ADVERTISEMENT

ಪ್ರಹ್ಲಾದ ಜೋಶಿ ಹುಬ್ಬಳ್ಳಿಗೆ: ಅದ್ಧೂರಿಗೆ ಸ್ವಾಗತ ಕೋರಿದ ಕಾರ್ಯಕರ್ತರು

ಕೇಂದ್ರ ಸಚಿವರಾದ ನಂತರ ಮೊದಲ ಬಾರಿ ಹುಬ್ಬಳ್ಳಿಗೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 7:30 IST
Last Updated 2 ಜೂನ್ 2019, 7:30 IST
ತಮ್ಮನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ಕಾರ್ಯಕರ್ತರತ್ತ ಕೈಬೀಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ–
ತಮ್ಮನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ಕಾರ್ಯಕರ್ತರತ್ತ ಕೈಬೀಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ–   

ಹುಬ್ಬಳ್ಳಿ: ಕೇಂದ್ರ ಸಚಿವರಾದ ನಂತರ ಇದೇ ಮೊದಲ ಬಾರಿಗೆ ತವರು ಜಿಲ್ಲೆಗೆ ಭಾನುವಾರ ಆಗಮಿಸಿದ ಸಂಸದ ಪ್ರಹ್ಲಾದ ಜೋಶಿ ಅವರಿಗೆ ಪಕ್ಷದ ಕಾರ್ಯಕರ್ತರು, ಮುಖಂಡರು ಅದ್ಧೂರಿ ಸ್ವಾಗತ ಕೋರಿದರು.

ಬೆಳಿಗ್ಗೆ 9.30ಕ್ಕೆ ಹುಬ್ಬಳ್ಳಿ ವಿಮಾಣ ನಿಲ್ದಾಣದಿಂದ ಹೊರಗೆ ಬಂದ ಅವರಿಗೆ ಜಯ ಘೋಷದ ಸ್ವಾಗತ ಕೋರಲಾಯಿತು. ಮಾಲಾರ್ಪಣೆ ಮಾಡಿ, ಹೂಗುಚ್ಛ ನೀಡಿ ನೆಚ್ಚಿನ ನಾಯಕನನ್ನು ಅಭಿನಂದಿಸಿದರು. ಅಲ್ಲಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಗೋಕುಲ ರಸ್ತೆಯಲ್ಲಿ ಅಲ್ಲಲ್ಲಿ ನಿಂತಿದ್ದ ಬಿಜೆಪಿ ಕಾರ್ಯಕರ್ತರು ಜೋಶಿ ಅವರನ್ನು ಸ್ವಾಗತಿಸಿದರು. ತಿಲಕವಿಟ್ಟು, ಆರತಿ ಬೆಳಗಿದರು. ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ತ್ರಿನೇತ್ರ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವರು ಪೂಜೆ ಸಲ್ಲಿಸಿದರು. ಅಲ್ಲಿಂದ ಸಿಂಧೂರ ಲಕ್ಷಣ ವೃತ್ತಕ್ಕೆ ಬಂದು ಸಿಂಧೂರ ಲಕ್ಷ್ಮಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಸವವನದಲ್ಲಿರುವ ಬಸವಣ್ಣನವರ ಮೂರ್ತಿ, ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಆರ್‌ಎಸ್‌ಎಸ್ ಕಚೇರಿಗೆ ಕೇಶವ ಕುಂಜಕ್ಕೆ ತೆರಳಿದ ಅವರು ಅನುಭವ ಮಂಟಪದಲ್ಲಿರುವ ಭಾರತಾಂಬೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಹೆಡಗೇವಾರ್ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಿದರು.

ಸಚಿವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಆರ್‌ಎಸ್‌ಎಸ್ ಮುಖಂಡರು ಸಿಹಿ ತಿನಿಸಿ ಶುಭಾಶಯ ಕೋರಿದರು. ಸಂಘದ ಪ್ರಾಂತ ಕಾರ್ಯದರ್ಶಿ ರಾಘವೇಂದ್ರ ಕಾಗವಾಡ ಮಾತನಾಡಿ, ಸಂಘದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಬೆಳೆದ ಜೋಶಿ ಅವರು ಇಂದು ಕೇಂದ್ರ ಸಚಿವರಾಗಿದ್ದಾರೆ. ಇದು ಸಂಘದ ಎಲ್ಲ ಸ್ವಯಂ ಸೇವಕರಿಗೆ ಹೆಮ್ಮೆ– ಅಭಿಮಾನದ ವಿಷಯವಾಗಿದೆ. ಸಂಘ ನೀಡಿದ ಸಂಸ್ಕಾರದ ಜೊತೆಗೆ ತಮ್ಮ ಪರಿಶ್ರಮದ ಮೂಲಕ ಅವರು ಬೆಳೆದಿದ್ದಾರೆ ಎಂದರು.

ದೇಶದ ಜನರು ಎರಡನೇ ಬಾರಿಗೆ ನರೇಂದ್ರ ಮೋದಿ ಅವರಿಗೆ ದೇಶದ ಚುಕ್ಕಾಣಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಜೋಶಿ ಅವರ ಜವಾಬ್ದಾರಿ ನೂರು ಪಟ್ಟು ಬೆಳೆದಿದೆ. ದೇಶ ಹಾಗೂ ರಾಜ್ಯದ ಪ್ರಗತಿಗೆ ಅವರು ಕೆಲಸ ಮಾಡಲಿ ಎಂದು ಹೇಳಿದರು.

ಶಾಸಕರಾದ ಜಗದೀಶ್ ಶೆಟ್ಟರ್, ಅರವಿಂದ ಬೆಲ್ಲದ, ಮುಖಂಡರಾದ ಸುಧೀರ್ ಸರಾಫ್, ಶಿವು ಮೆಣಸಿನಕಾಯಿ, ಶಿವಾನಂದ ಮುತ್ತಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.