಲಿ ಸೂಕ್ತ ಸ್ಥಾನ ನೀಡಲು 3 ತಿಂಗಳಲ್ಲಿ ಕ್ರಮವಹಿಸಲಾಗುವುದು. ರಾಜ್ಯದಲ್ಲಿ ಅಂದಾಜು 2 ಕೋಟಿಯಷ್ಟಿರುವ ಸಮಾಜದ ಜನರು ಮಹಾಸಭಾದ ಸದಸ್ಯರಾಗಬೇಕು ಎಂಬುದು ನಮ್ಮ ಆಶಯ’ ಎಂದರು.

‘ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಿ’

‘ಕೇಂದ್ರ ಸರ್ಕಾರವು ಜನವರಿಯಲ್ಲಿ ಜಾತಿಗಣತಿ ಜನಗಣತಿ ನಡೆಸಲಿದೆ. ಅದಕ್ಕೂ ಮುನ್ನ ಮಹಾಸಭಾ ಸಮಾಜದ ಪ್ರಮುಖರನ್ನು ಮಠಾಧೀಶರನ್ನು ಕರೆದು ಸಭೆ ನಡೆಸಿ ಧರ್ಮ ಮತ್ತು ಜಾತಿ ಕುರಿತು ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಬೇಕು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

‘ಏನೇ ತೀರ್ಮಾನ ತೆಗೆದುಕೊಂಡರೂ ಸಂವಿಧಾನ ಬದ್ಧವಾಗಿರಬೇಕು. ಶೇ 30ರಷ್ಟಿದ್ದ ವೀರಶೈವ ಲಿಂಗಾಯತರ ಜನಸಂಖ್ಯೆ ಶೇ 11ಕ್ಕೆ ಕುಸಿದಿದೆ. ನಮ್ಮಲ್ಲಿರುವ ಒಡಕೇ ಇದಕ್ಕೆ ಕಾರಣ. ನಾವೆಲ್ಲರೂ ಆಂತರಿಕವಾಗಿ ಆತ್ಮದ ಸಮೀಕ್ಷೆ ಮಾಡಿಕೊಳ್ಳಬೇಕು. ಕೋರ್ಟ್ ಮತ್ತು ಸಂವಿಧಾನ ಏನು ಹೇಳುತ್ತದೆ ಎಂದು ಅರ್ಥ ಮಾಡಿಕೊಂಡು ಹೋರಾಟ ನಡೆಸಬೇಕು’ ಎಂದರು.

‘ಲಿಂಗಾಯತ ಸನಾತನ ಹಿಂದೂ ಧರ್ಮದ ಪ್ರಮುಖ ಜನಾಂಗವಾಗಿದ್ದು ಇವರೆಲ್ಲರೂ ಹಿಂದೂಗಳೇ ಆಗಿದ್ದಾರೆ‌. ರಾಜ್ಯ ಸರ್ಕಾರ ನಡೆಸುವ ಸಮೀಕ್ಷೆಯಲ್ಲಿ ಧರ್ಮದ ಕುರಿತು ಗೊ‌ದಲಗಳಿದ್ದು ಕೆಲವರು ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಂಕಿ-ಅಂಶಗಳು ತಪ್ಪಾಗಿ ನಮೂದಾದರೆ ಸರ್ಕಾರ ವಿಶ್ವಾಸ ಕಳೆದುಕೊಳ್ಳುತ್ತದೆ. ಸಮೀಕ್ಷೆಗೂ ಮೊದಲು ಸರ್ಕಾರ ಗೊಂದಲ ಪರಿಹರಿಸಬೇಕು. ಇಲ್ಲವೇ ಹೊಸದಾಗಿ ಸಮೀಕ್ಷೆ ನಡೆಸಲು ಮುಂದಾಗಬೇಕು’ ಸಂಸದ ಜಗದೀಶ ಶೆಟ್ಟರ್ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.